ಬೆಂಗಳೂರು: `ರಂಗತೋರಣ ತಂಡವು ಅಕ್ಟೋಬರ್ 25 ರಿಂದ 27 ರವರೆಗೆ ಬಳ್ಳಾರಿಯ ಜೋಳದ ರಾಶಿ ಸಭಾಂಗಣದಲ್ಲಿ ರಾಜ್ಯ ವಿದ್ಯಾರ್ಥಿ ನಾಟಕೋತ್ಸವವನ್ನು ಆಯೋಜಿಸಿದೆ' ಎಂದು ತಂಡದ ಕಾರ್ಯದರ್ಶಿ ಪ್ರಭುದೇವ ಕಪ್ಪಗಲ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಮೂರು ದಿನಗಳ ಈ ನಾಟಕೋತ್ಸವದಲ್ಲಿ ವಿವಿಧ ಕಾಲೇಜಿನ ಪಿಯುಸಿ, ಪದವಿ, ಸ್ನಾತಕೋತ್ತರ, ಬಿಇಡಿ, ಕಾನೂನು, ವೈದ್ಯಕೀಯ, ಎಂಜಿನಿಯರಿಂಗ್, ಪಾಲಿಟೆಕ್ನಿಕ್, ಆಯುರ್ವೇದ, ಕೃಷಿ ಮತ್ತಿತರ ಪದವಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹುದು. ಪ್ರತಿ ಕಾಲೇಜಿನ ತಂಡದಲ್ಲಿ ಗರಿಷ್ಠ 20 ಜನರಿಗೆ ಅವಕಾಶವಿದ್ದು, ಕಾಲೇಜಿನ ಗುರುತಿನ ಪತ್ರವನ್ನು ಮುಖ್ಯವಾಗಿ ಹೊಂದಿರಬೇಕು' ಎಂದರು.
`ತಂಡಗಳು ರಂಗತೋರಣ, ಬಳ್ಳಾರಿ ಹೆಸರಿಗೆ ರೂ1,000 ಡಿಡಿಯೊಂದಿಗೆ ಪ್ರಾಂಶುಪಾಲರ ಅನುಮತಿ ಪತ್ರ, ತಂಡದ ವಿವರಗಳನ್ನು ಅಕ್ಟೋಬರ್ 15 ರೊಳಗೆ ಸಲ್ಲಿಸಬೇಕು. ಈ ಉತ್ಸವದಲ್ಲಿ ಉತ್ತರ ಕರ್ನಾಟಕದ ಬಹುತೇಕ ಕಾಲೇಜುಗಳು ಭಾಗವಹಿಸುತ್ತವೆ. ಆದರೆ, ದಕ್ಷಿಣ ಕರ್ನಾಟಕದ ಕಾಲೇಜುಗಳು ಭಾಗವಹಿಸಬೇಕು ಎಂಬ ಆಶಯವಿದೆ' ಎಂದು ಹೇಳಿದರು.
ವಿವರಗಳಿಗೆ ಸಂಪರ್ಕಿಸಿ: 94498 21947, 99160 009426.