ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿ ಅವರು ಭ್ರಷ್ಟಾಚಾರದ ವಿರುದ್ಧ ರಥಯಾತ್ರೆ ಘೋಷಿಸಿರುವುದು ಸರಿಯಷ್ಟೆ.
ಈ ಹೋರಾಟ ಮೊದಲು ಅವರದೇ ಪಕ್ಷದ ಭ್ರಷ್ಟಾಚಾರ ಮತ್ತಿತರ ಹಗರಣಗಳಿರುವ ರಾಜ್ಯ ಸರ್ಕಾರಗಳ ವಿರುದ್ಧ ಧ್ವನಿ ಎತ್ತುವ ದಿಟ್ಟತನದ ಯಾತ್ರೆಯಾಗಬೇಕು. ಇಲ್ಲದಿದ್ದರೆ ಈ ಹಿಂದೆ ರಾಜಕೀಯ ಉದ್ದೇಶಗಳಿಗಾಗಿ ಹಲವಾರು ಯಾತ್ರೆಗಳನ್ನು ನಡೆಸಿದಂತೆಯೇ ಇದೂ ಆಗುವ ಸಂಭವವಿರುತ್ತದೆ.
ಬಿ.ಜೆ.ಪಿ.ಯ ಅಧ್ಯಕ್ಷ ನಿತಿನ್ ಗಡ್ಕರಿಯವರು ಭ್ರಷ್ಟರ ವಿರುದ್ಧ ಧ್ವನಿ ತೆಗೆಯುವುದು ಎಂದರೆ ಯು.ಪಿ.ಎ. ವಿರುದ್ಧ ಮಾತ್ರ ಎಂದುಕೊಂಡಂತಿದೆ. ಅವರು ಪಕ್ಷದ ಅಕ್ರಮ ಗಣಿಗಾರಿಕೆ ನಡೆಸಿದ ಆರೋಪ ಹೊತ್ತವರು ನೀಡುವ ಸನ್ಮಾನ ಸ್ವೀಕರಿಸಿ ಸಂತೃಪ್ತ ಭಾವದಿಂದ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ. ಅಡ್ವಾಣಿ ಅವರ ಧ್ವನಿ ಮೊದಲು ಇವರ ವಿರುದ್ಧ ಇರಬೇಕಾಗುತ್ತದೆ.
ಬಳ್ಳಾರಿ, ಚಿತ್ರದುರ್ಗ, ತುಮಕೂರು ಹೀಗೆ ಅನೇಕ ಜಿಲ್ಲೆಗಳಲ್ಲಿ ಅಕ್ರಮ ಗಣಿಗಾರಿಕೆ ಆಗಿದೆ ಎಂದು ತನಿಖಾ ಸಂಸ್ಥೆಗಳು, ನ್ಯಾಯಾಲಯಗಳು ಮೊಕದ್ದಮೆಗಳನ್ನು ದಾಖಲಿಸಿ ಬಂಧನದ ಪ್ರಕರಣಗಳು ನಡೆದಿರುವಾಗ ಅಡ್ವಾಣಿ ಅವರ ಹೋರಾಟದ ಧ್ವನಿ ಇದರ ವಿರುದ್ಧ ಇರಬೇಕು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಅನೇಕ ಆಪಾದನೆಗಳನ್ನು ಹೊತ್ತಿದ್ದರೂ, ಚುನಾವಣೆ ಹಾಗೂ ಪಕ್ಷದ ಸಂಘಟನೆಗೆ ಇವರ ನೇತೃತ್ವ ಬೇಕೆಂದು ಬೊಬ್ಬೆ ಹಾಕುವ ಜನರಿಗೆ ಅಡ್ವಾಣಿ ಅವರು ಕಠಿಣ ಉತ್ತರವನ್ನು ನೀಡಬೇಕಾಗುತ್ತದೆ. ಗುಜರಾತ್, ಮಧ್ಯಪ್ರದೇಶ ಉತ್ತರಾಂಚಲ ರಾಜ್ಯಗಳಲ್ಲಿನ ಭ್ರಷ್ಟಾಚಾರ ಹಗರಣಗಳ ಬಗೆಗೂ ಮಾತನಾಡಬೇಕಿದೆ.