ಬೆಳಗಾವಿ: ‘ನಗರದ ಕೋಟೆ ಆವರಣದಲ್ಲಿರುವ ಜೈನ ಬಸದಿಯನ್ನು ಪ್ರಾಚ್ಯ ವಸ್ತು ಇಲಾಖೆ ನಿರ್ಲಕ್ಷಿಸಿದೆ. ಬಸದಿಯಲ್ಲಿ ಸಿಮೆಂಟ್, ಪೈಪ್ಗಳನ್ನು ಸಂಗ್ರಹಿಸಿಡಲಾಗಿದೆ’ ಎಂದು ಉಪಾಧ್ಯಾಯ ಜ್ಞಾನಸಾಗರ ಮಹಾರಾಜ ದೂರಿದರು. ‘ಅದ್ಭುತ ಶಿಲ್ಪಕಲೆಯನ್ನು ರಕ್ಷಿಸುವಲ್ಲಿ ಇಲಾಖೆ ವಿಫಲವಾಗಿದೆ. ಇದನ್ನು ಅಭಿವೃದ್ಧಿಪಡಿಸಿ ಪ್ರವಾಸಿ ತಾಣವಾಗಿಸಬೇಕು’ ಎಂದು ಅವರು ಆಗ್ರಹಿಸಿದರು. ‘ಈ ವಿಷಯವನ್ನು ಕೇಂದ್ರದ ಗೃಹ ಸಚಿವರ ಹಾಗೂ ಸೇನಾ ಮುಖ್ಯಸ್ಥರ ಗಮನಕ್ಕೆ ತರುತ್ತೇನೆ. ಕೂಡಲೇ ಈ ಬಗೆಗೆ ಪ್ರಾಚ್ಯ ವಸ್ತು ಇಲಾಖೆ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಜನರು ಇದರ ವಿರುದ್ಧ ಹೋರಾಟ ಮಾಡಲಿದ್ದಾರೆ’ ಎಂದು ಬುಧವಾರ ಅವರು ಸುದ್ದಿಗಾರರಿಗೆ ತಿಳಿಸಿದರು.
‘ಯಾವುದೇ ಧರ್ಮದ ಮಂದಿರವಿರಲಿ. ಅವುಗಳ ಬಗೆಗೆ ನಿರ್ಲಕ್ಷ್ಯ ವಹಿಸಬಾರದು. ಇಂತಹ ನಿರ್ಲಕ್ಷ್ಯದಿಂದ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ. ಬಸದಿಯನ್ನು ಅಭಿವೃದ್ಧಿ ಪಡಿಸಿದರೆ ಅದೊಂದು ಪ್ರವಾಸಿ ತಾಣವಾಗಲಿದೆ’ ಎಂದು ಅವರು ಹೇಳಿದರು. ‘ಯುವ ಜನರನ್ನು ದಾರಿ ತಪ್ಪಿಸಲಾಗುತ್ತಿದೆ. ಗುಟಕಾ, ಮದ್ಯದ ದಾಸರಾಗಿದ್ದಾರೆ. ಸರಿಯಾದ ಮಾರ್ಗದರ್ಶನದ ಕೊರತೆಯನ್ನು ಅವರು ಎದುರಿಸುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡುವ ಕೆಲಸ ಆಗಬೇಕಿದೆ’ ಎಂದು ಅವರು ತಿಳಿಸಿದರು.
‘ಅಮೆರಿಕಾ ಅಧ್ಯಕ್ಷ ಒಬಾಮಾ ಅವರು ಗಾಂಧೀಜಿಯವರ ಅಹಿಂಸೆ ಬಗೆಗೆ ಮಾತನಾಡುತ್ತಾರೆ. ಆದರೆ ಯುವಕರು ಅಂತಹ ಸಂತರ ಸಾಧನೆ ಬಗೆಗೆ ತಿಳಿದುಕೊಂಡಿಲ್ಲ. ಈ ಬಗೆಗೆ ಯುವಕರಲ್ಲಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ’ ಎಂದು ಅವರು ಹೇಳಿದರು. ‘ಧರ್ಮ ಕೇವಲ ಮೋಕ್ಷಕ್ಕಾಗಿ ಇಲ್ಲ, ಧರ್ಮ ಸಮಾಜದ ಹಿತಕ್ಕಾಗಿ ಇದೆ. ಮಕ್ಕಳು ಸಂಸ್ಕಾರ ರಹಿತರಾಗುತ್ತಿದ್ದಾರೆ. ತಂದೆ- ತಾಯಿಗಳು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು’ ಎಂದು ಅವರು ಸಲಹೆ ಮಾಡಿದರು.