ಬೀದರ್: ಬಸವಣ್ಣನವರ ಸಂದೇಶಗಳು ಮನುಕುಲದ ಏಳಿಗೆಯ ಸೂತ್ರಗಳಾಗಿವೆ ಎಂದು ಇಂಧನ ಸಚಿವೆ ಶೋಭಾ ಕರಂದ್ಲಾಜೆ ನುಡಿದರು.
ಫೆಬ್ರುವರಿ 5,6 ಮತ್ತು 7 ರಂದು ನಡೆಯಲಿರುವ ವಚನ ವಿಜಯೋತ್ಸವದ ಪ್ರಚಾರಾರ್ಥವಾಗಿ ಸಂಚರಿಸಲಿರುವ ಬಸವಜ್ಯೋತಿ ಯಾತ್ರೆಗೆ ನಗರದ ಶರಣ ಉದ್ಯಾನದಲ್ಲಿ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಬಸವಣ್ಣನವರ ತತ್ವಗಳು ಲಿಂಗಾಯತರಿಗೆ ಮಾತ್ರ ಸೀಮಿತವಲ್ಲ, ನಾಡಿನ ಎಲ್ಲ ವರ್ಗದ ಜನ ಶರಣರ ಮೌಲ್ಯ ಹಾಗೂ ಆದರ್ಶಗಳನ್ನು ಪಾಲಿಸುವ ಮೂಲಕ ಸುಸಂಸ್ಕೃತ ಸಮಾಜ ಕಟ್ಟಬೇಕು. 12ನೇ ಶತಮಾನದ ಕ್ರಾಂತಿ ನೆನೆಸಿಕೊಂಡು ಇಂದಿಗೂ ವಚನಗಳನ್ನು ಉಳಿಸಲು ಹೋರಾಡಬೇಕಾದದ್ದು ದುಃಖಕರ ಸಂಗತಿ. 900 ವರ್ಷಗಳ ಹಿಂದೆಯೇ ಜಾಗತಿಕ ಸಮಾನತೆ ಕೊಟ್ಟ ಅವರ ಮುಂದಾಲೋಚನೆ ಆಶ್ಚರ್ಯಕರವಾದದ್ದು ಎಂದು ಹೇಳಿದರು.
ವಚನ ಓದುವುದಕ್ಕಾಗಿಯಾದರೂ ಕನ್ನಡ ಕಲಿಯಬೇಕು. ಇಂಗ್ಲಿಷ್ ಓದಿ ಕನ್ನಡ ಓದದೇ ಇದ್ದರೆ ವಚನಗಳನ್ನು ಹೇಗೆ ಅರ್ಥ ಮಾಡಿಕೊಳ್ಳುವಿರಿ ಎಂದು ಯುವಕರನ್ನು ಪ್ರಶ್ನಿಸಿದರು. ವಚನಗಳನ್ನು ಅಧ್ಯಯನ ಮಾಡುವ ಮೂಲಕ ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವಂತೆ ಸಲಹೆ ಮಾಡಿದರು.
ವಚನ ವಿಜಯೋತ್ಸವ ಪ್ರಚಾರಾರ್ಥವಾಗಿ ಜ್ಯೋತಿಯಾತ್ರೆ ಆರಂಭಿಸಲಾಗಿದೆ. ಮನೆ ಮನೆಗೂ ವಚನಗಳನ್ನು ತಲುಪಿಸುವುದು ಯಾತ್ರೆಯ ಉದ್ದೇಶವಾಗಿದೆ ಎಂದು ಸಾನ್ನಿಧ್ಯ ವಹಿಸಿದ್ದ ಅಕ್ಕ ಅನ್ನಪೂರ್ಣ ಹೇಳಿದರು.
ಬಸವರಥ, ಚನ್ನಬಸವರಥ, ಅಕ್ಕನಾಗಮ್ಮರಥ ಮತ್ತು ಮಾಚಿದೇವರಥ ಹೆಸರಿನಲ್ಲಿ ಸಿದ್ಧಪಡಿಸಲಾದ ನಾಲ್ಕು ರಥಗಳು ಜಿಲ್ಲೆಯ ಐದೂ ತಾಲ್ಲೂಕುಗಳ 300 ಹಳ್ಳಿಗಳಿಗೆ ಸಂಚರಿಸಲಿವೆ. ಬಸವಾದಿ ಶರಣ ಮೌಲ್ಯಗಳನ್ನು ಮನ ಮನಕ್ಕೆ ಬಿತ್ತರಿಸಲಿವೆ ಎಂದರು.
ವಿಧಾನ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ ಕಲ್ಲೂರು, ಕರ್ನಾಟಕ ರಾಜ್ಯ ಮಹಿಳಾ ಸಹಕಾರ ಮಹಾಮಂಡಳ ಅಧ್ಯಕ್ಷೆ ಶೋಭಾ ಕರಂದ್ಲಾಜೆ, ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಮದಕಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯ ಡಾ. ಶೈಲೇಂದ್ರ ಬೆಲ್ದಾಳೆ ಉಪಸ್ಥಿತರಿದ್ದರು. ರಮೇಶ ಮಠಪತಿ ಸ್ವಾಗತಿಸಿ ನಿರೂಪಿಸಿದರು.