ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ

Last Updated 6 ಅಕ್ಟೋಬರ್ 2011, 12:40 IST
ಅಕ್ಷರ ಗಾತ್ರ

ಬಸವಣ್ಣನವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿರುವುದನ್ನು ಓದುಗರೊಬ್ಬರು ನನ್ನ ಗಮನಕ್ಕೆ ತಂದರು. ಬಸವಣ್ಣನವರು ಬೋಧಿಸಿದ್ದು ವೀರಶೈವ ಧರ್ಮವನ್ನೋ, ಲಿಂಗಾಯಿತ ಧರ್ಮವನ್ನೋ, ಎಂಬುದು ಈ ಚರ್ಚೆಯ ಕೇಂದ್ರ ಬಿಂದುವಾಗಿತ್ತು. ಪ್ರೊ. ಚಿದಾನಂದದಮೂರ್ತಿಯವರು ವೀರಶೈವ ಧರ್ಮ ಬಸವಪೂರ್ವ ಯುಗದಲ್ಲಿ ಇತ್ತು. ಈ ತತ್ವವನ್ನು ಚಲಾವಣೆಗೆ ತಂದ (ಬಸವ) ಒಬ್ಬ ಅನ್ವಯಿಕ ವಿಜ್ಞಾನಿ ಎಂದು ತಮ್ಮ ಆಧಾರಪೂರ್ವಕವಾಗಿ ವಾದಿಸಿದ್ದರು. ಇಷ್ಟೇ ಆಧಾರಪೂರ್ವಕವಾಗಿ ಪ್ರೊ. ಚಿದಾನಂದಮೂರ್ತಿಯವರ ವಾದವನ್ನು ಅಲ್ಲಗಳೆಯುತ್ತ `ಬಸವಣ್ಣ ಸ್ಥಾಪಿಸಿದ್ದ ಧರ್ಮ ವೀರಶೈವವಲ್ಲದೇ ಲಿಂಗಾಯತ ಧರ್ಮ ಎಂಬ ವಾದವನ್ನು ಡಾ. ಕಲಬುರ್ಗಿಯವರು ಮಂಡಿಸಿದ್ದರು~ ಎಂದು ನನ್ನ ಸ್ನೇಹಿತರಾದ ಎಚ್. ಎಸ್. ಶಿವಪ್ರಕಾಶ್‌ರವರು ಪ್ರಜಾವಾಣಿ ಪತ್ರಿಕೆಯ ಸೆಪ್ಟೆಂಬರ್ 16ನೇ ದಿನಾಂಕದಂದು `ಪ್ರತಿ ಸ್ಪಂದನ~ ಅಂಕಣದಲ್ಲಿ ಬರೆದಿದ್ದಾರೆ.

ಎಚ್. ಎಸ್. ಶಿವಪ್ರಕಾಶ್‌ರಂಥವರಿಗೆ ಬಸವಣ್ಣನವರನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂಬ ಪ್ರಶ್ನೆಯೇ ಉದ್ಭವಿಸಬಾರದಿತ್ತು. ಯಾಕೆಂದರೆ, ಬಸವಣ್ಣನದು ಪ್ರಜಾಧರ್ಮ, ವೀರಶೈವ ಸನಾತನ ಧರ್ಮ, ಸನಾತನವಾದ ವೀರಶೈವ ಧರ್ಮದಲ್ಲಿ ಮೇಲು, ಕೀಳು ಎಂಬ ತಾರ - ತಮ್ಯವಿದೆ, ವರ್ಣಾಶ್ರಮ ಧರ್ಮದ ವಾಸನೆಯಿದೆ. ಇಂಥ ಧರ್ಮವನ್ನು ಶಿವಪ್ರಕಾಶ್‌ರು ಖಂಡಿತ ಪುರಸ್ಕರಿಸಲು ಸಾಧ್ಯವಿಲ್ಲ. ಮೇಲಾಗಿ ಬಸವಪೂರ್ವ ಯುಗದಲ್ಲಿತ್ತು ಎಂದು ಹೇಳುವ ಈ ವೀರಶೈವ ಧರ್ಮದ ಉಲ್ಲೇಖ ಯಾವ ಶಿಲಾಲಿಪಿಯಲ್ಲಿಯೂ ಇಲ್ಲ. ಇದ್ದದ್ದು ಕೇವಲ ಲಿಂಗಾಯಿತರ ಕೀಳರಿಮೆ ಮಾತ್ರ.

`ವೀರಶೈವ~ ಎಂದೆನ್ನುವ ಪಂಚಾಚಾರ್ಯರು ವೇದಗಳನ್ನು ಅಭ್ಯಾಸ ಮಾಡುತ್ತಾರೆ. ತಮ್ಮ ಎಲ್ಲ ಕಾರ್ಯಕ್ರಮಗಳ ಪೂರ್ವದಲ್ಲಿ ವಟುಗಳಿಂದ ವೇದಘೋಷ ಮಾಡಿಸುತ್ತಾರೆ. ಅವರು ವೇದಪ್ರಮಾಣವನ್ನು ಮನ್ನಿಸುತ್ತಾರೆ. ಅದೇ ಲಿಂಗಾಯತ ಧರ್ಮವನ್ನು ಬೋಧಿಸಿದ ಬಸವಣ್ಣನವರು.

`ವೇದಕ್ಕೆ ಒರೆಯ ಕಟ್ಟುವೆ,
ಶಾಸ್ತ್ರಕ್ಕೆ ನಿಗಳನಿಕ್ಕುವೆ,
ತರ್ಕದ ಬೆನ್ನಭಾರನೆತ್ತುವೆ,
ಆಗಮದ ಮೂಗ ಕೊಯ್ಯುವೆ ನೋಡಯ್ಯಾ~
`ವೇದದಂತುಟ್ಟಲ್ಲ, ಶಾಸ್ತ್ರದಂತುಟಟ್ಟಲ್ಲ,
ಗೀತ ಮಾತಿನಂತುಟ್ಟಲ್ಲ ಕೇಳಯ್ಯಾ~

ಹೀಗೆ ವೇದ ಶಾಸ್ತ್ರ, ಪುರಾಣಗಳನ್ನು ಸಾರಾಸಗಟಾಗಿ ನಿಂದಿಸುವ ವಚನಗಳ ಲಿಂಗಾಯತ ಧರ್ಮ ಬೇರೆ, ವೇದಗಳ ಪ್ರಮಾಣ್ಯ ಮಾನ್ಯ ಮಾಡುವ ವೀರಶೈವ ಧರ್ಮ ಬೇರೆ.

ಡಾ. ಚಿದಾನಂದಮೂರ್ತಿಗಳು `ವೀರಶೈವ~ ವೆಂದರೂ ಒಂದೇ, ಲಿಂಗಾಯತರೆಂದರೂ ಒಂದೇ ಎಂಬ ವಿಚಾರವನ್ನು ಹರಿಬಿಟ್ಟಿದ್ದಾರೆ. `ತೋಳ ಹಾಗೂ ಕುರಿ~, ಎರಡೂ ಪ್ರಾಣಿ ಸೂಚಕ ಪದಗಳೇ, ಆದರೆ `ತೋಳ~ ಮತ್ತು `ಕುರಿ~ ಎಂದರೆ ಒಂದೇ ಎನ್ನಲಿಕ್ಕಾದೀತೆ? ನೀಲಗಂಗಯ್ಯಾ ಪೂಜಾರ ವಕೀಲರು ಹೇಳುವಂತೆ `ಬಸವಣ್ಣನವರ ಲಿಂಗಾಯತವು ಜಾತ್ಯಾತೀತತೆಯ ಪ್ರಯೋಗ ಶಾಲೆಯಾಗಿತ್ತು~.

ಡಾ. ಚಿದಾನಂದಮೂರ್ತಿಗಳಿಗೆ ಇತ್ತೀಚೆಗೆ ಹಿಂದೂ ಧರ್ಮದ ಭೂತ ಹಿಡಿದಿದೆ. ಒಂದು ವೇಳೆ ಲಿಂಗಾಯತರು `ಹಿಂದೂ~ ಗಳಲ್ಲವೆಂದರೆ, ಈ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಆ ಹಿಂದೂಗಳ ಕೈಗೆ ಈ ದೇಶದ ಆಡಳಿತ ಹೋಗುತ್ತದೆ ಎನ್ನುವ ಆತಂಕ ಇವರನ್ನು ಕಾಡುತ್ತಿದೆ. ಲಿಂಗಾಯತರು ಈ ದೇಶದಲ್ಲಿಯೇ ಹುಟ್ಟಿಬೆಳೆದವರು ಈ ದೇಶದಲ್ಲಿಯೇ ಹುಟ್ಟಿ ಬೆಳೆದ ಜೈನ, ಬೌದ್ಧ ಧರ್ಮಿಯರೂ ಹಿಂದೂಗಳಲ್ಲ. ಅವರೇನು ಈ ದೇಶಕ್ಕೆ ನಿಷ್ಠರಾಗಿಲ್ಲವೆ? `ಲಿಂಗಾಯತ~ರು ಹಿಂದೂಗಳಲ್ಲ ಎಂದಾಕ್ಷಣ ಅವರೇನು ರಾಷ್ಟ್ರವಿರೋಧಿಗಳಾಗುತ್ತಾರೆಯೇ?

ಶ್ರೀಲಂಕಾ, ಜಪಾನ್, ಚೈನಾದಲ್ಲಿರುವ ಬಹುಸಂಖ್ಯಾತರು ಬೌದ್ಧ ಧರ್ಮೀಯರು, ಅವರೆಲ್ಲ ತಮ್ಮ ತಮ್ಮ ದೇಶಗಳಿಗೆ ನಿಷ್ಠರಾಗಿಲ್ಲವೇ? ಇಲ್ಲವೇ ತಮ್ಮ ಧರ್ಮದ ಮೂಲವಾದ ಭಾರತಕ್ಕೆ ನಿಷ್ಠರಾಗಿದ್ದಾರೆಯೋ?

ವೀರಶೈವ ಧರ್ಮದ ಹೆಸರನ್ನು ಬದಲಾಯಿಸುವುದೇ ಜನವಿರೋಧಿಯಾದರೆ `ಲಿಂಗಾಯಿತ~ ಧರ್ಮದ ಹೆಸರನ್ನು ಬದಲಾಯಿಸುವುದೇ ಜನವಿರೋಧಿ. ವೀರಶೈವ ಎನ್ನುವುದು ಒಂದು ಮತದ ಹೆಸರಲ್ಲ. ಒಂದು ವ್ರತದ ಹೆಸರು. ಚೆನ್ನಬಸವಣ್ಣನವರ ಷಟಸ್ಥಳ ವಚನದಲ್ಲಿ `ದೇವ ನಾಮ ಸೊಗಸದು ಲಿಂಗಾಯತಂಗೆ~ ಎನ್ನುವ ವಾಕ್ಯ ಏನನ್ನು ಹೇಳುತ್ತದೆ? ಕೆರೆಯ ಪದ್ಮರಸನ `ದೀಕ್ಷಾಬೋಧೆ~ಯಲ್ಲಿ `ನೋಯದಂತಿರಿಸು ಲಿಂಗಾಯತದೊಳಗೆ~ ಎಂದು ಬಂದಿದೆ. `ನಾನು ಸಣ್ಣವನಿದ್ದಾಗ ನಮ್ಮ ಪ್ರದೇಶದಲ್ಲಿ (ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ) ವೀರಶೈವರೆಂದರೆ ಕೆಲವರಿಗೆ ಮಾತ್ರ ತಿಳಿಯುತ್ತಿತ್ತು. ಲಿಂಗಾಯತರೆಂದರೆ ಎಲ್ಲರಿಗೂ ತಿಳಿಯುತ್ತಿತ್ತು~ ಎಂದು ಡಾ. ಚಿದಾನಂದಮೂರ್ತಿಗಳು ತಮ್ಮ ಆತ್ಮಕಥೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ 1904 ರಲ್ಲಿ ಧಾರವಾಡದಲ್ಲಿ `ಶ್ರೀಮಧ್ವೀರಶೈವ ಮಹಾ ಸಭೆ~ (ಅದು ಮುಂದೆ ಅಖಿಲ ಭಾರತ ವೀರಶೈವ ಮಹಾಸಭೆಯಾಯಿತು ಆ ಮಾತು ಬೇರೆ) ಈ ವೀರಶೈವ ಪದ ಸುಶಿಕ್ಷಿತರಲ್ಲಿ ಬಳಕೆಗೆ ಬಂತು.

ಹೀಗೆ ಕಾಲದ ದೃಷ್ಟಿಯಿಂದ ಪ್ರಾಚೀನವೂ, ಬಳಕೆಯ ದೃಷ್ಟಿಯಿಂದ ಸಾರ್ವತ್ರಿಕವೂ, ತತ್ವದ ದೃಷ್ಟಿಯಿಂದ ಅರ್ಥಪೂರ್ಣವೂ ಆದ `ಲಿಂಗಾಯತ~ ಪದವೇ ಜನಪರವೂ ಆಗಿರುವುದು. ಹೋಮ, ಹವನ, ದೇವಾಲಯ, ಅರ್ಚಕ ಇತ್ಯಾದಿ ವೈದಿಕ ಗೋಜಲುಗಳಿಂದ ಪುರೋಹಿತಶಾಹಿ ವ್ಯವಸ್ಥೆಯ `ವೀರಶೈವ~ ಪದವು ಮತ್ತೆ ನಮ್ಮನ್ನು ಚಾತುರ್ವರ್ಣ ವ್ಯವಸ್ಥೆಗೆ ಕೊಂಡೊಯ್ಯುತ್ತದೆ. ವೈದಿಕ ಧರ್ಮದ ಪರಂಪರೆಗೆ ಒಯ್ಯುತ್ತದೆ.

ಪಂಚಾಚಾರ್ಯರ ವಿಚಾರಕ್ಕೆ ಚಂದಾದಾರರಾಗಿರುವ ಬಿ.ಜೆ.ಪಿ. ವಿಚಾರಧಾರೆಗೆ ಪಕ್ಕಾಗಿರುವ ಡಾ. ಚಿದಾನಂದಮೂರ್ತಿಗಳ ವಿಚಾರಕ್ಕೆ ಮನಸೋಲದೆ ಎಚ್. ಎಸ್. ಶಿವಪ್ರಕಾಶ್‌ ರವರು ಬಸವಣ್ಣನವರನ್ನು ಅರ್ಥೈಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT