ಕೃಷ್ಣರಾಜಪುರ: `ಕೆ.ಆರ್.ಪುರ ಹಳೆಯ ಬಡಾವಣೆ, ಹೊಸ ಬಡಾವಣೆ, ವಿವಿಧ ಬಡಾವಣೆಗಳ ಮೂಲಕ ಚರಂಡಿಯಲ್ಲಿ ಹರಿದ ನೀರು ಬಸವನಪುರ ರಸ್ತೆಯ ಚರಂಡಿಗಳಲ್ಲಿ ಸರಾಗವಾಗಿ ಹರಿಯದೆ ಕಲುಷಿತಗೊಂಡು ಹಲವು ಬಾರಿ ರಸ್ತೆಗೂ ಹರಿಯುತ್ತದೆ' ಎಂದು ನಿವಾಸಿಗಳು ದೂರಿದರು.
`ಸಂಗ್ರಹವಾದ ಕಲುಷಿತ ನೀರನ್ನು ತಂಬುಚೆಟ್ಟಿ ಪಾಳ್ಯದ ಸಂಸ್ಕರಣಾ ಘಟಕಕ್ಕೆ ಸೇರಿಸುವುದರಲ್ಲಿ ಜಲಮಂಡಳಿ ವಿಫಲವಾಗಿರುವುದರಿಂದ ರಸ್ತೆಯ ಇನ್ನೊಂದು ಬದಿ ತೆರೆದ ಹಾಸು ಚಪ್ಪಡಿಯಲ್ಲಿ ಸಂಗ್ರಹಗೊಳ್ಳುತ್ತದೆ. ಕಲುಷಿತ ನೀರಿನಲ್ಲಿ ವಿಷ ಜಂತುಗಳು ಸೇರಿಕೊಂಡು ಅನಾರೋಗ್ಯಕರ ಪರಿಸರದಲ್ಲಿ ಜೀವನ ಸಾಗಿಸಬೇಕಾಗಿದೆ' ಎಂದು ತಳ್ಳು ಬಂಡಿ ಹಣ್ಣಿನ ವ್ಯಾಪಾರಿ ನವೀನ್ ಬೇಸರ ವ್ಯಕ್ತಪಡಿಸಿದರು.
`ಚರಂಡಿಗಳಲ್ಲಿ ನೀರು ತುಂಬಿರುವುದರಿಂದ ಮನೆಯಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಈ ಭಾಗದಲ್ಲಿ ಸುಮಾರು 3,000 ಕ್ಕೂ ಅಧಿಕ ಜನಸಂಖ್ಯೆಯಿದ್ದು ಕೇಂಬ್ರಿಜ್ ಮತ್ತು ಅಮರಜ್ಯೋತಿ ಶಾಲೆಗಳಿವೆ. ಮಳೆಗಾಲದಲ್ಲಿ ರಸ್ತೆ ದಾಟಲು ಹರಸಾಹಸ ಪಡಬೇಕಾಗುತ್ತದೆ.
ಸಮಸ್ಯೆಯ ತೀವ್ರತೆಯ ಬಗ್ಗೆ ಜಲಮಂಡಳಿಗೆ ದೂರು ಕೊಟ್ಟಿದ್ದೆವು. ಒಂದು ವರ್ಷದ ಹಿಂದೆ ಜಲಮಂಡಳಿ ಅಧಿಕಾರಿಗಳು ಅವ್ಯವಸ್ಥೆಯನ್ನು ಪರಿಶೀಲಿಸಿದ್ದಾರೆ. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ' ಎಂದು ನಿವಾಸಿ ಸಿದ್ದಯ್ಯ ಅಳಲು ತೋಡಿಕೊಂಡರು.