ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸವಭೂಮಿಯಲ್ಲಿ ಲಿಂಗಾಯತರ ಸೆಣಸಾಟ

Last Updated 9 ಏಪ್ರಿಲ್ 2013, 8:57 IST
ಅಕ್ಷರ ಗಾತ್ರ

ಹುನಗುಂದ: ಕರ್ನಾಟಕಕ್ಕೆ ದಕ್ಷ ಮುಖ್ಯಮಂತ್ರಿಯನ್ನು ಕೊಟ್ಟ ಹುನಗುಂದ ತಾಲ್ಲೂಕು ಕಾಯಂ ಲಿಂಗಾಯತ ಸಮುದಾಯದವರನ್ನೆ ಶಾಸಕರನ್ನಾಗಿ ಆರಿಸಿದ ಕ್ಷೇತ್ರ. ಬಣಜಿಗ, ಜಂಗಮ, ಕುರುಹಿನಶೆಟ್ಟಿ, ರೆಡ್ಡಿ ಮತ್ತು ಪಂಚಮಸಾಲಿ ಉಪಜಾತಿ ಲಿಂಗಾಯತರು ಪ್ರಾಬಲ್ಯ ಮೆರೆದ ಕ್ಷೇತ್ರವಿದು. ಪಂಚಮಸಾಲಿಗಳ ನಂತರ ಕುರುಬ ಸಮಾಜ ಮತ್ತು ಮುಸ್ಲಿಂರು ಅಧಿಕವಾಗಿದ್ದರೂ ಒಮ್ಮೆಯೂ ಅವರು ಶಾಸಕರಾಗಿಲ್ಲ. ಆದರೆ, ಕಡಿಮೆ ಸಂಖ್ಯೆಯಲ್ಲಿರುವ ರೆಡ್ಡಿ ಸಮಾಜದ ಇಬ್ಬರು (ನಾಗರಾಳ ಮತ್ತು ದೊಡ್ಡನಗೌಡ) ಈವರೆಗೆ ಶಾಸಕರಾಗಿದ್ದಾರೆ.

1957ರ ಮೊದಲ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದ ಎಸ್.ಆರ್.ಕಂಠಿ ಸಚಿವರಾಗಿ ಮತ್ತು ಕೆಲವು ತಿಂಗಳು ಮುಖ್ಯಮಂತ್ರಿಯಾಗಿ 1971ರವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಕಂಠಿಯವರ ವಿರುದ್ಧ ಪ್ರತಿ ಭಾರಿ ಸ್ಪರ್ಧಿಸುತ್ತಿದ್ದ ಸೂಳೇಭಾವಿಯ `ಮಾತಿನ ಮಾಂತ್ರಿಕ' ಜಿ.ಪಿ.ನಂಜಯ್ಯನಮಠ ಅವರು ಕಂಠಿಯವರ ನಿಧನಾನಂತರ ಒಂದು ವರ್ಷ ಶಾಸಕರಾಗಿದ್ದರು. 1972 ರಿಂದ 78 ರ ವರೆಗೆ ಎಸ್.ಬಿ.ನಾಗರಾಳ ಕಾಂಗ್ರೆಸ್‌ನಿಂದಲೇ ಗೆದ್ದು ಶಾಸಕ ಮತ್ತು ಸಚಿವರಾಗಿ ಕಾರ್ಯ ಮಾಡಿದರು. ಮತ್ತೆ ಕೆಪಿಸಿಸಿ ಅಧ್ಯಕ್ಷರಾಗಿಯೂ ಸೇವೆ ಮಾಡಿ ದರು.

1972ರ ಚುನಾವಣೆಯಲ್ಲಿ ನಾಗರಾಳರ ವಿರುದ್ಧ ಸ್ಪರ್ಧಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಇಳಕಲ್‌ನ ಎಸ್.ಎಸ್.ಕವಿಶೆಟ್ಟಿ 1978ರಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದು 1983ರವರೆಗೆ ಶಾಸಕರಾದರು. ಮೊದಲ ಬಾರಿಗೆ ಕಾಂಗ್ರೆಸ್ಸೇತರ ಪಕ್ಷ ಜನತಾದಳದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾದ ಎಸ್.ಎಸ್.ಕಡಪಟ್ಟಿ 1983 ರಿಂದ 1989 ರ ವರೆಗೆ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜನತಾದಳ ನೇತೃತ್ವದ ಹೆಗೆಡೆ ಸರ್ಕಾರದಲ್ಲಿ ಪ್ರಮುಖರಾಗಿದ್ದ ಇವರು ಮುತ್ಸದ್ದಿ ನಾಯಕ ರಾಗಿಯೂ ಹೆಸರು ಗಳಿಸಿದ್ದರು.

ಜನತಾದಳದ ಆಡಳಿತದ ಹಾದಿಗೆ ಬಲವಾದ ಬ್ರೆಕ್ ಕೊಟ್ಟ `ಜವಾರಿ'ತನಕ್ಕೆ ಸಾಕ್ಷಿಯಾಗಿದ್ದ ಎಸ್.ಆರ್.ಕಾಶಪ್ಪನವರ 1989ರ ನಿರ್ಣಾ ಯಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು 2003ರ ತನಕ ಶಾಸಕರಾಗಿದ್ದರು ಮತ್ತು ಕೆಲವು ವರ್ಷ ಕೃಷ್ಣ ಸಂಪುಟದಲ್ಲಿ ಸಚಿವರಾಗಿಯೂ ಕಾರ್ಯ ಮಾಡಿದರು. ಅವರ ಅಕಾಲಿಕ ನಿಧನಾ ನಂತರ ಅವರ ಪತ್ನಿ ಗೌರಮ್ಮ 2003 ರಲ್ಲಿ ಉಪಚುನಾವಣೆಯಲ್ಲಿ ಅದೇ ಕಾಂಗ್ರೆಸ್‌ನಿಂದ ಗೆದ್ದರು. ಆದರೆ, 2004ರ ಸಾರ್ವತ್ರಿಕ ಚುನಾ ವಣೆಯಲ್ಲಿ ಪರಾಭವಗೊಂಡರು.

2003ರ ಉಪ ಚುನಾವಣೆಯಲ್ಲಿ ಬಿಜೆಪಿ ಅಧಿಕ ಮತಗಳಿಕೆ ಮಾಡಿದ ಆಧಾರದ ಮೇಲೆಯೋ ಏನೋ ಪಕ್ಕದ ಲಿಂಗಸೂರು ತಾಲ್ಲೂಕಿನ ಲೆಕ್ಕಿಹಾಳದ ದೊಡ್ಡನಗೌಡ ಪಾಟೀಲ ಬಿಜೆಪಿ ಖಾತೆ ತೆರೆದು 2004ರಲ್ಲಿ ಶಾಸಕರಾದರು. ಮತ್ತೆ 2008ರಲ್ಲಿ ಪುನರಾಯ್ಕೆಗೊಂಡರು.
ಇದೇ ಮೇ 5 ರಂದು ನಡೆಯುವ ಚುನಾವಣೆ ಯಲ್ಲಿ ದೊಡ್ಡನಗೌಡ ಪಾಟೀಲ ಹ್ಯಾಟ್ರಿಕ್ ಸಾಧಿಸಲು ಮುಂದಾಗಿದ್ದಾರೆ. ಆದರೆ, ಕಳೆದ ಬಾರಿ ಕೇವಲ 5069 ಮತಗಳ ಅಂತರದಿಂದ ಪರಾಭವಗೊಂಡ ಕಾಂಗ್ರೆಸ್‌ನ ವಿಜಯಾನಂದ ಕಾಶಪ್ಪನವರ ಬಹುತೇಕ ಸ್ಪರ್ಧೆ ನೀಡುವುದು ಖಚಿತವಾಗಿದೆ.

ಮೊದಲಿನಿಂದಲೂ ರೆಡ್ಡಿ (ನಾಗರಾಳ), ಜಂಗಮ (ಎಸ್.ಎಂ.ಪಾಟೀಲ), ಜಿ.ಪಿ.ಪಾಟೀಲ ಮತ್ತು ಎಂ.ಎಸ್.ಪಾಟೀಲ (ಪಂಚಮಸಾಲಿ), ಕುರುಬ (ಸಿದ್ದಣ್ಣ ಉಂಡೋಡಿ) ಸಮುದಾಯದವರು ಈ ಕ್ಷೇತ್ರದಲ್ಲಿ ಶಾಸಕರಾಗಲು ಪೈಪೋಟಿ ನಡೆಸುತ್ತ ಬಂದಿದ್ದಾರೆ. ಆದರೆ, ಸ್ಥಾನ ಸಿಕ್ಕಿದ್ದು ರೆಡ್ಡಿ, ಜಂಗಮ, ಬಣಜಿಗ, ಕುರಹಿನ ಶೆಟ್ಟಿ ಮತ್ತು ಪಂಚಮಸಾಲಿಗಳಿಗೆ ಮಾತ್ರ. ಇವರೆಲ್ಲರೂ ಲಿಂಗಾಯತ ಒಳಪಂಗಡದವರು.

ಎರಡು ಅವಧಿಯ ಅಧಿಕಾರ ನಡೆಸಿ ಬಿಜೆಪಿ ಒಟ್ಟಾಗಿ ಚುನಾವಣೆಯ ಹಾದಿಯಲ್ಲಿದೆ ಎನ್ನಲಾ ಗಿದೆ. ಕಾಂಗ್ರೆಸ್‌ನಲ್ಲಿ ಎಸ್.ಆರ್.ಕಾಶಪ್ಪನವರ ಕಾಲ ಮತ್ತು ಕಳೆದ ಒಂದು ದಶಕದಲ್ಲಿ ಸಾಕಷ್ಟು ಭಿನ್ನವಾಗಿ ಕಾಣಿಸಿಕೊಂಡ ಕೆಲ ಮುಖಂಡರು ಮತ್ತೆ ಯಾವ ಆಟ ಆಡುತ್ತಾರೆ. ಅದರ ಪ್ರತಿಫಲ ಏನು? ಎಂಬುದು ನಿಗೂಢ. ರಾಜ್ಯ ರಾಜಕಾರಣದ ಗಾಳಿಯ ಪ್ರಭಾವ ಹೇಗಾಗಬಹುದು, ಈಚೆಗಷ್ಟೇ ಸ್ಥಳೀಯ ಸಂಸ್ಥೆಗಳು ಮತ್ತು ಹಿಂದಿನ ತಾಪಂ, ಜಿಪಂ ಇತರ ಚುನಾವಣೆಯಲ್ಲಿ ಪಾರುಪತ್ಯ ಮೆರೆದ ವಿಜಯಾನಂದರ ಗೆಲುವಿನ ಹಾದಿಗೆ ತೊಡಕುಗಳೇನು ಎಲ್ಲವೂ ಕಾಲವೇ ನಿರ್ಧರಿಸಲಿದೆ.

ಬಿಜೆಪಿಯ ಭಾಗವಾಗಿ ಹೊರಬಂದು ತಲೆ ಎತ್ತಿದ ಕೆಜಿಪಿಯಿಂದ ಇಳಕಲ್‌ನ ಹಿರಿಯ ರಾಜ ಕಾರಣಿ ಜಿ.ಪಿ.ಪಾಟೀಲ ಕಣಕ್ಕಿಳಿದಿದ್ದಾರೆ. ಈಗಾಗಲೇ ಮೂರು ಬಾರಿ ಸ್ಪರ್ಧಿಸಿ ಪರಾಭವಗೊಂಡ ಇವರೂ ಕೂಡ ಪಂಚಮಸಾಲಿ ಎಂಬುದು ಗಮನಿಸುವ ವಿಚಾರ. ಮೇಲಿನ ಪ್ರಮುಖ ಜಾತಿ- ಸಮುದಾಯದವರು ನಿಂತಿದ್ದನ್ನು ಬಿಟ್ಟು ಮುಸ್ಲಿಂ ಮತ್ತು ಇತರ ಸಮು ದಾಯದವರು ಪಕ್ಷೇತರರು ನಿಂತರು ನಿಜ. ಯಾವುದೇ ಗಣನೀಯ ಮತಗಳನ್ನು ಪಡೆಯ ಲಿಲ್ಲ. ಅವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬುದು ಸ್ಪಷ್ಟವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT