ಬೀದರ್: ಮಹಾಶಿವರಾತ್ರಿಯ ಪ್ರಯುಕ್ತ ಜಿಲ್ಲಾ ಲಿಂಗಾಯತ ಸಮಾಜ ಹಾಗೂ ರಾಷ್ಟ್ರೀಯ ಬಸವ ದಳದಿಂದ ನಗರದ ಬಸವಮಂಟಪದಲ್ಲಿ ಸೋಮವಾರ ಸಾಮೂಹಿಕ ಇಷ್ಪಲಿಂಗಪೂಜೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನೂರಾರು ಜನ ಶರಣ ಶರಣಿಯರು ಸಾಮೂಹಿಕ ಇಷ್ಟಲಿಂಗಪೂಜೆಯಲ್ಲಿ ಪಾಲ್ಗೊಂಡಿದ್ದರು.
ಮಹಾಶಿವರಾತ್ರಿಯಂದು ಸಮಾನತೆಯ ಕುರುಹು ಆಗಿರುವ ಇಷ್ಟಲಿಂಗವನ್ನು ಪೂಜಿಸುವ ಮೂಲಕ ಎಲ್ಲರು ಶಿವನಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಸಾನ್ನಿಧ್ಯ ವಹಿಸಿದ್ದ ಮಾತೆ ನಿಶ್ಚಲಾಂಬ ಹೇಳಿದರು.
ಕೆಲವರು ಶಿವರಾತ್ರಿಯನ್ನು ಯಾಂತ್ರಿಕವಾಗಿ ಆಚರಿಸಿ ಮೂಢ ಸಂಪ್ರದಾಯವನ್ನು ಮತ್ತೆ ಜಾರಿಗೆ ತರುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಚನ್ನಯ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜಿಲ್ಲಾ ಲಿಂಗಾಯತ ಸಮಾಜದ ಅಧ್ಯಕ್ಷ ಕುಶಾಲರಾವ ಪಾಟೀಲ್ ಖಾಜಾಪುರ ಅಧ್ಯಕ್ಷತೆ ವಹಿಸಿದ್ದರು. ಲಿಂಗಾಯತ ಧರ್ಮ ಮಹಾಸಭಾ ಉಪಾಧ್ಯಕ್ಷ ಶಿವರಾಜ ಪಾಟೀಲ್ ಅತಿವಾಳ್, ಪ್ರಮುಖರಾದ ನಾಗಶೆಟ್ಟಿ ದಾಡಗಿ, ಗಂಗಶೆಟ್ಟಿ ಪಾಟೀಲ್, ರಾಜೇಂದ್ರ ಪಾಟೀಲ್, ಸಂಜುಕುಮಾರ ಪಾಟೀಲ್, ಡಾ. ಸತೀಶ ಬಿರಾದಾರ್, ಮನ್ಮಥಯ್ಯ ಸ್ವಾಮಿ, ಮಲ್ಲಿಕಾರ್ಜುನ ಟೇಲರ್, ಗಣಪತರಾವ ಬಿರಾದಾರ್, ಮಂಜುಳಾ, ವಚನಸುಧಾ, ಕನ್ನಡಾಂಬೆ ಮೂಲಗೆ, ಶಾಂತಾದೇವಿ ಬಿರಾದಾರ್ ಹಾರೂರಗೇರಿ, ಕಾಶಿನಾಥ ಸೂರ್ಯವಂಶಿ ಮತ್ತಿತರರು ಉಪಸ್ಥಿತರಿದ್ದರು.
ಚಿದ್ರಿ ಹಿರೇಮಠದಲ್ಲಿ ಇಂದಿನಿಂದ ಜಾತ್ರೆ
ಬೀದರ್: ನಗರದ ಹೊರವಲಯದ ಚಿದ್ರಿ ಹಿರೇಮಠದಲ್ಲಿ ಫೆಬ್ರುವರಿ 21 ರಿಂದ 23 ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ.
ಫೆಬ್ರುವರಿ 21 ರಂದು ಪಾದಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಫೆಬ್ರುವರಿ 22 ರಂದು ಬೆಳಿಗ್ಗೆ ರುದ್ರಾಭಿಷೇಕ, ಸಂಜೆ ಭಜನೆ ಕಾರ್ಯಕ್ರಮ ಜರುಗಲಿವೆ. 23 ರಂದು ಬೆಳಿಗ್ಗೆ 7 ಗಂಟೆಗೆ ಪಲ್ಲಕ್ಕಿ ಉತ್ಸವ, ಅಗ್ನಿ ಪೂಜೆ ನಂತರ ಧರ್ಮಸಭೆ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚಿದ್ರಿ ಮಠದ ಪ್ರಮುಖರು ಮನವಿ ಮಾಡಿದ್ದಾರೆ.