ಹಾವೇರಿ: ‘ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾದಂಬರಿಕಾರ ದಿ. ಬಸವರಾಜ ಕಟ್ಟಿಮನಿ ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪನೆ ಮಾಡಬೇಕು’ ಎಂದು ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮಾಜದ ಕೂಡಲಸಂಗಮದ ಬಸವಜಯ ಮೃತ್ಯುಂಜಯ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದರು.
ಜಿಲ್ಲೆಯ ರಾಣೆಬೆನ್ನೂರಿನ ಬಸವೇಶ್ವರ ವಿದ್ಯಾಸಂಸ್ಥೆಯ ಮೃತ್ಯುಂಜಯ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ರಜತ ಮಹೋತ್ಸವ, ವಿವೇಕಾನಂದ ಸಾರ್ವಜನಿಕ ಗ್ರಂಥಾಲಯ, ಸಭಾಮಂಟಪದ ಉದ್ಘಾಟನೆ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ದಿ. ಕಟ್ಟಿಮನಿ ಅವರ ಸ್ಮರಣಾರ್ಥ ಪ್ರತಿಷ್ಠಾನ ಮಾಡುವಂತೆ ಈಗಾಗಲೇ ತಾವು ಮುಖ್ಯಮಂತ್ರಿಗಳಿಗೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಿಗೆ ಪತ್ರ ಬರೆದಿರುವುದಾಗಿ ತಿಳಿಸಿದ ಶ್ರೀಗಳು, ತದನಂತರದಲ್ಲಿಯೂ ಈ ಕುರಿತು ಸಂಬಂಧಿಸಿದ ಸಚಿವರುಗಳ ಜತೆ ಮಾತನಾಡುವುದಾಗಿ ತಿಳಿಸಿದರು.
ವೀರಕ್ತಮಠದ ಗುರುಭಸವ ಸ್ವಾಮೀಜಿ ಸಾನ್ನಿಧ್ಯವನ್ನು, ಸಂಸ್ಥೆಯ ಅಧ್ಯಕ್ಷ ಪ್ರೊ.ಎಂ.ಬಿ.ಬಿಜಾಪುರ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಅಧ್ಯಕ್ಷ ಮಂಜುನಾಥ ಓಲೇಕಾರ, ಸಮಾಜದ ರಾಜ್ಯ ಯುವ ಘಟಕದ ಅಧ್ಯಕ್ಷ ರಾಜಶೇಖರ ಮೆಣಸಿನಕಾಯಿ, ಸಮಾಜದ ಮುಖಂಡರಾದ ನಿಂಗಪ್ಪ ಕೊಂಬಳಿ ಮಾತನಾಡಿದರು. ನ್ಯಾಯವಾದಿ ಎ.ಎಂ.ನಾಯಕ, ಕೆಎಂಎಫ್ ನಿರ್ದೇಶಕ ವಿರೂಪಾಕ್ಷ ಬಿಜಾಪುರ, ಗ್ರಂಥಾಲಯ ಇಲಾಖೆಯ ಆರ್.ಎಫ್.ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ.ಪ್ರೇಮಾ, ಎಂ.ಎಚ್.ಪಾಟೀಲ, ಸುವರ್ಣಮ್ಮ ಪಾಟೀಲ, ಶಕುಂತಲಮ್ಮ ಜಂಬಗಿ, ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಭಾರತಿ ಜಂಬಗಿ, ವಿ.ಆರ್.ಹಿರೇಗೌಡ್ರ, ಜಿ.ಪಂ.ಸದಸ್ಯ ಸಂತೋಷಕುಮಾರ ಪಾಟೀಲ, ರೇವಣಸಿದ್ದಯ್ಯ ಆರಾಧ್ಯಮಠ, ನಾಗರಾಜ ಟಿ.ನೆಲವಾಗಿಲ, ಗದಿಗೆಪ್ಪ ಹೊಟ್ಟಿಗೌಡ್ರ, ದ್ರಾಕ್ಷಾಣಿಯಮ್ಮ ಹರಪನಹಳ್ಳಿ, ಪಾರ್ವತಮ್ಮ ಬೆನಕನಕೊಂಡ, ಕುಮಾರ ಜಂಬಗಿ, ಗಾಯತ್ರಿ ಕುರವತ್ತಿ ಮತ್ತಿತರರು ಇದ್ದರು.