ಬೆಳಗಾವಿ: ಇಲ್ಲಿನ ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಯುವ ಬರಹಗಾರರನ್ನು ಪ್ರೋತ್ಸಾಹಿಸುವ ಸಲುವಾಗಿ ಪ್ರಸಕ್ತ ಸಾಲಿನಿಂದ ಆರಂಭಿಸಿರುವ ‘ಯುವ ಸಾಹಿತ್ಯ ಪುರಸ್ಕಾರ’ಕ್ಕೆ ಆಯ್ಕೆಗೊಂಡ ಬರಹಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಆಯ್ಕೆಯಾದವರ ವಿವರ: ಕತೆ: ಬಸವಣ್ಣೆಪ್ಪ ಕಂಬಾರ (ಆಟಿಕೆ); ಕಾದಂಬರಿ: ಪ್ರೀತೀಶ (ಸಂಕಲ್ಪ); ಕಾವ್ಯ: ವಿಠಲ ದಳವಾಯಿ (ಬೋಧಿ ನೆರಳಿನ ದಾರಿ); ಮಕ್ಕಳ ಸಾಹಿತ್ಯ: ಮುರುಗೇಶ ಗಾಡವಿ (ಕಚಗುಳಿ); ಲಲಿತ ಪ್ರಬಂಧ: ವೈಶಾಲಿ ಹೆಗಡೆ (ಒದ್ದೆ ಹಿಮ... ಉಪ್ಪು ಗಾಳಿ); ವಿಮರ್ಶೆ ಪ್ರಬಂಧ: ಆನಂದಕುಮಾರ ಜಕ್ಕಣ್ಣವರ (ಮನೋಗತ); ಸಂಶೋಧನೆ: ಲಕ್ಷ್ಮೀಶ ಹೆಗಡೆ (ಆ ಹೊತ್ತು ಈ ಹೊತ್ತಿಗೆ); ಜೀವನ ಚರಿತ್ರೆ: ಸಂಪದಾ ಸುಭಾಷ್ (ಹುಯಿಲಗೋಳ ನಾರಾಯಣರಾಯರು); ಅನುವಾದ: ಶೋಭಾ ನಾಯಕ ( U ಟರ್ನ್– ನಾಟಕ); ಸಾಹಿತ್ಯೇತರ ಕೃತಿ: ಸುನೀಲ ಸಾಣಿಕೊಪ್ಪ (ಜೀವನ ದಾನ).
ಹನ್ನೆರಡು ಸಾಹಿತ್ಯ ಪ್ರಕಾರಗಳಿಗೆ ಸಂಬಂಧಿಸಿದ ಕೃತಿಗಳನ್ನು ಪುರಸ್ಕಾರಕ್ಕೆ ಆಹ್ವಾನಿಸಲಾಗಿತ್ತು.
ಹತ್ತು ಪ್ರಕಾರದ ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಪುರಸ್ಕಾರವು ತಲಾ ರೂ 10,000 ನಗದು ಬಹುಮಾನ ಹೊಂದಿದೆ. ಡಿಸೆಂಬರ್ 29ರಂದು ನಗರದ ಕುಮಾರ ಗಂಧರ್ವ ರಂಗಮಂದಿರದಲ್ಲಿ ನಡೆಯುವ ಸಮಾರಂಭದಲ್ಲಿ ವಿಮರ್ಶಕ ಡಾ. ಜಿ.ಎಸ್. ಆಮೂರ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಯ್ಕೆ ಸಮಿತಿ ಸದಸ್ಯರಾದ ಡಾ. ಜಿ.ಎಂ. ಹೆಗಡೆ ಹಾಗೂ ಡಾ. ವಿಕ್ರಮ ವಿಸಾಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ.ಎಂ. ಕಲಬುರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.