ಬಸವಾಪಟ್ಟಣ: `ಅನಕ್ಷರತೆಯಿಂದ ನರಳುತ್ತಿರುವ ಮುಸ್ಲಿಂ ಸಮಾಜವನ್ನು ಸಾಕ್ಷರತೆಯತ್ತ ನಡೆಸಲು ಸಮಾಜದ ಎಲ್ಲರ ನೆರವು ಅಗತ್ಯ' ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ಪಟೇಲ್ ನುಡಿದರು.
ಅವರು ಇಲ್ಲಿನ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಶತಮಾನಗಳಿಂದ ಮುಸ್ಲಿಂ ಸಮಾಜ ದೇಶದ ಆಡಳಿತಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. ಆದರೆ ಈ ಸಮಾಜ ಈಗಲೂ ಬಡತನ, ನಿರುದ್ಯೋಗ, ರೋಗ, ಹಸಿವು, ದಾರಿದ್ರ್ಯದಿಂದ ಬಳಲುತ್ತಿದೆ. ಕೇವಲ ಶಿಕ್ಷಣದಿಂದ ಮಾತ್ರ ಸಮಸ್ಯೆ ದೂರಮಾಡಲು ಸಾಧ್ಯ ಎಂದು ಹೇಳಿದರು.
ಶಾಸಕ ಕೆ.ಶಿವಮೂರ್ತಿ ಮಾತನಾಡಿ, ನಮಗೆ ಸ್ವಾತಂತ್ರ್ಯ ಬಂದು ಆರು ದಶಕಗಳು ಕಳೆದರೂ ದೇಶದಲ್ಲಿ ಮೂಲ ಸೌಕರ್ಯದ ಕೊರೆತೆಯಿದೆ. ಅವುಗಳನ್ನು ನಿವಾರಿಸಿ, ವಿಜ್ಞಾನ ಮತ್ತು ತಂತ್ರಜ್ಞಾನ ಕೇತ್ರಗಳಲ್ಲಿ ಸಾಧನೆ ಮಾಡಿ ಆರೋಗ್ಯಪೂರ್ಣ ಸಮಾಜದ ರಚನೆಗೆ ಶ್ರಮಿಸಬೇಕು ಎಂದು ನುಡಿದರು.
ನಿವೃತ್ತ ಜಿಲ್ಲಾಧಿಕಾರಿ ಅನ್ವರ್ಪಾಷಾ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಆರ್.ತಿಪ್ಪೇಶಪ್ಪ, ಅಕ್ಷರದಾಸೋಹ ಸಹ ನಿರ್ದೇಶಕ ಸೋಮಶೇಖರಪ್ಪ ಮಾತನಾಡಿದರು.
ಬಿ.ಜಿ.ಯೋಗೇಶ್, ಬಿ.ಜಿ. ನಾಗರಾಜ, ಪಿ.ಇಸ್ಮಾಯಿಲ್, ಪಿ.ಇಬ್ರಾಹಿಂ, ಪಿ.ಶಬ್ಬೀರ್ ಅಹಮದ್, ಮಹಮದ್ ಹನೀಫ್, ಪಿ.ಖಲಂದರ್, ಜಹೀರ್ಪಟೇಲ್, ಸತೀಶ್ ಪಟೇಲ್, ಬಿ.ಚಂದ್ರಪ್ಪ ಭಾಗವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸೈ ಲತಾ ತೇಜಸ್ವಿ ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು.
ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಸ್.ಎಂ.ರುದ್ರೇಶ್ ಅಧ್ಯಕ್ಷತೆ ವಹಿಸಿದ್ದರು. ಮಹಮದ್ ತಾಹಿರ್ ಹುಸೇನ್ ಸ್ವಾಗತಿಸಿದರು. ಶಾಕಿರ್ ಉಲ್ಲಾ ಷರೀಫ್ ವಂದಿಸಿದರು.