ಮಡಿಕೇರಿ: ಕೊಡಗರಹಳ್ಳಿಯಲ್ಲಿರುವ ಶ್ರೀ ಬೈತೂರಪ್ಪ ಪೊವ್ವದಿ ಬಸವೇಶ್ವರ ದೇವಾಲಯದ ಜೀರ್ಣೋದ್ಧಾರ ಕಾರ್ಯಗಳು ಮುಕ್ತಾಯ ಹಂತದಲ್ಲಿದ್ದು, ದೇವಾಲಯ ನವೀಕರಣ ಮೂರ್ತಿಗಳ ಪುನರ್ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಡಿಸೆಂಬರ್ನಲ್ಲಿ ನಡೆಯಲಿದೆ ಎಂದು ದೇವಾಲಯದ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ದೇವಾಲಯದ ಆವರಣದಲ್ಲಿ ಸೆ. 19 ರಂದು ಬೆಳಿಗ್ಗೆ 7 ಗಂಟೆಯಿಂದ ಶ್ರೀ ಮಹಾ ಗಣಪತಿ ಹೋಮ ಏಕಾದಶ ರುದ್ರಾಭಿಷೇಕ, ಶ್ರೀ ದುರ್ಗಾ ಸಪ್ತಶತಿ ಪಾರಾಯಣ ದೊಂದಿಗೆ ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಗ್ರಾಮದ ಹಿರಿಯರು, ಭಕ್ತಾದಿಗಳು ಸೇರಿ ದೇವಾಲಯವನ್ನು ಜೀರ್ಣೋದ್ಧಾ ರಗೊಳಿಸಿ, ಪೂಜಾ ಕಾರ್ಯಕ್ರಮವನ್ನು ನಡೆಸಲು ಮುಂದಾಗಿದ್ದಾರೆ. 2003ರ ಡಿಸಂಬರ್ 15 ರಿಂದ ಆರಂಭಗೊಂಡ ಈ ಸಂಕಲ್ಪ, ಈ ಏಳು ವರ್ಷಗಳ ತಪಸ್ಸಿನ ಫಲವಾಗಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ ಎಂದು ದೇವಾಲಯದ ಟ್ರಸ್ಟ್ ಸಂತಸ ವ್ಯಕ್ತಪಡಿಸಿದೆ.
2004ರಲ್ಲಿ ಸುಮಾರು ರೂ.40 ಲಕ್ಷದ ಅಂದಾಜಿನಲ್ಲಿ ಕೈಗೆತ್ತಿಕೊಂಡ ಕಾಮಗಾರಿ ಹಲವು ಕಾರಣಗಳಿಂದ ವೆಚ್ಚಗಳು ಏರುತ್ತಾ ಬಂದಿದ್ದು, ಈಗ ಒಟ್ಟು ವೆಚ್ಚ ರೂ. 85 ಲಕ್ಷ ಮೀರಬಹುದೆಂದು ಅಂದಾಜಿಸಲಾಗಿದೆ. ಈ ಏಳು ವರ್ಷದ ಅವಧಿಯಲ್ಲಿ ಭಕ್ತಾಧಿ ಗಳು, ದಾನಿಗಳು, ಗ್ರಾಮಸ್ಥರು ಹಾಗೂ ಟ್ರಸ್ಟ್ ಶ್ರಮದಿಂದಾಗಿ ರೂ. 55 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಸಂಗ್ರಹಿಸಲಾಗಿದೆ.
ಪ್ರತಿಷ್ಠಾ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳಿಗೆ . 30 ಲಕ್ಷದಷ್ಟು ಮೊತ್ತ ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಕೆಲಸಗಳು ಮುಕ್ತಾಯದ ಹಂತಕ್ಕೆ ಬಂದಿದ್ದು, ಡಿಸೆಂಬರ್ 29 ರಂದು ಬೆಳಿಗ್ಗೆ 7.51ರ ಧನುರ್ ಲಗ್ನ ಮುಹೂರ್ತದಲ್ಲಿ ದೇವಾಲಯದ ನವೀಕರಣ, ಮೂರ್ತಿಗಳ ಪುನರ್ಪ್ರತಿಷ್ಠೆ ಕಾರ್ಯಕ್ರಮಗಳು ನೆರವೇರಲಿವೆ ಎಂದು ಪ್ರಕಟಣೆ ತಿಳಿಸಿದೆ.