ಬಸವಕಲ್ಯಾಣ: ತಾಲ್ಲೂಕಿನ ಹೋಬಳಿ ಕೇಂದ್ರ ಮುಡಬಿಯಿಂದ ಸುತ್ತಲಿನ ಗ್ರಾಮಗಳಿಗೆ ಹೋಗಲು ಬಸ್ಗಳ ಕೊರತೆ ಇರುವುದರಿಂದ ಇಲ್ಲಿ ಜೀಪ್ನ ಟಾಪ್ ಮೇಲೆ ಕುಳಿತುಕೊಂಡು ಪ್ರಯಾಣಿಸುವುದು ಮಾಮೂಲಾಗಿದೆ.
ಇಲ್ಲಿಂದ ಕಮಲಾಪುರ ಮಾರ್ಗವಾಗಿ ಗುಲ್ಬರ್ಗಕ್ಕೆ ಬಸ್ಗಳು ಹೋಗುತ್ತವೆ. ಹುಮನಾಬಾದ ಮಾರ್ಗವಾಗಿ ಹೋಗಬೇಕಾದರೆ ದೂರ ಆಗುವುದರಿಂದ ತಾಲ್ಲೂಕಿನ ಜನರು ಹೆಚ್ಚಾಗಿ ಈ ಮಾರ್ಗವಾಗಿಯೇ ಗುಲ್ಬರ್ಗಕ್ಕೆ ಪ್ರಯಾಣಿಸುತ್ತಾರೆ.
ಆದರೆ, ಇಲ್ಲಿಂದ ಹೋಗುವ ಬಸ್ಗಳ ಸಂಖ್ಯೆ ತೀರ ಕಡಿಮೆಯಾಗಿದೆ. ಆದ್ದರಿಂದ ಜೀಪ್, ಟಂಟಂಗಳೇ ಗತಿಯಾಗಿವೆ. ಸಂಜೆ ಸಮಯದಲ್ಲಂತೂ ಬಸ್ ಮತ್ತು ಇತರೆ ವಾಹನಗಳು ಸಹ ಸಿಗುವುದಿಲ್ಲ. ಶಾಲೆ ಬಿಡುವ ವೇಳೆಯಲ್ಲಿ ಸುತ್ತಲಿನ ಗ್ರಾಮಗಳಿಗೆ ಮತ್ತು ಗುಲ್ಬರ್ಗ, ಬಸವಕಲ್ಯಾಣಕ್ಕೆ ಸಂಚರಿಸುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡಬೇಕಾಗಿದೆ.
ಎರಡು ದಿನಗಳಿಂದ ಸಂಜೆ ಸಮಯದಲ್ಲಿ ಬಸ್ 2-3 ಗಂಟೆ ತಡಮಾಡಿ ಬಂದಿದ್ದರಿಂದ ಪ್ರಯಾಣಿಕರಿಗೆ ತೊಂದರೆ ಆಯಿತು ಎಂದು ಶಿಕ್ಷಕ ಸಂಗಪ್ಪ `ಪ್ರಜಾವಾಣಿ'ಗೆ ತಿಳಿಸಿದ್ದಾರೆ. ತಮಗೂ ಗುಲ್ಬರ್ಗಕ್ಕೆ ಹೋಗಬೇಕಾಗಿತ್ತು ಆದರೆ, ಸಮಯಕ್ಕೆ ಸರಿಯಾಗಿ ಬಸ್ ಬರಲಿಲ್ಲ ಎಂದಿದ್ದಾರೆ. ಶಾಲೆ ಬಿಡುವ ಸಮಯದಲ್ಲಿ ಈ ಮಾರ್ಗದಲ್ಲಿ ಹೆಚ್ಚುವರಿ ಬಸ್ಗಳನ್ನು ಬಿಟ್ಟರೆ ಪಾಸ್ ಹೊಂದಿದ ಮಕ್ಕಳಿಗೆ ಅನುಕೂಲ ಆಗುತ್ತದೆ.
ಸಂಬಂಧಿತರು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.