ಇಲ್ಲಿನ ಸುಬ್ರಹ್ಮಣ್ಯನಗರದಿಂದ ಮೆಜೆಸ್ಟಿಕ್ಗೆ ತೆರಳುವ ಬಿಎಂಟಿಸಿ ಬಸ್ಸುಗಳು ಸಮಯಕ್ಕೆ ಸರಿಯಾಗಿ ಬರದೆ ಇರುವುದರಿಂದ ಶಾಲಾ-ಕಾಲೇಜು, ಕಚೇರಿ ಕೆಲಸಗಳಿಗೆ ತೆರಳುವವರು ತೀವ್ರ ತೊಂದರೆ ಎದುರಿಸುವಂತಾಗಿದೆ.ಮೆಜೆಸ್ಟಿಕ್ನಿಂದ ಯಶವಂತಪುರಕ್ಕೆ, ಯಶವಂತಪುರದಿಂದ ಮೆಜೆಸ್ಟಿಕ್ಗೆ 82 ನಂಬರಿನ ಬಸ್ಸುಗಳು ಮಾತ್ರ ಸುಬ್ರಹ್ಮಣ್ಯನಗರದ ಮುಖ್ಯರಸ್ತೆಯಲ್ಲಿ ಓಡಾಡುತ್ತವೆ. ಮೆಜೆಸ್ಟಿಕ್ಗೆ ತೆರಳುವ ಬಸ್ಸುಗಳು ಒಮ್ಮಮ್ಮೆ ಒಂದರ ಹಿಂದೆ ಒಂದರಂತೆ ಬಂದರೆ ಮತ್ತೆ ಕೆಲವು ಸಲ ಒಂದೂವರೆ ಗಂಟೆಗಿಂತ ಹೆಚ್ಚು ಕಾದರೂ ಬಸ್ಸುಗಳೇ ಬರುವುದಿಲ್ಲ.
ತುಂಬಾ ಹೊತ್ತಾಗಿರುವ ಸಂದರ್ಭದಲ್ಲಿ ಚಾಲಕ ಮತ್ತು ನಿರ್ವಾಹಕರಿಬ್ಬರೂ ಒಬ್ಬರೇ ಆಗಿರುವ ಬಸ್ಸುಗಳು ಬಂದರಂತೂ ಕತೆ ಮುಗಿದಂತೆಯೇ ಸರಿ. ಸುಬ್ರಹ್ಮಣ್ಯನಗರದಿಂದ ಮಲ್ಲೇಶ್ವರಂ ಸರ್ಕಲ್ ಸೇರಬೇಕೆಂದರೆ ಅರ್ಧ ತಾಸು ಹಿಡಿಯುತ್ತದೆ. ಮೆಜೆಸ್ಟಿಕ್ ಅಥವಾ ಮಲ್ಲೇಶ್ವರಂ ಸರ್ಕಲ್ನಿಂದ ಮತ್ತೆ ಬೇರೊಂದು ಬಸ್ಸು ಹಿಡಿದು ದೂರದ ಪ್ರದೇಶಗಳಿಗೆ ತೆರಳುವವರು ಏನು ಮಾಡಬೇಕು? ತಲೆನೋವಾಗಿ ಪರಿಣಮಿಸಿದೆ.
ಸುಬ್ರಹ್ಮಣ್ಯನಗರ ಬೆಂಗಳೂರಿನ ಹೃದಯ ಭಾಗದಲ್ಲಿದೆ. ನಿತ್ಯ ಕೆಲಸ ಕಾರ್ಯಗಳಿಗಾಗಿ ಓಡಾಡುವವರ ಸಂಖ್ಯೆ ಹೆಚ್ಚು. ಪ್ರತಿ ಅರ್ಧ ಗಂಟೆಗೊಮ್ಮೆ ಇರುವ ಬಸ್ಸುಗಳನ್ನು ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಓಡಾಡುವಂತೆ ಸಂಬಂಧಪಟ್ಟವರು ಕ್ರಮ ಕೈಗೊಂಡರೆ ನಗರದ ನಿವಾಸಿಗಳಿಗೆ ಅನುಕೂಲವಾಗಲಿದೆ ಅಥವಾ ಯಶವಂತಪುರದಿಂದ ಹೊರವರ್ತುಲದ ಮೂಲಕ ತೆರಳುವ ಬಸ್ಸುಗಳು ಸುಬ್ರಹ್ಮಣ್ಯನಗರದ ಮಾರ್ಗದಲ್ಲಿಯೇ ಬರುವಂತಾದರೆ ಇನ್ನೂ ಹೆಚ್ಚಿನ ಅನುಕೂಲವಾಗುತ್ತದೆ. ಸಂಬಂಧಪಟ್ಟವರು ಕೂಡಲೇ ಈ ಬಗ್ಗೆ ಗಮನ ಹರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ.
ಇಂದುಮತಿ, ನಾಗಶ್ರೀ, ತಿಮ್ಮಯ್ಯ, ಮಮತಾ, ನಾಗರತ್ನ ಮತ್ತಿತರ ಸುಬ್ರಹ್ಮಣ್ಯನಗರ ನಿವಾಸಿಗಳು