ಪುಣೆ (ಐಎಎನ್ಎಸ್): ಜನನಿಬಿಡ ಸ್ವರ್ಗೇಟ್ ಪ್ರದೇಶದಲ್ಲಿ ಯದ್ವಾತದ್ವಾ ಬಸ್ ಚಲಾಯಿಸಿ 9 ಜನರ ಸಾವಿಗೆ ಮತ್ತು 27 ಮಂದಿ ಗಾಯಗೊಳ್ಳಲು ಕಾರಣನಾದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕ ಸಂತೋಷ್ ಮಾನೆಯನ್ನು ನ್ಯಾಯಾಲಯ ಗುರುವಾರ ಫೆಬ್ರವರಿ 3ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ.
ಈ ನಡುವೆ, ನಗರದ ಜನತೆ ಬೆಚ್ಚಿಬೀಳುವಂತೆ ಮಾಡಿದ ಈ ಕೃತ್ಯದ ಆರೋಪಿ ಮಾನೆಯ ಪರವಾಗಿ ವಾದಿಸಬಾರದು ಎಂಬ ನಿರ್ಧಾರಕ್ಕೆ ಪುಣೆಯ ವಕೀಲರು ಬಂದಿದ್ದಾರೆ.
`ಘಟನೆ ವೇಳೆ ಮಾನೆ ಮಾನಸಿಕವಾಗಿ ಅಸ್ವಸ್ಥನಾಗಿದ್ದನೋ ಇಲ್ಲವೋ ಎಂಬುದು ಬೇರೆ ವಿಷಯ. ಆದರೆ ಆತನ ಕೃತ್ಯ ಒಪ್ಪಿಕೊಳ್ಳುವಂತಹದ್ದಲ್ಲ. ನೈತಿಕ ನೆಲೆಗಟ್ಟಿನಲ್ಲಿ ನಾವ್ಯಾರೂ ಆತನನ್ನು ಪ್ರತಿನಿಧಿಸದಿರುವ ಒಮ್ಮತದ ನಿರ್ಧಾರಕ್ಕೆ ಬಂದಿದ್ದೇವೆ~ ಎಂದು ವಕೀಲರ ಸಂಘ ಸುದ್ದಿಸಂಸ್ಥೆಗೆ ತಿಳಿಸಿದೆ.