ಪುಣೆ (ಪಿಟಿಐ): ಕಳೆದ ವರ್ಷದ ಜನವರಿಯಲ್ಲಿ ಇಲ್ಲಿನ ಬೀದಿಯೊಂದರಲ್ಲಿ ಅತಿರೇಕದಿಂದ ಯದ್ವಾತದ್ವ ಬಸ್ ನುಗ್ಗಿಸಿ ಕೆಲವರ ದುರ್ಮರಣಕ್ಕೆ ಕಾರಣನಾಗಿದ್ದ ಬಸ್ ಚಾಲಕ ಸಂತೋಷ್ ಮಾಣೆಗೆ ಸ್ಥಳೀಯ ನ್ಯಾಯಾಲಯ ಮರಣದಂಡನೆ ವಿಧಿಸಿದೆ.
ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರಾದ ವಿ.ಕೆ. ಶೆವಾಲೆ, `ಇದೊಂದು ಅಪರೂಪದಲ್ಲಿ ಅಪರೂಪದ ಪ್ರಕರಣವಾಗಿದ್ದು, ಅಪಾಯದ ಸಂಪೂರ್ಣ ಅರಿವಿದ್ದೇ ಚಾಲಕ, ಯಾವುದೇ ಕಟ್ಟಡಕ್ಕೆ ಡಿಕ್ಕಿ ಹೊಡೆಸದೆ ಜನಸಂದಣಿಯಲ್ಲಿ ನುಗ್ಗಿಸಿ ಒಂಬತ್ತು ಮಂದಿಯನ್ನು ಕೊಂದಿದ್ದಾನೆ' ಎಂದು ತೀರ್ಪಿನಲ್ಲಿ ತಿಳಿಸಿದ್ದಾರೆ.
ದುರ್ಘಟನೆ ನಡೆಯುವ ವೇಳೆ ಮಾನೆ ಬುದ್ಧಿಭ್ರಮಣೆಗೊಳಗಾಗಿದ್ದ ಎಂಬ `ಸುಳ್ಳು ಸಾಕ್ಷ್ಯ' ನೀಡಿದ್ದಕ್ಕಾಗಿ ಆರೋಪಿ ಪರ ವಕೀಲರನ್ನು ನ್ಯಾಯಾಧೀಶರು ವಿಚಾರಣೆ ವೇಳೆ ತರಾಟೆಗೆ ತೆಗೆದುಕೊಂಡರು.
ಈ ಮಧ್ಯೆ, ಸ್ಥಳೀಯ ನ್ಯಾಯಾಲಯದ ತೀರ್ಪಿನ ವಿರುದ್ಧ ಮಾನೆ ಮೇಲ್ಮನವಿ ಸಲ್ಲಿಸಲಿದ್ದಾರೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.
ಕಳೆದ ವರ್ಷದ ಜನವರಿ 12ರಂದು ಇಲ್ಲಿನ ಸ್ವರ್ಗೇಟ್ ಡಿಪೋದಿಂದ ರಸ್ತೆ ಸಾರಿಗೆ ಬಸ್ನ್ನು ಅಪಹರಿಸಿದ್ದ ಮಾನೆ, ಬಳಿಕ ಅದನ್ನು ಬೀದಿಯಲ್ಲಿ ಯದ್ವಾತದ್ವ ನುಗ್ಗಿಸಿ ಭಾರಿ ದುರ್ಘಟನೆಗೆ ಕಾರಣವಾಗಿದ್ದ.