ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಹತ್ತಿರ ಇರುವ ಪೊಲೀಸ್ ಸ್ಟೇಷನ್ ಪಕ್ಕ ಬಸ್ ನಿಲುಗಡೆ ಇದೆ. ಇಲ್ಲಿ ಸುಮಾರು ನೂರು ಬಸ್ಸುಗಳು ದಿನವೂ ಸಂಚರಿಸುತ್ತವೆ. ಕನಕಪುರ, ಕೊಳ್ಳೇಗಾಲ, ಆನೇಕಲ್ಗಳಿಗೆ ಹೋಗುವ ಬಸ್ಗಳೂ ಈ ಮೂಲಕವೇ ಹಾದುಹೋಗುತ್ತವೆ.
ಇಲ್ಲಿರುವ ಬಸ್ ತಂಗುದಾಣದಲ್ಲಿ ಸದಾ ನೂರಾರು ಜನ ಬಸ್ಸಿಗಾಗಿ ಕಾಯುತ್ತಿರುತ್ತಾರೆ. ಅಂಡರ್ಪಾಸ್ ನಿರ್ಮಾಣ ಮುಗಿದು ಒಂದು ವರ್ಷವಾದರೂ ಬಸ್ಶೆಲ್ಟರ್ ನಿರ್ಮಿಸಲಿಲ್ಲ. ಜನರು ಮಳೆಗಾಲದಲ್ಲಂತೂ ತುಂಬ ತೊಂದರೆ ಅನುಭವಿಸುತ್ತಾರೆ. ಎರಡೂ ಬದಿಯಲ್ಲಿ ನಿಲ್ಲಲು ಯಾವುದೇ ಆಶ್ರಯವೂ ಇಲ್ಲ. ಮಹಿಳೆಯರು ಮತ್ತು ವೃದ್ಧರು ನಿಲ್ದಾಣದಲ್ಲಿ ಕೂರಲೂ ಯಾವ ವ್ಯವಸ್ಥೆಯೂ ಇಲ್ಲ.
ದಯವಿಟ್ಟು ಇಲ್ಲಿಯ ಮಹಾನಗರಪಾಲಿಕೆ ಸದಸ್ಯರು ಮತ್ತು ವಿಧಾನಸಭಾ ಸದಸ್ಯರಿಗೆ ಮತ್ತೊಮ್ಮೆ ನಾವು ಕಳಕಳಿಯಿಂದ ಮನವಿ ಮಾಡುತ್ತಿದ್ದೇವೆ. ಈ ಬಗ್ಗೆ ತಕ್ಷಣ ಗಮನಹರಿಸಿ ಬಸ್ ತಂಗುದಾಣ ನಿರ್ಮಿಸಲು ಆದೇಶಿಸುತ್ತಾರೆಂದು ಆಶಿಸುತ್ತೇವೆ.