ಅರಕಲಗೂಡು: ಸಮಯಕ್ಕೆ ಸರಿಯಾಗಿ ಬಸ್ಗಳು ಬರದಿದ್ದರಿಂದ ರೊಚ್ಚಿಗೆದ್ದ ವಿದ್ಯಾರ್ಥಿಗಳು ಬಸ್ಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದ ಘಟನೆ ಪಟ್ಟಣದ ಬಸ್ ನಿಲ್ದಾಣದಲ್ಲಿ ಸೋಮವಾರ ನಡೆಯಿತು.
ಬೆಳಿಗ್ಗೆ 7 ರಿಂದ 8 ಗಂಟೆವರೆಗೆ ಹಾಸನ ಮಾರ್ಗವಾಗಿ ಒಂದೂ ಬಸ್ ಸಂಚರಿಸದ ಕಾರಣ ಕಾಯುತ್ತಿದ್ದ ನೂರಾರು ವಿದ್ಯಾರ್ಥಿಗಳು ರೊಚ್ಚಿಗೆದ್ದು ಪ್ರತಿಭಟನೆಗೆ ಮುಂದಾದರು. ಪ್ರತಿದಿನ ಹಾಸನಕ್ಕೆ ನೂರಾರು ವಿದ್ಯಾರ್ಥಿಗಳು ಸಂಚರಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ.
ಬಸ್ ಬಂದರೂ ಕೆಲವು ನಿರ್ವಾಹಕರು ಪಾಸ್ ಎಂಬ ಕಾರಣಕ್ಕೆ ವಿದ್ಯಾರ್ಥಿಗಳನ್ನು ಹತ್ತಿಸಿ ಕೊಳ್ಳುತ್ತಿಲ್ಲ. ಇದರಿಂದ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತೆರಳಲು ಸಾಧ್ಯವಾಗುತ್ತಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ನಿರ್ವಾಹಕರು ಮತ್ತು ಚಾಲಕರು ವಿದ್ಯಾರ್ಥಿಗಳ ಆರೋಪವನ್ನು ತಳ್ಳಿ ಹಾಕಿ ಬಸ್ ನಿಲ್ದಾಣಕ್ಕೆ ಬರುವ ವಿದ್ಯಾರ್ಥಿಗಳು ಬರುವ ಬಸ್ಗೆ ಹತ್ತಿ ತೆರಳುವುದಿಲ್ಲ. ತಮ್ಮ ಸ್ನೇಹಿತರು, ಸಂಗಡಿಗರಿಗಾಗಿ ಕಾದು ಕುಳಿತಿರುತ್ತಾರೆ. ಅವರು ಬಂದ ನಂತರ ಒಂದೆ ಬಸ್ಗೆ ಎಲ್ಲರೂ ಹತ್ತುತ್ತಾರೆ ಇದರಿಂದ ನಮಗೆ ತೀವ್ರ ತೊಂದರೆಯಾಗುತ್ತಿದೆ.