ಜೂನ್ 11 ರಂದು ಜಯನಗರ `ಟಿ~ ಬ್ಲಾಕ್ ಕಡೆ ಹೋಗಲು ಇಸ್ರೋ ಬಡಾವಣೆಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಕಾದ್ದಿದೆ. ಆದರೆ 11.50ಕ್ಕೆ 210 ಜಿ ಬಸ್ ಬಂತು. ಅಲ್ಲಿಯ ತನಕ ಬೇರಾವುದೇ ಬಸ್ ಅಲ್ಲಿ ಬರಲೇ ಇಲ್ಲ. ನಿಯಮಿತವಾಗಿ ಸಂಚರಿಸಬೇಕಾದ 412ನೇ ಬಸ್ ಕೂಡ ನಾಪತ್ತೆಯಾಗಿತ್ತು.
ಇದರರ್ಥ ಈ ಬಡಾವಣೆಯಿಂದ ವೇಳೆಗೆ ಸರಿಯಾಗಿ ಬಸ್ ಇಲ್ಲ. ಕದಿರೇನಹಳ್ಳಿ ಕ್ರಾಸ್ ಮತ್ತು ಕುಮಾರಸ್ವಾಮಿ ಲೇ ಔಟ್ನಿಂದ ಇಸ್ರೋ ಬಡಾವಣೆಗೆ ಹೋಗಲು ಕೆಲವು ವೇಳೆ ಅದರಲ್ಲೂ ಸಂಜೆಯ ನಂತರ ಎಷ್ಟು ಕಾದರೂ ಬಸ್ ಬರುವುದಿಲ್ಲ. ಕಾಯುವುದಕ್ಕೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ.
ಹೀಗಾಗಿ ಬನಶಂಕರಿಯಿಂದ ಕದಿರೇನಹಳ್ಳಿ ಕ್ರಾಸ್ - ಕುಮಾರಸ್ವಾಮಿ ಲೇಔಟ್ - ಇಸ್ರೊ ಬಡಾವಣೆ - ವಸಂತಪುರ, ಕೊಣನಕುಂಟೆ ಕ್ರಾಸ್ - ಬನಶಂಕರಿ ಮಾರ್ಗದಲ್ಲಿ ಅರ್ಧ ಗಂಟೆಗೊಮ್ಮೆ ಒಂದು ಮಿನಿ ಬಸ್ ಓಡಿಸಿದರೆ ಸಾಕು. ಇಸ್ರೊ ಬಡಾವಣೆಯ ನಿವಾಸಿಗಳಿಗೆ ಬಹಳ ಅನುಕೂಲವಾಗುತ್ತದೆ.
ಇಸ್ರೊ ಬಡಾವಣೆಯಲ್ಲಿ ಎಲ್ಲವೂ ಸರಿಯಿದೆ; ಆದರೆ ಬಸ್ಗಳಿಗೆ ಮಾತ್ರ ಬರ ಬಂದಿದೆ. `ಕಾರು, ಸ್ಕೂಟರ್ ಏತಕ್ಕೆ? ಬಸ್ನಲ್ಲೇ ಪ್ರಯಾಣಿಸಿ~ ಎಂದು ಸಾರಿಗೆ ಸಂಸ್ಥೆ ಹೇಳುತ್ತದೆ. ಬಸ್ ಬಂದರೆ ತಾನೆ ಪ್ರಯಾಣಿಸುವುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಕೋರಿಕೆ.
- ಪಿ. ಎ. ಸುಧೀಂದ್ರ
ಫುಟ್ಪಾತ್ನಲ್ಲಿ ಹಳ್ಳ
ಮೈಸೂರು ಬ್ಯಾಂಕ್ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಗಳ ಬದಿಗಳಲ್ಲಿ ಮರಗಳಿವೆ. ಅದರ ಸುತ್ತಲೂ ದೊಡ್ಡ ದೊಡ್ಡ ಹಳ್ಳಗಳ ಥರ ಇದೆ. ಹೀಗಾಗಿ ಪಾದಚಾರಿಗಳು ಸಲೀಸಾಗಿ ಓಡಾಡುವುದೇ ಕಷ್ಟವಾಗಿದೆ.
ಆ ಕಡೆ ಈ ಕಡೆ ನೋಡುತ್ತ ಹಳ್ಳದಲ್ಲಿ ಬೀಳುವವರೇ ಜಾಸ್ತಿಯಾಗಿದೆ. ವಯಸ್ಸಾದ ಹೆಂಗಸರು, ಮಕ್ಕಳ ತೊಂದರೆ ಬಗ್ಗೆ ಹೇಳುವಂತೆಯೇ ಇಲ್ಲ.
ಆದ್ದರಿಂದ ಫುಟ್ಪಾತ್ನಲ್ಲಿ ಹಿಂದಿನಂತೆ ತೊಂದರೆಯಿಲ್ಲದೆ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿ ಪಾಲಿಕೆಯ ಆಯುಕ್ತರಲ್ಲಿ ವಿನಂತಿ.
- ಎಂ. ಮಲ್ಲೇಶಯ್ಯ
ಶೌಚಾಲಯ ಲಾಬಿ
ಬೆಂಗಳೂರಿಗರು ಕ್ಯಾಪಿಟೇಶನ್ ಲಾಬಿ, ಹೆಲ್ಮೆಟ್ ಲಾಬಿ, ಡೊನೇಶನ್ ಲಾಬಿ, ಪಾರ್ಕಿಂಗ್ ಲಾಬಿ ನೋಡಿ ಆಯಿತು. ಈಗ ಹೊಸದೊಂದು ಲಾಬಿ ತಲೆ ಎತ್ತಿದೆ. ಅದೇ `ಶೌಚಾಲಯ ಲಾಬಿ~.
ಈ ಲಾಬಿಯವರು ಇತ್ತೀಚಿನ ದಿನಗಳಲ್ಲಿ ಫುಟ್ಪಾತ್ ಸಹ ಬಿಡದೆ ಎಲ್ಲೆಂದರಲ್ಲಿ ಟೈಲ್ಸ್ ಅಳವಡಿಸಿ ಶೌಚಾಲಯ ನಿರ್ಮಿಸಿ `ಎರಡೂ ವಿಸರ್ಜನೆಗಳಿಗೂ~ ಮುಲಾಜಿಲ್ಲದೆ ಶುಲ್ಕ ವಸೂಲಿ ಮಾಡುತ್ತಾರೆ.
ಇವರ ಹಾವಳಿಯಿಂದಾಗಿ ಬೆಂಗಳೂರಿನಲ್ಲಿ ಉಚಿತ ಮೂತ್ರಾಲಯಗಳು ಮಾಯವಾಗಿವೆ. ಇನ್ನು ಈ ಶೌಚಾಲಯಗಳು ಅಧಿಕೃತವೊ, ಅನಧಿಕೃತವೊ ತಿಳಿಯದು. ಈ ಲಾಬಿ ಹಿಂದೆ ನೌಕರಶಾಹಿ ಸಹ ಶಾಮೀಲಾಗಿರಬಹುದು. ಆದ್ದರಿಂದ ಪಾಲಿಕೆ ಆಯುಕ್ತರು ಇತ್ತ ಗಮನ ಹರಿಸಿ ಈ ಲಾಬಿಯನ್ನು ಹತೋಟಿಯಲ್ಲಿ ಇಡಬೇಕೆಂದು ಮನವಿ.
- ಬಿ ಎಸ್ ಎಂ ಕುಮಾರ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.