ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಸ್‌ಗಳಿಗೆ ಹಾನಿ

Last Updated 6 ಅಕ್ಟೋಬರ್ 2012, 19:05 IST
ಅಕ್ಷರ ಗಾತ್ರ

ಬೆಂಗಳೂರು: `ಕರ್ನಾಟಕ ಬಂದ್~ ಪರಿಣಾಮದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳ ಸಂಚಾರ ಬೆಳಿಗ್ಗೆಯಿಂದ ಸಂಜೆವರೆಗೆ ಸಂಪೂರ್ಣ ಸ್ತಬ್ಧಗೊಂಡಿತ್ತು. ಶನಿವಾರ ಬೆಳಿಗ್ಗೆ ಬಿಎಂಟಿಸಿ ಬಸ್‌ಗಳು ಯಥಾಸ್ಥಿತಿಯಲ್ಲಿ ಸಂಚಾರ ಆರಂಭಿಸಿದಾಗ ದುಷ್ಕರ್ಮಿಗಳು 29 ಬಸ್‌ಗಳಿಗೆ ಕಲ್ಲು ತೂರಿ ಹಾನಿ ಮಾಡಿದ್ದಾರೆ.

ಬೆಳಿಗ್ಗೆ ಎಂಟು ಗಂಟೆಯವರೆಗೆ ರಾತ್ರಿ ಪಾಳಿಯ ಬಹುತೇಕ ಬಿಎಂಟಿಸಿಗಳು ಸಂಚಾರ ನಡೆಸಿದವು. ಇದರಿಂದಾಗಿ ಬೆಳಗ್ಗಿನ ಹೊತ್ತಿನಲ್ಲಿ ನಗರಕ್ಕೆ ಬಂದ ಪ್ರಯಾಣಿಕರು ಮನೆ ಸೇರಿಕೊಳ್ಳಲು ಸಾಧ್ಯವಾಯಿತು.

ಇದೇ ಸಂದರ್ಭದಲ್ಲಿ ನಗರದ ವಿವಿಧ ಭಾಗಗಳಲ್ಲಿ ದುಷ್ಕರ್ಮಿಗಳು ಬಸ್‌ಗಳಿಗೆ ಕಲ್ಲು ತೂರಾಟ ನಡೆಸಿದರು. ಬಸ್‌ಗಳ ಗಾಜುಗಳಿಗೆ ಹಾನಿಯಾಗಿದೆ. ಬಳಿಕ ಬಸ್ ಸಂಚಾರವನ್ನು ಸ್ಥಗಿತಗೊಳಿಸಲಾಯಿತು. ರಾತ್ರಿ ಪಾಳಿಯ ಶೇ 60 (800 ಬಸ್‌ಗಳು) ರಷ್ಟು ಬಸ್‌ಗಳು ಸಂಚಾರ ನಡೆಸಿದವು.

ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಮೆಜೆಸ್ಟಿಕ್‌ನ ಬಿಎಂಟಿಸಿ ಬಸ್ ನಿಲ್ದಾಣ ಬಸ್‌ಗಳಿಲ್ಲದೆ ಬಿಕೋ ಎನ್ನುತ್ತಿತ್ತು. ನೂರಾರು ಪ್ರಯಾಣಿಕರು ಬಸ್‌ಗಾಗಿ ಗಂಟೆಗಟ್ಟಲೆ ಕಾದರು. ಸಂಜೆ ಆರು ಗಂಟೆ ವರೆಗೂ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ.

ಸಂಜೆ ಆರು ಗಂಟೆಯ ಬಳಿಕ ಬಿಎಂಟಿಸಿ ವ್ಯಾಪ್ತಿಯ 40 ಡಿಪೊಗಳಿಂದ 800ಕ್ಕೂ ಅಧಿಕ ಬಸ್‌ಗಳು ಸಂಚಾರ ಆರಂಭಿಸಿದವು.

`ಪ್ರಯಾಣಿಕರಿಗೆ ತೊಂದರೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಬಸ್ ಸಂಚಾರ ಯಥಾಸ್ಥಿತಿಯಲ್ಲಿರಬೇಕು ಎಂಬುದು ಬಿಎಂಟಿಸಿ ಉದ್ದೇಶವಾಗಿತ್ತು. ಆದರೆ,  ಬಸ್‌ಗಳಿಗೆ ಕಲ್ಲು ತೂರಾಟದಿಂದ ಸಂಚಾರವನ್ನು ಸ್ಥಗಿತಗೊಳಿಸುವುದು ಅನಿವಾರ್ಯವಾಯಿತು. ಬಂದ್‌ನಿಂದಾಗಿ ಸಂಸ್ಥೆಗೆ 4.5 ಕೋಟಿ ರೂಪಾಯಿ ನಷ್ಟ ಉಂಟಾಗಿದೆ~ ಎಂದು ಬಿಎಂಟಿಸಿಯ ಮುಖ್ಯ ಸಂಚಾರ ನಿಯಂತ್ರಕ ನಾಗರಾಜ್ `ಪ್ರಜಾವಾಣಿ~ಗೆ ತಿಳಿಸಿದರು.

ಬಸ್ ಸಂಚಾರ ಸ್ಥಗಿತಗೊಂಡಿದ್ದರಿಂದ ರಿಕ್ಷಾ ಚಾಲಕರ `ಲೂಟಿ~ ಎಗ್ಗಿಲ್ಲದೆ ಸಾಗಿತ್ತು. ಶೇ 20ರಷ್ಟು ರಿಕ್ಷಾ ಚಾಲಕರು ಬಂದ್‌ಗೆ ಬೆಂಬಲ ಸೂಚಿಸಿ ರಸ್ತೆಗೆ ಇಳಿದಿರಲಿಲ್ಲ. ರಿಕ್ಷಾ ಚಾಲಕರು ದುಪ್ಪಟ್ಟು ಬೆಲೆಗೆ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಿಎಂಟಿಸಿ ಸುತ್ತಮುತ್ತಲಿನ ಪ್ರದೇಶದಲ್ಲಿ ರಿಕ್ಷಾ ಚಾಲಕರು ಹಾಗೂ ಪ್ರಯಾಣಿಕರು ಚೌಕಾಸಿ ನಡೆಸುತ್ತಿದ್ದುದು ಕಂಡು ಬಂತು. 

 `ಮೈಸೂರಿನಲ್ಲಿ ಪತ್ನಿ ಮಗುವಿಗೆ ಜನ್ಮ ನೀಡಿದ ಕಾರಣ ತುರ್ತಾಗಿ ಅಲ್ಲಿಗೆ ಹೋಗಬೇಕಿತ್ತು. ಗೆಳೆಯನ ಸಹಕಾರದಿಂದ ಮೆಜೆಸ್ಟಿಕ್‌ಗೆ ಬೆಳಿಗ್ಗೆಯೇ ತಲುಪಿದೆ. ಮಧ್ಯಾಹ್ನದವರೆಗೂ ಕಾದರೂ ಬಸ್ ಸಿಗಲಿಲ್ಲ. ಹೀಗಾಗಿ, ಮನೆಗೆ ವಾಪಸಾಗಲು ತೀರ್ಮಾನಿಸಿದ್ದೇನೆ~ ಎಂದು ವಿಜಯನಗರದ ನಿವಾಸಿ ಸುರೇಶ್ ನೋವು ತೋಡಿಕೊಂಡರು.

`ಪದೇ ಪದೇ ಬಂದ್‌ನಿಂದ ಮಕ್ಕಳಿೆ ತೊಂದರೆ~
`ಮೇಲಿಂದ ಮೇಲೆ ಬಂದ್‌ಗಳಾಗುತ್ತಿದ್ದರೆ ಮಕ್ಕಳ ವಿದ್ಯಾಭ್ಯಾಸದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ. ಆದರೆ, ಕಾವೇರಿ ವಿಷಯವಾಗಿ ಬಂದ್ ನಡೆಯುತ್ತಿರುವುದರಿಂದ ಬಂದ್ ಬೆಂಬಲಿಸುವುದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ಮಕ್ಕಳಿಗೆ ಅನನುಕೂಲವಾದರೂ ಅದನ್ನು ಸಹಿಸಿಕೊಳ್ಳಬೇಕು~
-ಪಾರಿಜಾತ, ಮಹಾಲಕ್ಷ್ಮೀ ಲೇಔಟ್‌ನ ನಿವಾಸಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT