ನೆಲಮಂಗಲ: ಬೆಂಗಳೂರಿನಿಂದ ಹಾಸನಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ನಲ್ಲಿ ತಲಾ 30ಲೀಟರ್ ಸಾಮರ್ಥ್ಯದ ಆರು ಕ್ಯಾನ್ಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಆಸಿಡ್ ರೂಪದ ರಾಸಾಯನಿಕ ದ್ರಾವಣದ ಪೈಕಿ ನಾಲ್ಕು ಕ್ಯಾನ್ಗಳನ್ನು ಸ್ಥಳೀಯ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸೋಮವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಯಶವಂತಪುರದ ಆರ್ಎಂಸಿ ಯಾರ್ಡ್ ಬಳಿ ರಾಸಾಯನಿಕವುಳ್ಳ ಆರು ಕ್ಯಾನ್ನೊಂದಿಗೆ ಪ್ರಯಾಣಿಕನೊಬ್ಬ ಬಸ್ ಹತ್ತಿದ. ನಿರ್ವಾಹಕ ವಿಚಾರಿಸಿದಾಗ ಪಾಮ್ ಎಣ್ಣೆ ಎಂದು ಸುಳ್ಳು ಹೇಳಿ ಬಸ್ನ ಹಿಂಬದಿ ಸೀಟುಗಳಲ್ಲಿ ಇಟ್ಟುಕೊಂಡು ಪ್ರಯಾಣಿಸುತ್ತಿದ್ದ ಎಂದು ತಿಳಿದುಬಂದಿದೆ.
ಮೇಲ್ಸೇತುವೆ ಮೂಲಕ ಬಂದ ಬಸ್ಸು ಕುಣಿಗಲ್ ವೃತ್ತದ ಬಳಿ ಸರ್ವೀಸ್ ರಸ್ತೆಗೆ ತಿರುವು ಪಡೆದು, ರಸ್ತೆ ಹಂಪ್ಮೇಲೆ ಎಗರಿದಾಗ ಎರಡು ಕ್ಯಾನ್ಗಳ ಮುಚ್ಚಳ ಬಿಚ್ಚಿಕೊಂಡು, ಬಸ್ನ ಒಳಭಾಗವನ್ನೆಲ್ಲಾ ಆವರಿಸಿತು. ತಕ್ಷಣ ಬೆಂಕಿ ಕಾಣಿಸಿಕೊಂಡು, ಘಾಟಿನ ರೂಪದ ಹೊಗೆ ಎದ್ದಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದರು.
ಗಾಬರಿಗೊಂಡ ಬಸ್ನಲ್ಲಿದ್ದ 19ಮಂದಿ ಪ್ರಯಾಣಿಕರು ಕಿರುಚಿಕೊಂಡರು. ಚಾಲಕ ತಕ್ಷಣ ಬಸ್ ನಿಲ್ಲಿಸಿ ಎಲ್ಲ ಪ್ರಯಾಣಿರನ್ನು ಕೆಳಗಿಳಿಸಿ, ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ಪೊಲೀಸರು ಕೂಡಲೇ ಅಗ್ನಿಶಾಮಕ ದಳದೊಂದಿಗೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಎಲ್ಲ ಆವಾಂತರಕ್ಕೆ ಕಾರಣನಾದ ವ್ಯಕ್ತಿ ಪಲಾಯನ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.