ಮಾಗಡಿ: ಲೋಕೋಪಯೋಗಿ ಇಲಾಖೆಯ ಮಾಗಡಿ ಉಪ ವಿಭಾಗದಲ್ಲಿ 2008 ರಿಂದ 2012 ರವರೆಗೆ ನಡೆದಿದೆ ಎನ್ನಲಾದ ಬಹುಕೋಟಿ ಅವ್ಯವಹಾರದ ಜೆರಾಕ್ಸ್ ಪ್ರತಿಗಳನ್ನು ಕೆಪಿಸಿಸಿ ಸದಸ್ಯ ಎ. ಮಂಜು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಅವರು, 2009-2010ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಮಾಗಡಿಯ ಉಪ ವಿಭಾಗದಲ್ಲಿ ರೂ.27.68 ಕೋಟಿ, 2010-11ರಲ್ಲಿ ರೂ. 33.00, 2011-12 ರಲ್ಲಿ ರೂ.300 ಕೋಟಿ ಒಟ್ಟು ರೂ. 371.04 ಕೋಟಿ ಗಳ ಅವ್ಯವಹಾರ ನಡೆದಿದೆ.
ಶಾಸಕರು ಸಾರ್ವಜನಿಕರು ಮತ್ತು ಮಾಧ್ಯಮ ಪ್ರತಿನಿಧಿಗಳನ್ನು ಕಾಮಗಾರಿ ನಡೆದಿರುವ ಸ್ಥಳಕ್ಕೆ ಕರೆದುಕೊಂಡು ಹೋಗಿ ಅದರ ಗುಣಮಟ್ಟದ ಬಗ್ಗೆ ಮಾಹಿತಿ ನೀಡಲಿ ಎಂದರು.
ಶುಕ್ರವಾರದ (ಅ.12) ಬಹಿರಂಗ ಸಭೆಗೆ ಹಾಜರಾಗಲು ನಾನೇನೂ ಮನರಂಜನೆಯ ವಸ್ತುವಲ್ಲ. ಹೂವಿನ ಹಾರದ ಬದಲು ಚಪ್ಪಲಿ ಹಾರ ಹಾಕಿಕೊಳ್ಳುತ್ತೇನೆ ಎನ್ನುವ ಶಾಸಕರ ಮಾತು ಪ್ರಜಾಪ್ರಭುತ್ವದ ಅಣಕವಾಗಿದೆ. ತನಿಖೆಯಿಂದ ತಪ್ಪಿಸಿಕೊಳ್ಳಲು ಈ ರೀತಿಯ ಮಾತಗಳನ್ನಾಡುತ್ತಿದ್ದಾರೆ ಎಂದರು.
ಶಾಸಕ ಎಚ್.ಸಿ. ಬಾಲಕೃಷ್ಣ ಅವರ ಹುಟ್ಟೂರಾದ ಹುಲಿಕಟ್ಟೆ, ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಶಾಸಕರ ಮನೆ ಮತ್ತು ವಿಧಾನ ಸಭಾ ಸದಸ್ಯರ ಭವನಕ್ಕೆ ಈ ಪ್ರತಿಗಳನ್ನು ಕೊರಿಯರ್ ಅಂಚೆ ಮಾಡಲಾಯಿತು.