ಅದು 1988ನೇ ಇಸ್ವಿ. ಆಗ ಕರ್ನಾಟಕದಲ್ಲಿದ್ದುದು ಜನತಾ ಪಕ್ಷದ ಸರ್ಕಾರ. ಒಂದು ವರ್ಷದ ಹಿಂದಷ್ಟೇ ಜಾರಿಗೆ ತಂದ ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಪ್ರಯೋಗ ದೇಶವ್ಯಾಪಿಯಾಗಿ ಹೆಸರು ಮಾಡಿತ್ತು. ಎಸ್.ಎಸ್. ಮೀನಾಕ್ಷಿ ಸುಂದರಂ ಪಂಚಾಯತ್ ರಾಜ್ ಇಲಾಖೆಯ ಕಾರ್ಯದರ್ಶಿಗಳಾಗಿದ್ದರು. ಒಂದು ದಿನ ಅವರ ಫೋನ್ ರಿಂಗಣಿಸಿತು. ಕರೆಮಾಡಿದವರು ಆಗ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿದ್ದ ವಿನೋದ್ ಪಾಂಡೆ- “ಮೀನಾಕ್ಷಿ ನೀವೊಮ್ಮೆ ಪ್ರಧಾನ ಮಂತ್ರಿ ರಾಜೀವ್ ಗಾಂಧಿಯವರನ್ನು ಭೇಟಿಯಾಗಬೇಕಂತೆ” ಎಂದರು.
ರಾಜ್ಯ ಸರ್ಕಾರದ ಇಲಾಖಾ ಕಾರ್ಯದರ್ಶಿಯೊಬ್ಬರನ್ನು ಪ್ರಧಾನಮಂತ್ರಿ ನೇರವಾಗಿ ಭೇಟಿಗೆ ಕರೆಯುವುದು ಅನಿರೀಕ್ಷಿತವಷ್ಟೇ ಅಲ್ಲ, ಬಹಳ ಅಪರೂಪವೂ ಹೌದು. ಸಹಜವಾಗಿಯೇ ಮೀನಾಕ್ಷಿ ಸುಂದರಂ ಚಿಂತೆಗೀಡಾದರು. ಇದನ್ನು ಗ್ರಹಿಸಿದವರಂತೆ ವಿನೋದ್ ಪಾಂಡೆ ಪ್ರಧಾನಿ ಆಹ್ವಾನದ ಉದ್ದೇಶ ತಿಳಿಸಿದರು. “ನಿಮ್ಮ ರಾಜ್ಯದಲ್ಲಿ ಜಾರಿಯಾಗಿರುವ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ನೀವೊಮ್ಮೆ ಬಂದು ರಾಜೀವ್ ಗಾಂಧಿಯವರಿಗೆ ವಿವರಿಸಬೇಕಂತೆ” “ಸರಿ ಮತ್ತೆ ತಿಳಿಸುತ್ತೇನೆ” ಎಂದ ಮೀನಾಕ್ಷಿ ಸುಂದರಂ ಬಹುಮಹಡಿ ಕಟ್ಟಡದಲ್ಲಿರುವ ತಮ್ಮ ಕಚೇರಿಯಿಂದ ಕೆಳ ಬಂದು ಕಾರು ಹತ್ತಿ ವಿಧಾನಸೌಧದಲ್ಲಿ ಬಂದಿಳಿದರು.
ನೇರವಾಗಿ ಪಂಚಾಯತ್ ರಾಜ್ ಮಂತ್ರಿ ಅಬ್ದುಲ್ ನಜೀರ್ ಸಾಬ್ ಅವರನ್ನು ಕಂಡರು. ಪ್ರಧಾನಿಯಿಂದಲೇ ಬಂದಿರುವ ಆಹ್ವಾನದ ಕುರಿತು ಏನು ಹೇಳಬೇಕೆಂದು ನಜೀರ್ ಸಾಬ್ ಅವರಿಗೂ ಆ ಕ್ಷಣಕ್ಕೆ ಹೊಳೆಯಲಿಲ್ಲ. ಸ್ವಲ್ಪ ಯೋಚಿಸಿ ಮೀನಾಕ್ಷಿ ಸುಂದರಂ ಅವರನ್ನೂ ಕರೆದುಕೊಂಡು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಭೇಟಿಯಾದರು.
ಎಲ್ಲಾ ವಿವರಗಳನ್ನೂ ಕೇಳಿಸಿಕೊಂಡ ರಾಮಕೃಷ್ಣ ಹೆಗಡೆ ಮೀನಾಕ್ಷಿ ಸುಂದರಂ ಅವರತ್ತ ನೋಡಿ: “ಕರ್ನಾಟಕದಲ್ಲಿ ನಾವು ಮಾಡುತ್ತಿರುವುದು ಕೇವಲ ಆಡಳಿತದ ವಿಕೇಂದ್ರಿಕರಣವಲ್ಲ; ನಾವು ಮಾಡುತ್ತಿರುವುದು ರಾಜಕೀಯ ವಿಕೇಂದ್ರೀಕರಣ. ಆಡಳಿತದ ವಿಕೇಂದ್ರೀಕರಣವಾಗಿದ್ದರೆ ನೀವು ಹೋಗುವುದು ಸರಿಯಿತ್ತು. ರಾಜಕೀಯ ವಿಕೇಂದ್ರೀಕರಣವನ್ನು ರಾಜಕಾರಣಿಯಾದ ನಾನು ಪ್ರಧಾನಿಗೆ ವಿವರಿಸುವುದೇ ಸರಿ. ಈ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿ. ಅವರದನ್ನು ಪ್ರಧಾನಿಗೇ ತಿಳಿಸಲಿ. ನಾನೇ ದೆಹಲಿಗೆ ಹೋಗುತ್ತೇನೆ” ಎಂದರು.
“ಸರ್ ನೀವೇ ಹೋಗ್ತೀರಾ?” ಎಂದು ಸ್ವಲ್ಪ ಆತಂಕದಿಂದಲೇ ಕೇಳಿದರು ನಜೀರ್ ಸಾಬ್. ಹೆಗಡೆಯವರು ರಾಜೀವ್ ಗಾಂಧಿಗಿಂತ ಹಿರಿಯ ರಾಜಕಾರಣಿ. ಮಾತ್ರವಲ್ಲ ಜನತಾಪಕ್ಷದ ಮುಂಚೂಣಿ ನಾಯಕರಾಗಿದ್ದು ಕಾಂಗ್ರೆಸ್ ರಾಜಕಾರಣವನ್ನು ವಿರೋಧಿಸುತ್ತಾ ಬಂದವರು. ಆದುದರಿಂದ ಹೆಗಡೆಯವರೇಕೆ ರಾಜೀವ್ ಗಾಂಧಿಯವರ ಮುಂದೆ ಹೋಗಿ ವಿವರಿಸಬೇಕು ಎಂಬುದು ನಜೀರ್ ಸಾಬ್ ಅವರ ಅಳುಕು. ಆದರೆ ಹೆಗಡೆಯವರಿಗೆ ಅದರ ಬಗ್ಗೆ ಏನೂ ಬೇಸರವಿರಲಿಲ್ಲ. “ಹೌದು ಕರೆದರೆ ನಾನೇ ಹೋಗುತ್ತೇನೆ” ಎಂದರು. ರಾಜೀವ್ ಗಾಂಧಿಯವರಿಂದ ಕರೆ ಬರಲಿಲ್ಲ. ಹೆಗಡೆಯವರು ಹೋಗಲಿಲ್ಲ.
64ನೇ ತಿದ್ದುಪಡಿಯ ಸೋಲು
ಸ್ಥಳೀಯಾಡಳಿತಕ್ಕೆ (ಅಂದರೆ ಪಂಚಾಯತ್ ರಾಜ್ ಮತ್ತು ನಗರ ಪಾಲಿಕೆಗಳಿಗೆ) ಸಾಂವಿಧಾನಿಕ ಸ್ಥಾನ ಮಾನವನ್ನು ನೀಡುವ ನಿಟ್ಟಿನಲ್ಲಿ ರಾಜೀವ್ ಗಾಂಧಿಯವರ ಕಾಲದಲ್ಲಿ ನಡೆದ ಪ್ರಯತ್ನವನ್ನು ಮೆಲುಕು ಹಾಕುತ್ತಾ ಒಬ್ಬರು ನಿವೃತ್ತ ಅಧಿಕಾರಿ ಹೇಳಿದರು: “ರಾಜೀವ್ ಗಾಂಧಿಯವರಲ್ಲಿ ಒಂದು ಗುಣ ಇರಲಿಲ್ಲ ನೋಡಿ. ಅದು ರಾಜಕೀಯವಾಗಿ ಹೊಂದಾಣಿಕೆ ಮಾಡಿಕೊಳ್ಳುವ, ಎಲ್ಲಾ ಪಕ್ಷದವರ ವಿಶ್ವಾಸಗಳಿಸಿಕೊಳ್ಳುವ ಗುಣ. ಅದೊಂದು ಇದ್ದಿದ್ದರೆ ತಮ್ಮ ಅಧಿಕಾರವಧಿಯಲ್ಲೇ ಆಡಳಿತ ವಿಕೇಂದ್ರಿಕರಣಕ್ಕೆ ಸಂವಿಧಾನಕ್ಕೆ ಮಾನ್ಯತೆ ತಂದು ಕೊಡಲು ಅವರಿಗೆ ಸಾಧ್ಯವಾಗುತಿತ್ತು.”
ಹೆಗಡೆಯವರನ್ನು ಕರೆಯಿಸಿಕೊಳ್ಳದೇ ಹೋದ ಅವರ ನಿರ್ಧಾರದ ಹಿಂದೆ ಕೂಡಾ ಈ ರಾಜಕೀಯ ಅಪಕ್ವತೆಯೇ ಕೆಲಸ ಮಾಡಿರಬೇಕು. ಅಭೂತಪೂರ್ವ ಬಹುಮತದ ಸರ್ಕಾರ ನಡೆಸುತ್ತಿದ್ದ ರಾಜೀವ್ ಗಾಂಧಿಯವರಿಗೆ ಉಳಿದ ಸಂದರ್ಭದಲ್ಲಾದರೆ ಒಂದಷ್ಟು ರಾಜಕೀಯ ಅಪಕ್ವತೆಯಿದ್ದರೂ ಅದರಿಂದ ಕಳೆದುಕೊಳ್ಳುವುದು ಏನೂ ಇರಲಿಲ್ಲ. ಆದರೆ ಅವರು ಪಂಚಾಯತ್ ರಾಜ್ ವ್ಯವಸ್ಥೆಗೆ ಸಾಂವಿಧಾನಿಕ ಮಾನ್ಯತೆ ದೊರಕಿಸಿ ಚರಿತ್ರೆ ಸೃಷ್ಟಿಸಲು ಹೊರಟಿದ್ದರು. ಅದು ಅವರು ಅಂದು ಕೊಂಡಷ್ಟು ಸುಲಭದ ಕೆಲಸವಾಗಿರಲಿಲ್ಲ.
ಒಂದು ರೀತಿಯಲ್ಲಿ ಅವರಿಗಿಂತ ದೊಡ್ಡ ಮುತ್ಸದ್ಧಿಯಾಗಿದ್ದ ಅವರ ಅಜ್ಜ ನೆಹರೂ ಅವರಿಗೆ ಕೂಡಾ ಈ ಕ್ಷೇತ್ರದಲ್ಲಿ ಅಂದುಕೊಂಡದ್ದನ್ನು ಮಾಡಲಾಗಿರಲಿಲ್ಲ. ಉಳಿದ ಪಕ್ಷಗಳ ವಿಚಾರ ಬಿಡಿ. ಕಾಂಗ್ರೆಸ್ಸಿನೊಳಗೇ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಭದ್ರಪಡಿಸುವುದಕ್ಕೆ ನೆಹರೂ ಕಾಲದಿಂದಲೇ ವಿರೋಧವಿತ್ತು. ಎಲ್ಲಿಯವರೆಗೆ ಅಂದರೆ ನೆಹರೂ ಕಾಲವಾದ ನಂತರ ಸದ್ದಿಲ್ಲದೆ ಅವರು ಸೃಷ್ಟಿಸಿದ್ದ ಪಂಚಾಯತ್ ರಾಜ್ ಮಂತ್ರಾಲಯವನ್ನು ಕಿತ್ತು ಹಾಕಲಾಗಿತ್ತು.
ರಾಜೀವ್ ಗಾಂಧಿ ತನ್ನ ಪಕ್ಷದವರನ್ನು ಹೇಗೋ ಈ ವಿಚಾರದಲ್ಲಿ ನಿಭಾಯಿಸಿದ್ದರು. ಪಂಚಾಯತ್ ರಾಜ್ಗೊಂದು ಕಾಯಕಲ್ಪ ಮಾಡಿಯೇ ಸಿದ್ಧ ಎಂದು ಹೊರಟಿದ್ದರು. ಅಧಿಕಾರಕ್ಕೆ ಬಂದ ದಿನದಿಂದಲೇ ದೇಶ ಸುತ್ತಿದರು. ಆ ತನಕ ಪಂಚಾಯತ್ ರಾಜ್ಗೆ ಸಂಬಂಧಿಸಿದಂತೆ ನೀಡಲಾದ ವರದಿಗಳನ್ನು (ಮುಖ್ಯವಾಗಿ ೧೯೫೭ ರ ಬಲವಂತ್ ರಾಯ್ ಮೆಹ್ತಾ ಸಮಿತಿ ಮತ್ತು ೧೯೭೮ ರ ಅಶೋಕ್ ಮೆಹ್ತಾ ಸಮಿತಿ ವರದಿಗಳನ್ನು) ಪರಿಶೀಲಿಸಿದರು. ಹೈದರಾಬಾದ್ನ ರಾಷ್ಟ್ರೀಯ ಗ್ರಾಮೀ ಗ್ರಾಮೀಣಾಭಿವೃದ್ಧಿ ಅಧ್ಯಯನ ಸಂಸ್ಥೆ (ಎನ್.ಐ.ಆರ್.ಡಿ) ಯಲ್ಲಿ ದೇಶದ ಎಲ್ಲಾ ಜಿಲ್ಲಾಧಿಕಾರಿಗಳನ್ನು ಕರೆದು ಸಮಾಲೋಚಿಸಿದರು. ೧೯೮೫ರಲ್ಲಿ ಅವರ ಸರ್ಕಾರ ನೇಮಿಸಿದ ಜಿ.ವಿ.ಕೆ. ರಾವ್ ಸಮಿತಿ ಗ್ರಾಮೀಣ ಪ್ರದೇಶದಲ್ಲಿ ಆಡಳಿತವನ್ನು ಹೇಗೆ ಜನಪರಗೊಳಿಸಬಹುದು ಎಂಬ ನಿಟ್ಟಿನಲ್ಲಿ ವಿಸ್ತೃತ ವರದಿ ನೀಡಿತ್ತು.
೧೯೮೬ರಲ್ಲಿ ನೇಮಿಸಲಾದ ಎಲ್.ಎಂ. ಸಿಂಘ್ವಿ ಸಮಿತಿ ಪಂಚಾಯತ್ ರಾಜ್ ವ್ಯವಸ್ಥೆ ಭದ್ರವಾಗಬೇಕಾದರೆ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು ಎಂದು ಹೇಳಿತ್ತು. ಇವೆಲ್ಲಾ ಸಿದ್ದತೆಯೊಂದಿಗೆ ರಾಜೀವ್ ಗಾಂಧಿ ೬೪ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆ ಸಿದ್ದಪಡಿಸಿದರು. ಸ್ವತಃ ಅವರೇ ಲೋಕಸಭೆಯಲ್ಲಿ ಮಂಡಿಸಿದರು. ಭಾವಪೂರ್ಣ ಮತ್ತು ವಿದ್ವತ್ಪೂರ್ಣವಾಗಿ ಮಾತನಾಡಿದರು. ಅಕ್ಟೋಬರ್ ೧೩, ೧೯೮೯ ರಂದು ಲೋಕಸಭೆ ಅಸ್ತು ಎಂದಿತು. ರಾಜ್ಯ ಸಭೆಯಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ಹೆಚ್ಚಿನ ರಾಜ್ಯಗಳಲ್ಲಿ ಕಾಂಗ್ರೆಸ್ಸೇತರ ಸರ್ಕಾರಗಳಿದ್ದ ಕಾರಣ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಬಲ ಕಡಿಮೆ ಇತ್ತು.
ಅಲ್ಲಿ ೬೪ ನೇ ತಿದ್ದುಪಡಿಯನ್ನು ವಿರೋಧ ಪಕ್ಷಗಳು ಸೋಲಿಸಿದವು. ಸಂವಿಧಾನಕ್ಕೆ ಚಾರಿತ್ರಿಕ ತಿದ್ದುಪಡಿಯೊಂದನ್ನು ತಂದ ಕೀರ್ತಿ ಪೂರ್ಣವಾಗಿ ರಾಜೀವ್ ಗಾಂಧಿಯವರಿಗೆ ಸಿಗುವ ಅವಕಾಶ ಆ ಮೂಲಕ ತಪ್ಪಿ ಹೋಯಿತು. ರಾಜೀವ್ ಗಾಂಧಿಯವರು ಸ್ವಲ್ಪ ಮುತ್ಸದ್ಧಿತನ ತೋರಿ ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವ್ಯವಹರಿಸಿದ್ದರೂ ತಿದ್ದುಪಡಿ ಆಗಿಯೇ ಬಿಡುತಿತ್ತು.
ವಿಘ್ನಗಳಲ್ಲಿ ಅರಳಿದ ವಿಕೇಂದ್ರೀಕರಣ
ಆ ಮುತ್ಸದ್ದಿತನ ತೋರಿಸಿದ್ದು ರಾಜೀವ್ ಗಾಂಧಿಯವರ ಮರಣಾನಂತರ ಅಕಸ್ಮಿಕವಾಗಿ ಪ್ರಧಾನಿಯಾದ ಪಿ.ವಿ. ನರಸಿಂಹ ರಾವ್. ಅವರಿಗಿಂತ ಮೊದಲು ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್ ಕೂಡಾ ಈ ನಿಟ್ಟಿನಲ್ಲಿ ಒಂದು ಪ್ರಯತ್ನ ಮಾಡಿದರೂ ಅವರು ಮಂಡಿಸಿದ ವಿಧೇಯಕ (ಸೆಪ್ಟಂಬರ್ ೧೯೯0) ಚರ್ಚೆಗೆ ಬರುವುದಕ್ಕೆ ಮೊದಲೇ ಸರ್ಕಾರ ಬಿದ್ದುಹೋಯಿತು.
ರಾಜೀವ್ ಗಾಂಧಿಯವರ ಕನಸನ್ನು ನನಸು ಮಾಡುವಲ್ಲಿ ನರಸಿಂಹ ರಾವ್ ಎದುರಿಸಿದ ಸಂಕಷ್ಟಗಳು ಒಂದೆರಡಲ್ಲ. ಒಳಗೊಳಗಿಂದ ಎಲ್ಲಾ ಪಕ್ಷಗಳ ಸಂಸದರೂ ವಿಧೇಯಕವನ್ನು ಹೇಗಾದರೂ ಮಾಡಿ ಬಲಹೀನಗೊಳಿಸಬೇಕೆಂದು ಹುನ್ನಾರ ನಡೆಸುತ್ತಿದ್ದರು. ತಮ್ಮ ಅಸ್ತಿತ್ವವೇ ಅಪ್ರಸ್ತುತವಾಗುತ್ತದೆ ಎಂದು ಗೋಳಿಟ್ಟ ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಿಗೆ ಸಂಸದರ ನಿಧಿ ಸ್ಥಾಪಿಸಿ ನರಸಿಂಹ ರಾವ್ ಸಮಾಧಾನಪಡಿಸಿದರು. ಕರ್ನಾಟಕದಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ೧೯೮೩ರ ಕರ್ನಾಟಕ ಪಂಚಾಯತ್ ರಾಜ್ ವಿಧೇಯಕವನ್ನು ಜಾರಿಗೆ ತರಲು ಹೊರಟಾಗಲೂ ಇಂತಹದ್ದೇ ವಿರೋಧ ಶಾಸಕರಿಂದ ಬಂದಿತ್ತು. ಆಗ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ಪದ್ಧತಿಯನ್ನು ಜಾರಿಗೆ ತಂದಿದ್ದರು.
ಸಂಸದರು ತಮ್ಮನ್ನು ಸ್ಥಳೀಯ ಸಂಸ್ಥೆಗಳ ಪದನಿಮಿತ್ತ ಸದಸ್ಯರನ್ನಾಗಿ ಮಾಡಬೇಕು ಎಂದು ನರಸಿಂಹ ರಾವ್ ಅವರ ಬಳಿ ಹಠ ಹಿಡಿದರು. ನರಸಿಂಹ ರಾವ್ ಅದಕ್ಕೂ ಹೂಂಗುಟ್ಟುವುದರಲ್ಲಿದ್ದರು. ಆದರೆ ಕೆಲ ಅಧಿಕಾರಿಗಳಿಗೆ ಸಂಸದರು ಮತ್ತು ಶಾಸಕರು ಪಂಚಾಯತ್ಗಳಲ್ಲಿ ಮತ್ತು ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕುಳಿತು ಅಧಿಕಾರ ಚಲಾಯಿಸುವುದು ಸರಿತೋರಲಿಲ್ಲ. ಅವರೆಲ್ಲಾ ನರಸಿಂಹ ರಾವ್ ಅವರನ್ನು ಭೇಟಿ ಮಾಡಿ ಇದೊಂದಕ್ಕೆ ಅನುವು ಮಾಡಿಕೊಡಬಾರದು ಎಂದು ಕೇಳಿಕೊಂಡರು. ರಾಜೀವ್ ಗಾಂಧಿಯವರ ಕಾಲದಿಂದಲೂ ಈ ವಿಧೇಯಕ್ಕಾಗಿ ತುಂಬ ಬದ್ಧತೆಯಿಂದ ದುಡಿದಿದ್ದ ಈ ಅಧಿಕಾರಿಗಳ ಅಭಿಪ್ರಾಯವನ್ನು ಅಷ್ಟೊಂದು ಸುಲಭದಲ್ಲಿ ಕಡೆಗಣಿಸುವಂತಿರಲಿಲ್ಲ.
ನರಸಿಂಹ ರಾವ್ ಒಂದು ರಾತ್ರಿ ಅವರನ್ನೆಲ್ಲಾ ತಮ್ಮ ಮನೆಗೆ ಕರೆದು ಹೇಳಿದರು: “ಅತ್ಯುತ್ತಮವಾದ ವ್ಯವಸ್ಥೆಯೇ ಬೇಕೆಂದು ಕಾಯುತ್ತಾ ಕುಳಿತರೆ ಉತ್ತಮವಾದ ಒಂದು ವ್ಯವಸ್ಥೆಯನ್ನು ತರುವ ಅವಕಾಶವನ್ನೂ ನಾವು ಕಳೆದುಕೊಳ್ಳುತ್ತೇವೆ. Best is the enemy of good. ಸದ್ಯಕ್ಕೆ ಸಂಸದರು ಮತ್ತು ಶಾಸಕರನ್ನು ಪಂಚಾಯತ್ನಲ್ಲಿ ಸದಸ್ಯರಾಗಲು ಅವಕಾಶ ನೀಡೋಣ. ಬೇಕಾದರೆ ಅಂತಿಮ ನಿರ್ಣಯವನ್ನು ಆಯಾ ರಾಜ್ಯಗಳಿಗೆ ಬಿಡೋಣ. ಅದು ಸರಿಯಲ್ಲ ನಿಜ.
ಆದರೆ ನಾವು ಹಾಗೆ ಮಾಡದೇ ಹೋದರೆ, ಈ ವಿಧೇಯಕ ಈಗಲೂ ಒಪ್ಪಿಗೆ ಪಡೆಯುವುದಿಲ್ಲ. ಒಳ್ಳೆಯದೋ ಕೆಟ್ಟದೋ ಒಂದು ಬದಲಾವಣೆ ಬಂದು ಬಿಡಲಿ. ಆ ನಂತರ ಅದನ್ನು ಸುಧಾರಿಸುವುದು ಇದ್ದೇ ಇದೆ. ಇಷ್ಟೊಂದು ಬಾರಿ ಸಂವಿಧಾನವನ್ನೇ ತಿದ್ದಿದ್ದೇವೆ ಎಂದ ಮೇಲೆ ಪಂಚಾಯತ್ ವ್ಯವಸ್ಥೆಯಲ್ಲಿ ಒಂದಷ್ಟು ಬದಲಾವಣೆ ತರುವುದು ಕಷ್ಟವೇನಲ್ಲ. ಕಾಲ ಪಕ್ವವಾದಾಗ ಅದನ್ನು ಮುಂದಿನ ತಲೆಮಾರು ಮಾಡೀತು.”
ಇದನ್ನು ಕೇಳಿದ ಅಧಿಕಾರಿಗಳು ಸುಮ್ಮನಾದರು. ಆದರೆ ಸಂಕಷ್ಟ ಅಲ್ಲಿಗೆ ಮುಗಿಯಲಿಲ್ಲ. ತಮಿಳುನಾಡಿನಲ್ಲಿ ಎಂದೂ ಒಂದಾಗದ ಡಿಎಂಕೆ ಮತ್ತು ಎಐಎಡಿಎಂಕೆ ಪಂಚಾಯತ್ ರಾಜ್ ವಿಧೇಯಕವನ್ನು ವಿರೋಧಿಸುವಲ್ಲಿ ಮಾತ್ರ ಒಂದೇ ಸ್ವರದಲ್ಲಿ ಮಾತನಾಡಲಾರಂಭಿಸಿದವು. ಯಾವ ಕಾರಣಕ್ಕೂ ಈ ವಿಧೇಯಕ ಜಾರಿಗೊಳ್ಳಬಾರದು ಎಂದು ಹಠ ಹಿಡಿದವು. ಹೇಳಿ ಕೇಳಿ ನರಸಿಂಹ ರಾವ್ ಅವರದ್ದು ಅಲ್ಪಮತದ ಸರ್ಕಾರ. ಅವರು ಯಾರನ್ನೂ ಎದುರು ಹಾಕಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ನರಸಿಂಹ ರಾವ್ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ತಮಿಳುನಾಡು ಮೂಲದ ಹಿರಿಯ ಐಎಎಸ್ ಅಧಿಕಾರಿಯೊಬ್ಬರನ್ನು ಕರೆದು ಹೇಳಿದರು: “ನಿಮ್ಮ ರಾಜ್ಯದ ಸಂಸದರಿಗೆ ನಾವೇನು ಬದಲಾವಣೆ ತರಹೊರಟಿದ್ದೇವೆ ಎನ್ನುವ ಪೂರ್ಣ ಕಲ್ಪನೆ ಇಲ್ಲ.
ನೀವು ಅವರ ಜತೆ ತಮಿಳಿನಲ್ಲಿ ಮಾತನಾಡಿ. ಎಲ್ಲವನ್ನೂ ಎಳೆಎಳೆಯಾಗಿ ವಿವರಿಸಿ. ಮುಂದಿನದ್ದನ್ನು ನಾನು ನಿಭಾಯಿಸುತ್ತೇನೆ”. ಚಾಣಕ್ಷರಾದ ಆ ಅಧಿಕಾರಿ ತಮಿಳುನಾಡಿನ ಸಂಸದರಿಗೆ ಮನವರಿಕೆಯಾಗುವಂತೆ ವಿಕೇಂದ್ರೀಕರಣದ ಬಗ್ಗೆ ಹೇಳಿದರು. ಅದನ್ನು ಕೇಳಿಸಿಕೊಂಡ ತಮಿಳು ಸಂಸದರು “ಎಲ್ಲಾ ಸರಿ. ಗ್ರಾಮ ಪಂಚಾಯತ್ ಮತ್ತು ತಾಲೂಕು ಪಂಚಾಯತ್ಗಳು ಬೇಕಾದರೆ ಇರಲಿ. ಆದರೆ ಜಿಲ್ಲಾ ಪಂಚಾಯತ್ಗಳ ಸ್ಥಾಪನೆಗೆ ಈ ವಿಧೇಯಕ ಅನುವು ಮಾಡಿಕೊಡುವುದಾದರೆ ನಾವು ಅದನ್ನು ವಿರೋಧಿಸುತ್ತೇವೆ” ಎಂದರು.
ಈ ಹೊತ್ತಿಗಾಗಲೇ ಕೆಲ ವಿರೋಧ ಪಕ್ಷಗಳು ಜನಾಭಿಪ್ರಾಯಕ್ಕೆ ಹೆದರಿ ವಿಧೇಯಕವನ್ನು ಬೆಂಬಲಿಸುವ ನಿರ್ಣಯ ತೆಗೆದುಕೊಂಡಾಗಿತ್ತು. ನರಸಿಂಹರಾವ್ ತಮಿಳುನಾಡಿನ ಸಂಸದರನ್ನು ಕರೆದು ಹೇಳಿದರು. “ಎಲ್ಲರೂ ಈಗ ವಿಧೇಯಕದ ಪರವಾಗಿದ್ದಾರೆ. ನೀವು ವಿರೋಧಿಸಿದರೂ ವಿಧೇಯಕ ಗೆಲ್ಲುವ ಎಲ್ಲಾ ಸಾಧ್ಯತೆಗಳಿವೆ. ಆದುದರಿಂದ ನೀವು ವಿರೋಧಿಸಬೇಡಿ. ಬೇಕಾದರೆ ವಿಧೇಯಕವನ್ನು ಮತಕ್ಕೆ ಹಾಕುವ ಹೊತ್ತಿಗೆ ಕಲಾಪ ಬಹಿಷ್ಕರಿಸಿ ಹೊರ ಹೋಗಿ. ಹಾಗೆ ಮಾಡಿದರೆ ನಿಮ್ಮ ಮಾನವೂ ಉಳಿಯಿತು, ನಮಗೂ ಸಹಾಯವಾದೀತು” ಎಂದರು. ತಮಿಳು ಸಂಸದರಿಗೆ ಬೇರೆ ದಾರಿ ಇರಲಿಲ್ಲ. ಒಪ್ಪಿದರು.
ಎಲ್ಲ ವಿಘ್ನಗಳೂ ನಿವಾರಣೆಯಾದವು. ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಗಳು ವಿಧೇಯಕದಲ್ಲಿ ಕೊನೆಯ ಕ್ಷಣದ ಕೆಲ ಮಾರ್ಪಾಡುಗಳನ್ನು ಮಾಡಿ ಸಂಸತ್ತಿನಲ್ಲಿ ಮಂಡನೆಗೆ ತಯಾರಿ ನಡೆಸುತ್ತಿದ್ದರು. ಅಧಿಕಾರಿಗಳ ಕೊನೆಯ ಸಭೆ ಇನ್ನೇನು ಮುಗಿಯಬೇಕು ಎನ್ನುವಾಗ ಬಂದದ್ದು ಬಾಬರಿ ಮಸೀದಿ ನೆಲಸಮವಾದ ಸುದ್ದಿ. ಇದನ್ನು ಕೇಳುತ್ತಲೇ ಮೇಲೆದ್ದ ಆಗಿನ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಅಲ್ಲಿದ್ದ ಅಧಿಕಾರಿಗಳ ಬಳಿ ಹೇಳಿದರಂತೆ: “ಇದೊಂದು ಶಾಪಗ್ರಸ್ತ ವಿಧೇಯಕ. ಬಹುಶಃ ಇದು ಎಂದೆಂದಿಗೂ ಜಾರಿಯಾಗುವುದಿಲ್ಲ”
ಆದರೆ ನರಸಿಂಹ ರಾವ್ ಬಿಡಲಿಲ್ಲ.
ಬಾಬರಿ ಮಸೀದಿ ಧ್ವಂಸದ ಹಿನ್ನೆಲೆಯಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟಿನ ನಡುವೆಯೇ ಸಂಸತ್ತು ಸೇರಿದಾಗ ಗ್ರಾಮೀಣಾಭಿವೃದ್ಧಿ ಸಚಿವ ಜಿ.ವೆಂಕಟಸ್ವಾಮಿಯ ಅವರ ಕೈಯಲ್ಲಿ ೭೩ನೇ ಸಂವಿಧಾನ ತಿದ್ದುಪಡಿ ವಿಧೇಯಕ ಮಂಡಿಸಿಯೇಬಿಟ್ಟರು. ಜತೆಗೆ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾಂವಿಧಾನಿಕ ಮಾನ್ಯತೆ ನೀಡುವ ೭೪ನೇ ತಿದ್ದುಪಡಿ ವಿಧೇಯಕವೂ ಮಂಡನೆಯಾಯಿತು. ಡಿಸಂಬರ್ 22, 1992 ರಂದು ಲೋಕಸಭೆ ಉಭಯ ವಿಧೇಯಕಗಳಿಗೂ ಅನುಮೋದನೆ ನೀಡಿತು. ಮರುದಿನ ರಾಜ್ಯ ಸಭೆಯೂ ಅನುಮೋದನೆ ನೀಡಿತು. ಎಂದೂ ನಗದ ನರಸಿಂಹ ರಾವ್ ಅವರ ಮುಖದಲ್ಲಿ ಸಣ್ಣ ಮುಗುಳ್ನಗೆಯೊಂದು ಸುಳಿದು ಮಾಯವಾಯಿತು. ಕೇಂದ್ರ, ರಾಜ್ಯ ಸರ್ಕಾರಗಳಿರುವ ಸಾಂವಿಧಾನಿಕ ಮಾನ್ಯತೆ ಸ್ಥಳೀಯ ಸರ್ಕಾರವಾದ ಪಂಚಾಯತ್ ರಾಜ್ ಸಂಸ್ಥೆಗಳಿಗೂ ಬಂತು.
ರಾಷ್ಟ್ರಪತಿಗಳ ಅಂಕಿತ ಬಿದ್ದ ನಂತರ ೭೩ನೇ ತಿದ್ದುಪಡಿ ವಿಧೇಯಕ ಎಪ್ರಿಲ್ ೨೩, ೧೯೯೩ರಂದು ಜಾರಿಗೆ ಬಂತು. ೭೪ನೇ ತಿದ್ದುಪಡಿ ಜೂನ್ ೧, ೧೯೯೩ರಂದು ಜಾರಿಗೆ ಬಂತು. ಸಂವಿಧಾನಕ್ಕೆ ಪಂಚಾಯತುಗಳು ಎಂಬ ಶೀರ್ಷಿಕೆಯ ಭಾಗ IX ಮತ್ತು ಪುರಸಭೆಗಳು (Municipalities) ಎಂಬ ಶೀರ್ಷಿಕೆಯ ಭಾಗ IXA ಸೇರ್ಪಡೆಯಾದವು.
(ಭಾರತದಲ್ಲಿ ಆಡಳಿತ ಸುಧಾರಣೆಗಳ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಆಯಾಮಗಳ ಚಾರಿತ್ರಿಕ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವ ಲೇಖಕರು ಅಜೀಂ ಪ್ರೇಮ್ಜಿ ವಿಶ್ವವಿದ್ಯಾಲಯದಲ್ಲಿ ಸಹ ಪ್ರಾಧ್ಯಾಪಕರು.)
ಸಂಸದರು ಮತ್ತು ಶಾಸಕರ ಅಭದ್ರತೆ
ಪಂಚಾಯತ್ ರಾಜ್ ವ್ಯವಸ್ಥೆಯ ಪರಿಕಲ್ಪನೆ ಮೂಡಿದಂದಿನಿಂದಲೂ ಅದನ್ನು ಜಾರಿಗೆ ತರಲು ದೊಡ್ಡ ಸವಾಲಾಗಿದ್ದದ್ದು ಶಾಸಕರು ಮತ್ತು ಸಂಸದರ ಅಭದ್ರತೆ. ಇದನ್ನು ನಿವಾರಿಸುವುದಕ್ಕಾಗಿ ರಾಮಕೃಷ್ಣ ಹೆಗಡೆ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸುವ ಪರಿಪಾಠ ಆರಂಭಿಸಿ ‘ಅಧಿಕಾರ ನಿಮ್ಮ ಕೈಯಲ್ಲೂ ಇದೆ’ ಎಂಬ ಭರವಸೆಯನ್ನು ಶಾಸಕರಿಗೆ ನೀಡಿದರು.
ಪಿ.ವಿ.ನರಸಿಂಹ ರಾವ್ ಅವರು ಸಂಸದರ ಸ್ಥಳೀಯಾಭಿವೃದ್ಧಿ ನಿಧಿಯ ಪರಿಪಾಠ ಆರಂಭಿಸಿ ‘ಅಭಿವೃದ್ಧಿಗೆ ನೀವೂ ಹಣ ಮಂಜೂರು ಮಾಡಬಹುದು’ ಎಂದು ಸಂಸದರಲ್ಲಿ ಧೈರ್ಯ ತುಂಬಿದರು. ಗ್ರಾಮಸಭೆಗಳಿಗೆ, ವಾರ್ಡ್ ಸಭೆಗಳಿಗೆ ಶಕ್ತಿ ತುಂಬುವ ವಿಚಾರ ಕೂಡಾ ಈ ಸಂಧಾನ ಪ್ರಕ್ರಿಯೆಯಿಂದಾಗಿ ಇನ್ನೂ ಸಂಪೂರ್ಣವಾಗಿ ಕಾರ್ಯರೂಪಕ್ಕೆ ಬಂದಿಲ್ಲ.
ಬರಹಗಳಿಗೆ ಸ್ವಾಗತ
ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವವರು, ಅಧ್ಯಯನ–-ಸಂಶೋಧನೆಗಳಲ್ಲಿ ತೊಡಗಿರುವವರು, ಈ ಕ್ಷೇತ್ರದ ಕುರಿತ ಆಸಕ್ತಿ ಇರುವ ಎಲ್ಲರೂ ‘ಪಂಚಾಯತ್ ರಾಜ್–20’ ವಿಶೇಷ ಪುಟದಲ್ಲಿ ನಡೆಯುವ ಚರ್ಚೆ, ವಿಶ್ಲೇಷಣೆಗಳಲ್ಲಿ ಭಾಗಿಯಾಗಬಹುದು. ನೀವು ಏನನ್ನು ಬರೆಯಬಯಸುತ್ತೀರಿ ಎಂಬುದರ ಕುರಿತಂತೆ ಈ ಕೆಳಗಿನ ಇ–ಮೇಲ್ ವಿಳಾಸ ಅಥವಾ ಅಂಚೆ ವಿಳಾಸಕ್ಕೆ ಒಂದು ಸಂಕ್ಷಿಪ್ತ ಪ್ರಸ್ತಾವನೆಯನ್ನು ಕಳುಹಿಸಿದರೆ ನಮ್ಮ ಸಂಪಾದಕೀಯ ಬಳಗದ ಸದಸ್ಯರು ನಿಮ್ಮನ್ನು ಸಂಪರ್ಕಿಸುತ್ತಾರೆ.
ನಿಮ್ಮ ಪ್ರಸ್ತಾವನೆಗಳನ್ನು ಕಳುಹಿಸಬೇಕಾದ ವಿಳಾಸ. ಸಂಪಾದಕರು, ಪಂಚಾಯತ್ ರಾಜ್-20, ಪ್ರಜಾವಾಣಿ, ನಂ.75, ಮಹಾತ್ಮಾಗಾಂಧಿ ರಸ್ತೆ, ಬೆಂಗಳೂರು–560001, ಇ–ಮೇಲ್: panchayathraj20@prajavani.co.in
ಕರ್ನಾಟಕದಲ್ಲಿ ಸ್ಥಳೀಯ ಸರ್ಕಾರದ ಪ್ರಯೋಗಗಳು
ಕರ್ನಾಟಕದ ಮಟ್ಟಿಗೆ ಸ್ಥಳೀಯ ಸರ್ಕಾರ ಎಂಬ ಪರಿಕಲ್ಪನೆ ಹೊಸತಲ್ಲ. ಸಂವಿಧಾನದ 73ನೇ ತಿದ್ದುಪಡಿಯ ತನಕ ಕರ್ನಾಟಕದಲ್ಲಿ ಆದ ಪ್ರಯೋಗಗಳು ಹಲವು. ಅವುಗಳ ಸ್ಥೂಲ ಚಿತ್ರಣ ಇಲ್ಲಿದೆ.
1862: ಮೈಸೂರು ಸಂಸ್ಥಾನದ ವ್ಯಾಪ್ತಿಯಲ್ಲಿ ಲೋಕಲ್ ಫಂಡ್ (ಸ್ಥಳೀಯ ನಿಧಿ) ಎಂಬ ಪರಿಕಲ್ಪನೆ ಅನುಷ್ಠಾನಕ್ಕೆ ಬಂತು. ಇದರ ಅನ್ವಯ ಗ್ರಾಮಗಳಿಗೆ ತಮ್ಮದೇ ಸಂಪನ್ಮೂಲ ಸಂಗ್ರಹಣೆ ಮತ್ತು ವೆಚ್ಚ ಮಾಡುವ ಅಧಿಕಾರ ದತ್ತವಾಯಿತು. ರೈತರ ಉಳುಮೆ ಕರ, ದೋಣಿ ಕಡವಿನ ತೆರಿಗೆ, ಬೀಗಿ ದನಗಳ ಮಾರಾಟ, ಜಾನುವಾರುಗಳ ಅತಿಕ್ರಮಕ್ಕೆ ಹಾಕುತ್ತಿದ್ದ ದಂಡ ಇತ್ಯಾದಿಗಳನ್ನು ರಾಜ್ಯದ ಸಾಮಾನ್ಯ ನಿಧಿಯಿಂದ ಪ್ರತ್ಯೇಕಿಸಿ ಗ್ರಾಮಗಳೇ ತಮ್ಮ ರಸ್ತೆ ಇತ್ಯಾದಿ ಕಾಮಗಾರಿಗೆ ಬಳಸುವ ಅವಕಾಶ ಕಲ್ಪಿಸಲಾಯಿತು.
1884: ಲೋಕಲ್ ಫಂಡ್ ಸಮಿತಿಗಳು ರೂಪುಗೊಂಡವು. ಇವು ಜಿಲ್ಲಾ ಮಟ್ಟದಲ್ಲಿದ್ದ ಸ್ಥಳೀಯ ಸರ್ಕಾರಗಳು. ಇದರಲ್ಲಿ ಆಡಳಿತ ವ್ಯವಸ್ಥೆಯ ಪ್ರತಿನಿಧಿಯಾಗಿ ಜಿಲ್ಲಾ ಕಮಿಷನರ್ ಇರುತ್ತಿದ್ದರು. ಇದರ ಸದಸ್ಯರಾಗಿ ಸಹಾಯಕ ಕಮಿಷನರ್, ಕಾರ್ಯನಿರ್ವಾಹ ಇಂಜಿನಿಯರ್, ಎಲ್ಲಾ ಅಮಲ್ದಾರರು, ನಾಮಕರಣಗೊಳ್ಳುತ್ತಿದ್ದ ಜನಪ್ರತಿಧಿಗಳು, ಆಯ್ದ ಭೂಮಾಲಿಕರು ಸದಸ್ಯರಾಗಿರುತ್ತಿದ್ದರು. ಇದರ ಸಭೆ ವರ್ಷದಲ್ಲಿ ಎರಡು ಬಾರಿ ಮಾತ್ರ ನಡೆಯುತ್ತಿದ್ದವು.
1903: ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್-1902. ಈ ಕಾಯ್ದೆ ಅನುಷ್ಠಾನಕ್ಕೆ ಬಂದದ್ದು 1903ರಲ್ಲಿ. ಈ ಕಾಯಿದೆಯನ್ವಯ ಜಿಲ್ಲಾ ಮಂಡಳಿ, ತಾಲೂಕು ಮಂಡಳಿ ಮತ್ತು ಪಂಚಾಯಿತಿ ಸಂಘಟನೆ ಎಂಬ ಮೂರು ಹಂತದ ಸ್ಥಳೀಯ ಸರ್ಕಾರ ರೂಪುಗೊಂಡಿತು. ಇದರಲ್ಲಿ ಸದಸ್ಯರಾಗಿರುವ ಅಧಿಕಾರಿಗಳ ಸಂಖ್ಯೆಯನ್ನು ಒಟ್ಟು ಸದಸ್ಯರ ಸಂಖ್ಯೆಯ ಮೂರನೇ ಒಂದರಷ್ಟಕ್ಕೆ ಮಿತಿಗೊಳಿಸಲಾಯಿತು. ಇದಕ್ಕೆ ಜಿಲ್ಲಾ ಮಂಡಳಿಗೆ ಎಲ್ಲಾ ತಾಲೂಕುಗಳಿಂದ ಒಬ್ಬೊಬ್ಬ ಸದಸ್ಯರು ಚುನಾಯಿತರಾಗುತ್ತಿದ್ದರು. ತಾಲೂಕು ಮಂಡಳಿಗೆ ನಾಲ್ಕು ಮಂದಿ ಹಿಡುವಳಿದಾರರನ್ನು ಚುನಾಯಿಸಿ ಆರಿಸಬಹುದಿತ್ತು. ಕೊನೆಯ ಹಂತದ ಪಂಚಾಯಿತಿ ಸಂಘಟನೆಯ ಎಲ್ಲಾ ಸದಸ್ಯರು ಮತ್ತು ಅಧ್ಯಕ್ಷರನ್ನು ಜಿಲ್ಲಾ ಕಲೆಕ್ಟರ್ ಸಲಹೆಯ ಮೇರೆ ನಾಮ ನಿರ್ದೇಶನ ಮಾಡಲಾಗುತ್ತಿತ್ತು.
1919: ಮೈಸೂರು ಲೋಕಲ್ ಬೋರ್ಡ್ ಮತ್ತು ವಿಲೇಜ್ ಪಂಚಾಯಿತ್ ಕಾಯ್ದೆ-2. ಇದು 1918ರಲ್ಲಿ ರೂಪುಗೊಂಡಿತಾದರೂ ಜಾರಿಗೆ ಬಂದದ್ದು 1919ರಲ್ಲಿ. ಈ ಕಾಯ್ದೆನ್ವಯ ಜಿಲ್ಲಾ ಮಂಡಳಿಯ ಸದಸ್ಯರ ಒಟ್ಟು ಸಂಖ್ಯೆಯಲ್ಲಿ ಮೂರನೇ ಎರಡರಷ್ಟನ್ನು ಚುನಾವಣೆಯ ಮೂಲಕ ಆರಿಸಬೇಕಾಗಿತ್ತು. ತಾಲೂಕು ಮಂಡಳಿಯ 20 ಸದಸ್ಯರಲ್ಲಿ 10 ಮಂದಿ ಚುನಾಯಿತ ಸದಸ್ಯರಿರಲು ಅವಕಾಶ ದೊರೆಯಿತು. ಗ್ರಾಮಪಂಚಾಯಿತಿಗೆ ಇರಬಹುದಾಗಿದ್ದ ಗರಿಷ್ಠ 12 ಸದಸ್ಯರಲ್ಲಿ ಅರ್ಧದಷ್ಟು ಮಂದಿ ಚುನಾಯಿತರಾಗಬೇಕಿತ್ತು. ಊರಿನ ಪಟೇಲ ಸರ್ಕಾರದ ಪ್ರತಿನಿಧಿಯಾಗಿ ಸದಸ್ಯನಾಗಿರುತ್ತಿದ್ದ.
1926: ಈ ವರ್ಷ ಕಾರ್ಯರೂಪಕ್ಕೆ ಬಂದ ಕಾಯ್ದೆ 1952ರ ತನಕವೂ ಅಸ್ತಿತ್ವದಲ್ಲಿತ್ತು. ಈ ಕಾಯ್ದೆ ಮಹಿಳೆಯರನ್ನು ಚುನಾವಣೆಯ ಸ್ಪರ್ಧಿಸದಂತೆ ಹೊರಗಿಟ್ಟಿತ್ತು. ಪಂಚಾಯತ್ ಕಾರ್ಯದರ್ಶಿಗಳು ನೇಮಕವಾದದ್ದು ಈ ಕಾಯ್ದೆಯ ಅನ್ವಯ. ಗ್ರಾಮ ಪಂಚಾಯಿತಿಗಳು ತೆರಿಗೆಯ ಪ್ರಮಾಣವನ್ನು ಮೂರನೇ ಎರಡು ಬಹುಮತದ ಮೂಲಕ ನಿರ್ಧರಿಸಬಹುದಿತ್ತು.
1952: ದಿ ಮೈಸೂರು ವಿಲೇಜ್ ಪಂಚಾಯತ್ ಮತ್ತು ಡಿಸ್ಟ್ರಿಕ್ಟ್ ಬೋರ್ಡ್ ಆಕ್ಟ್-1952 ಅನುಷ್ಠಾನಕ್ಕೆ ಬಂತು. ವೆಂಕಟಪ್ಪ ಸಮಿತಿ ನೀಡಿದ್ದ ಅನೇಕ ಕ್ರಾಂತಿಕಾರಿ ಸಲಹೆಗಳನ್ನು ಅಳವಡಿಸಿಕೊಂಡು ಈ ಕಾಯ್ದೆ ರೂಪುಗೊಂಡಿತ್ತಾದರೂ ಅವುಗಳ್ಯಾವೂ ಕಾರ್ಯರೂಪಕ್ಕೆ ಬರಲಿಲ್ಲ.
1959: ಬಲವಂತರಾಯ್ ಮೆಹ್ತಾ ವರದಿ ಆಧಾರದಲ್ಲಿ ದಿ ಮೈಸೂರು ವಿಲೇಜ್ ಪಂಚಾಯತ್ ಅಂಡ್ ಲೋಕಲ್ ಬೋರ್ಡ್ ಆಕ್ಟ್-1959 ಜಾರಿಗೆ ಬಂತು. ಗ್ರಾಮ ಮತ್ತು ತಾಲೂಕು ಮಟ್ಟದಲ್ಲಿ ನೇರವಾಗಿ ಚುನಾಯಿತ ಸದಸ್ಯರು ಹಾಗೂ ಜಿಲ್ಲಾ ಮಟ್ಟದಲ್ಲಿ ಪರೋಕ್ಷವಾಗಿ ಆಯ್ಕೆಯಾಗಿರುವ ಸದಸ್ಯರಿರುವ ಮೂರು ಹಂತದ ವ್ಯವಸ್ಥೆ ಇದಾಗಿತ್ತು. ಜಿಲ್ಲಾ ಅಭಿವೃದ್ಧಿ ಪರಿಷತ್ತಿನಲ್ಲಿ ಸಂಸದರು, ಶಾಸಕರು, ತಾಲೂಕು ಅಭಿವೃದ್ಧಿ ಮಂಡಳಿಗಳ ಅಧ್ಯಕ್ಷರು ಇರುತ್ತಿದ್ದರು. ಇವುಗಳಿಗೆ ಆರ್ಥಿಕ ಸ್ವಾಯತ್ತತೆ ಇರಲಿಲ್ಲ.
1985: ಕೇಂದ್ರದ ಜನತಾ ಪಕ್ಷ ಸರ್ಕಾರ ನೇಮಿಸಿದ ಅಶೋಕ್ ಮೆಹ್ತಾ ಸಮಿತಿಯ ಶಿಫಾರಸ್ಸುಗಳ (1978) ಹಿನ್ನೆಲೆಯಲ್ಲಿ ಕರ್ನಾಟಕ ಜಿಲ್ಲಾ ಪರಿಷತ್, ತಾಲೂಕು ಪಂಚಾಯಿತ್ ಸಮಿತಿ, ಮಂಡಲ ಪಂಚಾಯಿತಿ ಮತ್ತು ನ್ಯಾಯಾ ಪಂಚಾಯತಿ ಕಾಯ್ದೆ-–1983. ರಾಮಕೃಷ್ಣ ಹೆಗಡೆ ಮತ್ತು ಅಬ್ದುಲ್ ನಜೀರ್ ಸಾಬ್ ಅವರ ಪ್ರಯತ್ನದ ಫಲವಾಗಿ ರೂಪುಗೊಂಡ ಈ ಕಾಯ್ದೆಗೆ 1985ರಲ್ಲಿ ರಾಷ್ಟ್ರಪತಿಗಳ ಅಂಕಿತ ದೊರೆಯಿತು. 1987ರಲ್ಲಿ ಚುನಾವಣೆಗಳು ನಡೆದವು. ಇದು ಎರಡು ಹಂತದ ಚುನಾಯಿತ ಸದಸ್ಯರಿರುವ ವ್ಯವಸ್ಥೆ. ಇದರಲ್ಲಿ ಮೊಟ್ಟ ಮೊದಲ ಬಾರಿಗೆ ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ನೀಡಲಾಯಿತು. ಸಂವಿಧಾನದ 73ನೇ ತಿದ್ದುಪಡಿಗೆ ಪ್ರೇರಕವಾದ ಕಾಯ್ದೆಯೆಂಬ ಹೆಗ್ಗಳಿಕೆಯೂ ಇದಕ್ಕಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.