ಮೈಸೂರು: ನಾಟಕಕಾರ ಡಾ.ಚಂದ್ರಶೇಖರ ಕಂಬಾರರ ಕಾದಂಬರಿ `ಶಿಖರ ಸೂರ್ಯ~ ಮೊಟ್ಟ ಮೊದಲ ಬಾರಿಗೆ ನಾಟಕವಾಗಿ ರಂಗಭೂಮಿಯಲ್ಲಿ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಮೈಸೂರಿನ ರಂಗಾಯಣವು ಜ. 15 ರಿಂದ 22ರ ವರೆಗೆ ನಡೆಸಲು ಉದ್ದೇಶಿಸಿರುವ `ಬಹುರೂಪಿ ರಾಷ್ಟ್ರೀಯ ನಾಟಕೋತ್ಸವ~ದ ಮೊದಲ ದಿನ ಈ ನಾಟಕ ಪ್ರದರ್ಶನಗೊಳ್ಳಲಿದೆ.
ಪ್ರತಿ ವರ್ಷ ಒಂದೊಂದು ಪರಿಕಲ್ಪನೆಯಲ್ಲಿ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿ `ಜ್ಞಾನಪೀಠ ರಂಗೋತ್ಸವ~ ಶೀರ್ಷಿಕೆಯಡಿ ನಾಟಕೋತ್ಸವ ಆಯೋಜಿಸಲಾಗಿದೆ.
ಕಾದಂಬರಿಯನ್ನು ರಂಗಾಯಣ ಕಲಾವಿದ ಎಸ್.ರಾಮನಾಥ್ ರಂಗರೂಪಕ್ಕೆ ತಂದಿದ್ದು, ಬಸವಲಿಂಗಯ್ಯ ಹಿರೇಮಠ ಸಂಗೀತ ಸಂಯೋಜನೆ ಮಾಡಿದ್ದಾರೆ. ರಂಗಾಯಣ ನಿರ್ದೇಶಕ ಡಾ.ಬಿ.ವಿ.ರಾಜಾರಾಂ ನಿರ್ದೇಶನದ ಹೊಣೆ ಹೊತ್ತಿದ್ದಾರೆ.
ಜ.14 ರಂಗಾಯಣದ ಸಂಸ್ಥಾಪನಾ ದಿನ. 1989ರಲ್ಲಿ ಬಿ.ವಿ.ಕಾರಂತರು ತಮ್ಮ ಕನಸಿನ ರಂಗಾಯಣವನ್ನು ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ಆರಂಭಿಸಿದರು. ಈ ಹಿನ್ನೆಲೆಯಲ್ಲಿ ಜ. 14 ರಂದು ಈ ಬಾರಿಯ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವದ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ. ಜ. 15 ರಂದು ಸಂಜೆ 6.30 ಗಂಟೆಗೆ `ಶಿಖರ ಸೂರ್ಯ~ ರಂಗದ ಮೇಲೆ ಪ್ರಯೋಗ ಕಾಣಲಿದೆ.