ಸಿಂಗಪುರ (ಪಿಟಿಐ): ಸದಾ ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗುವ ಪ್ರಧಾನಿ ಮನಮೋಹನ್ ಸಿಂಗ್, ಅಪರೂಪಕ್ಕೆಂಬಂತೆ ತಮ್ಮ ಬಾಂಗ್ಲಾ ದೇಶದ ಪ್ರವಾಸಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಅವರಿಂದ ಪ್ರಶಂಸೆಗೆ ಒಳಗಾಗಿದ್ದಾರೆ.
`ಅದೊಂದು ಅತ್ಯಂತ ಉತ್ತಮ ಕಾರ್ಯ. ಎರಡೂ ರಾಷ್ಟ್ರಗಳ ಸಂಬಂಧ ಬಲಗೊಂಡಿದೆ. ತೀಸ್ತಾ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಪ್ರಧಾನಿ ತಮ್ಮ ಜೊತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನೂ ಜೊತೆಯಲ್ಲಿ ಕರೆದೊಯ್ದಿದ್ದರೆ ಇನ್ನೂ ಚೆನ್ನಾಗಿತ್ತು~ ಎಂದು ಸುಷ್ಮಾ ಬುಧವಾರ ಹೇಳಿದ್ದಾರೆ.
`ಭಾರತದ ವಿದೇಶಾಂಗ ನೀತಿ ಪ್ರಾದೇಶಿಕ ಸಹಕಾರಕ್ಕೆ ಉತ್ತಮವಾಗಿದೆ. ದೇಶದ ಹಿತಾಸಕ್ತಿಗೆ ಪೂರಕವಾಗಿ ಕೇಂದ್ರ ಸರ್ಕಾರ ಅದನ್ನು ರೂಪಿಸಿದೆ~ ಎಂದಿರುವ ಅವರು, `ಚೀನಾದ ಜೊತೆಗಿನ ಸಂಬಂಧವನ್ನು ಅತ್ಯಂತ ಎಚ್ಚರಿಕೆಯಿಂದ ನಿಭಾಯಿಸಬೇಕು~ ಎಂದು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕಿಯಾಗಿ ಇದೇ ಮೊದಲ ಬಾರಿ ಇಲ್ಲಿಗೆ ಅಧಿಕೃತ ಭೇಟಿ ನೀಡಿರುವ ಸುಷ್ಮಾ, ಪ್ರಧಾನಿ ಲೀ ಸಿನ್ ಲೂಂಗ್ ಹಾಗೂ ವಿದೇಶಾಂಗ ಸಚಿವ ಕೆ.ಷಣ್ಮುಗಂ ಅವರನ್ನು ಭೇಟಿ ಮಾಡಲಿದ್ದಾರೆ.