ಢಾಕಾ (ಪಿಟಿಐ): ಚುನಾವಣೆ ಹೊಸ್ತಿಲಿನಲ್ಲಿರುವ ಬಾಂಗ್ಲಾ ದೇಶದಲ್ಲಿ ೨೩ ವರ್ಷಗಳ ಹಿಂದೆ ಮಿಲಿಟರಿ ಆಡಳಿತಗಾರರಾಗಿದ್ದ ಎಚ್.ಎಂ.ಇರ್ಷಾದ್ ಈಗ ಕೇಂದ್ರ ಬಿಂದು ಆಗಿದ್ದಾರೆ.
ಆಡಳಿತಾರೂಢ ಅವಾಮಿ ಲೀಗ್ನ ಮಿತ್ರಪಕ್ಷದಲ್ಲಿದ್ದ ಇರ್ಷಾದ್ ಅವರು ಚುನಾವಣೆ ಬಹಿಷ್ಕರಿಸಲು ಕರೆ ನೀಡಿದ್ದ ವಿರೋಧ ಪಕ್ಷಗಳ ಮನವಿಗೆ ಸಹಮತ ವ್ಯಕ್ತಪಡಿಸಿದ್ದು, ಜ. ೫ರಂದು ನಡೆಯುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿ ತಿಳಿಸುವ ಮೂಲಕ ರಾಜಕೀಯ ಮುಂಚೂಣಿಗೆ ಬಂದಿದ್ದಾರೆ.
ಮಾಜಿ ಅಧ್ಯಕ್ಷರಾಗಿರುವ ೮೩ ವರ್ಷದ ಇರ್ಷಾದ್ ಅವರ ಜತಿಯಾ ಪಕ್ಷ (ಜೆಪಿ) 3 ದಿನದ ಹಿಂದೆ ಆಡಳಿತಾರೂಢ ಅವಾಮಿ ಲೀಗ್ ಜತೆಗಿನ ಸಂಬಂಧವನ್ನು ಕಡಿದುಕೊಂಡಿದೆ.
ದೇಶದಲ್ಲಿ ಸೂಕ್ತ ವಾತಾವರಣ ನಿರ್ಮಾಣ ಆಗುವವರಿಗೆ ಚುನಾವಣೆಗೆ ಮುಂದಾಗಬಾರದು ಎನ್ನುವುದು ಇರ್ಷಾದ್ ಬೇಡಿಕೆಯಾಗಿದ್ದು, ಈ ಕಾರಣದಿಂದಲೇ ಚುನಾವಣೆ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.
ವಿರೋಧ ಪಕ್ಷಗಳ ಒತ್ತಡಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ಪ್ರಧಾನಿ ಶೇಖ್ ಹಸೀನಾ ಅವರನ್ನು ಇರ್ಷಾದ್ ಅವರ ನಡೆ ಇನ್ನಷ್ಟು ಸಂದಿಗ್ಧಕ್ಕೆ ನೂಕಿದೆ. ರಾಜಕೀಯ ವಿಶ್ಲೇಷಕರ ಪ್ರಕಾರ ಜತಿಯಾ ಪಕ್ಷ ಜನಪ್ರಿಯತೆಯಲ್ಲಿ ದೇಶದಲ್ಲಿ ಮೂರನೇ ದೊಡ್ಡ ಪಕ್ಷವಾಗಿದೆ. ಒಂದೊಮ್ಮೆ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್ಪಿ) ಚುನಾವಣೆ ಬಹಿಷ್ಕರಿಸಿದರೆ ಜತಿಯಾ ಪಕ್ಷ ಪ್ರಮುಖ ವಿರೋಧ ಪಕ್ಷವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ.