ವಾಷಿಂಗ್ಟನ್(ಪಿಟಿಐ): ಮನೆಕೆಲಸದವಳ ವೀಸಾ ಅರ್ಜಿಯಲ್ಲಿ ಸುಳ್ಳು ಮಾಹಿತಿ ನೀಡಿದ ಆರೋಪಕ್ಕಾಗಿ ನ್ಯೂಯಾರ್ಕ್ನಲ್ಲಿನ ಭಾರತದ ಉಪ ಕಾನ್ಸಲ್ ಜನರಲ್ ದೇವಯಾನಿ ಖೋಬ್ರಾಗಡೆ ಅವರನ್ನು ಅಮೆರಿಕ ಅಧಿಕಾರಿಗಳು ಬಂಧಿಸಿ ಕೋಳ ತೊಡಿಸಿದ ಪ್ರಕರಣದಿಂದ ಉಂಟಾಗಿರುವ ರಾಜತಾಂತ್ರಿಕ ಬಿಕ್ಕಟ್ಟು ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯಕ್ಕೆ ಧಕ್ಕೆಯಾಗಲಾರದು ಎಂಬ ವಿಶ್ವಾಸವನ್ನು ಅಮೆರಿಕ ವ್ಯಕ್ತಪಡಿಸಿದೆ.
‘ಭಾರತದೊಂದಿಗೆ ನಾವು ಹಲವು ವರ್ಷಗಳಿಂದ ಸಹಭಾಗಿತ್ವ ಹೊಂದಿದ್ದೇವೆ. ಇದು ಭವಿಷ್ಯದಲ್ಲೂ ಮುಂದುವರಿಯಲಿದೆ’ ಎಂದು ಅಮೆರಿಕದ ವಿದೇಶಾಂಗ ವಕ್ತಾರರು ತಿಳಿಸಿದ್ದಾರೆ.
ದೇವಯಾನಿ ಬಂಧನ ಪ್ರಕರಣ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಕಾರಣ ಕೆಲವು ವಿಷಯಗಳ ಬಗ್ಗೆ ವಿವರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.
ಭಾರತದ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಅವರು ಅಮೆರಿಕ ಪ್ರವಾಸದಿಂದ ವಾಪಸಾದ ಮಾರನೇ ದಿನವೇ ದೇವಯಾನಿ ಅವರ ಬಂಧನ ನಡೆದಿರುವುದು ಭಾರತ ಹಾಗೂ ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧದ ಮೇಲೆ ಪರಿಣಾಮ ಬೀರಿದೆ.
‘ಭಾರತದ ರಾಜತಾಂತ್ರಿಕ ಅಧಿಕಾರಿಗೆ ಕೈಕೋಳ ತೊಡಿಸಿ ಅವಮಾನ ಮಾಡಿರುವುದನ್ನು ಒಪ್ಪಿಕೊಳ್ಳಲಾಗದು’ ಎಂದು ವಾಷಿಂಗ್ಟನ್ನ ಭಾರತೀಯ ರಾಯಭಾರ ಕಚೇರಿಯ ಹಿರಿಯ ರಾಜತಾಂತ್ರಿಕ ತರಣ್ಜಿತ್ ಸಿಂಗ್ ಸಂಧು ಅಮೆರಿಕದ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿದ ನಂತರ ಹೇಳಿದ್ದಾರೆ.
ಇದೇ ವೇಳೆ ದೇವಯಾನಿ ಅವರ ಬಂಧನ ಪ್ರಕರಣವನ್ನು ಆದಷ್ಟು ಶೀಘ್ರ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ದೇವಯಾನಿ ರಾಜತಾಂತ್ರಿಕ ಅಧಿಕಾರಿ. ತಮ್ಮ ಕರ್ತವ್ಯ ನಿರ್ವಹಣೆಗಾಗಿ ಅವರು ಅಮೆರಿಕದಲ್ಲಿದ್ದರು. ಆದ್ದರಿಂದ ಅವರಿಗೆ ವಿನಾಯಿತಿ ನೀಡಬೇಕಿತ್ತು’ ಎಂದು ರಾಯಭಾರ ಕಚೇರಿ ಹೇಳಿಕೆ ತಿಳಿಸಿದೆ.
‘ದೇವಯಾನಿ ಅವರು ಇಬ್ಬರು ಮಕ್ಕಳ ತಾಯಿ. ಅವರ ಬಂಧನ ಪ್ರಕರಣದಿಂದ ಭಾರತ ಸರ್ಕಾರ ಆಘಾತಕ್ಕೊಳಗಾಗಿದೆ ಹಾಗೂ ಅಮೆರಿಕದ ಅಧಿಕಾರಿಗಳ ಕ್ರಮದಿಂದ ಗಾಬರಿಗೊಂಡಿದೆ’ ಎಂದೂ ಹೇಳಲಾಗಿದೆ.
ದೇವಯಾನಿ ರಾಜತಾಂತ್ರಿಕ ವಿನಾಯಿತಿಗೆ ಅರ್ಹತೆ ಹೊಂದಿದ್ದರು ಎಂದು ಅವರ ವಕೀಲ ಪ್ರೀತ್ ಭರಾರ್ ಹೇಳಿದ್ದಾರೆ.
ರಾಜತಾಂತ್ರಿಕರಿಗೆ ವಿಯೆನ್ನಾ ಒಪ್ಪಂದದಂತೆ ವಿನಾಯಿತಿ ನೀಡಬೇಕು ಎಂದು ಭಾರತ ಮೂಲದ ಅಮೆರಿಕ ವಕೀಲ ರವಿ ಬಾತ್ರಾ ಹೇಳಿದ್ದಾರೆ.
ವಿಯೆನ್ನಾ ಒಪ್ಪಂದದನ್ವಯ ವಿದೇಶಿ ರಾಜತಾಂತ್ರಿಕರಿಗೆ ರಾಜತಾಂತ್ರಿಕ ವ್ಯವಹಾರಗಳಿಗೆ ಸಂಬಂಧಿಸಿದಂತೆ ಮಾತ್ರ ಅಮೆರಿಕದ ನ್ಯಾಯಾಂಗ ಪ್ರಕ್ರಿಯೆಯಿಂದ ವಿನಾಯಿತಿ ಇರುತ್ತದೆ. ವೀಸಾ ನಿಯಮ ಉಲ್ಲಂಘಿಸಿದಲ್ಲಿ ಕಾನೂನಿನ ರಕ್ಷಣೆ ನೀಡಲಾಗದು ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಅಧಿಕಾರಿಗಳ ಜತೆ ಚರ್ಚೆ: ದೇವಯಾನಿ ಪ್ರಕರಣದ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ, ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಟೋನಿ ಬ್ಲಿಂಕೆನ್ ಸೇರಿದಂತೆ ಪ್ರಮುಖರ ಜತೆ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್ ಮಾತನಾಡಿದ್ದಾರೆ.
ಅಲ್ಲದೇ ಅಮೆರಿಕದ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿಯಾಗಿರುವ ನಿಶಾ ದೇಸಾಯಿ ಬಿಸ್ವಾಲ್ ಅವರು ವಿದೇಶಾಂಗ ಇಲಾಖೆ ಮತ್ತು ಭಾರತದ ರಾಜತಾಂತ್ರಿಕರ ಜತೆ ಚರ್ಚೆ ನಡೆಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.