ನವದೆಹಲಿ (ಪಿಟಿಐ): ಕಳೆದ ವರ್ಷ ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದ ಆರೋಪಿ ವಾಸಿಮ್ ಅಕ್ರಂ ಮಲಿಕ್ ವಿರುದ್ಧ ಅತ್ಯಂತ ಕಠಿಣವಾದ ಆರೋಪ ನಿಗದಿ ಮಾಡುವಂತೆ ವಿಚಾರಣಾ ನ್ಯಾಯಾಲಯಕ್ಕೆ ದೆಹಲಿ ಹೈಕೋರ್ಟ್ ಸೋಮವಾರ ಸೂಚಿಸಿದೆ.
ಭಾರತ ಸರ್ಕಾರದ ವಿರುದ್ಧ ಸಮರ ಸಾರಿರುವ ಮಲಿಕ್ ವಿರುದ್ಧ ಕಠಿಣ ದೋಷಾರೋಪಗಳನ್ನು ಕೈಬಿಟ್ಟ ವಿಚಾರಣಾ ನ್ಯಾಯಾಲಯದ ಕ್ರಮವನ್ನು ಪ್ರಶ್ನಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅರ್ಜಿ ಸಲ್ಲಿಸಿತ್ತು. ಇದರ ವಿಚಾರಣೆ ನಡೆಸಿದ ಸಂಜೀವ್ ಖನ್ನಾ ಮತ್ತು ಎಸ್.ಪಿ ಗರ್ಗ್ ಅವರಿದ್ದ ನ್ಯಾಯಪೀಠ ಎನ್ಐಎ ವಾದವನ್ನು ಎತ್ತಿ ಹಿಡಿಯಿತು.
ಬಾಂಬ್ ಸ್ಫೋಟದಲ್ಲಿ 15 ಜನರು ಮೃತಪಟ್ಟಿದ್ದರು. 75ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.