ದಾವಣಗೆರೆ: ಮೂರು ವರ್ಷಗಳಿಂದ ಬಾಕಿಯಿರುವ 128 ಮಂದಿಗೆ ಏಕಲವ್ಯ ಪ್ರಶಸ್ತಿ ಶೀಘ್ರವೇ ನೀಡಲಾಗುವುದು ಎಂದು ಯುವಜನ ಮತ್ತು ಕ್ರೀಡಾ ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ನಗರದಲ್ಲಿ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ 29ನೇ ರಾಜ್ಯಮಟ್ಟದ ಕಿರಿಯರ ಮತ್ತು ಹಿರಿಯರ ಅಥ್ಲೆಟಿಕ್ ಚಾಂಪಿಯನ್ಷಿಪ್ -2012 ಉದ್ಘಾಟಿಸಿ ಮಾತನಾಡಿದ ಅವರು, ಪ್ರಸಕ್ತ ವರ್ಷ ಏಕಲವ್ಯ ಪ್ರಶಸ್ತಿ ಆಯ್ಕೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸಲಾಗಿದೆ. ಅರ್ಹರಿಗೆ ಅಂಕಗಳ ಆಧಾರದಲ್ಲಿ ಪ್ರಶಸ್ತಿ ದೊರಕಿದೆ. ಕಳೆದ ಮೂರು ವರ್ಷಗಳಿಂದ ಬಾಕಿ ಉಳಿದಿರುವ ಪ್ರಶಸ್ತಿ ವಿತರಣೆಯನ್ನು ಶೀಘ್ರವೇ ಮಾಡಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಮಟ್ಟದಲ್ಲಿ ಶಾಸಕರು, ಸಂಸದರು ಮತ್ತು ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣ ಸಮಿತಿ ರಚಿಸಲಾಗುವುದು. ಕ್ರೀಡಾಂಗಣದ ಸುತ್ತಲೂ ಮಳಿಗೆಗಳು ಇರುವಲ್ಲಿ ಅಲ್ಲಿಗೆ ಭೇಟಿ ನೀಡುವವರಿಗೆ ಪ್ರತ್ಯೇಕ ದಾರಿ ಮಾಡಲಾಗುವುದು. ಮಳಿಗೆಗಳಿಂದ ಬರುವ ಆದಾಯವನ್ನು ಕ್ರೀಡಾಪಟುಗಳ ಮೂಲ ಅಗತ್ಯ ಈಡೇರಿಕೆಗೆ ಬಳಸಲಾಗುವುದು ಎಂದರು.