ಚನ್ನಗಿರಿ: ತಾಲ್ಲೂಕಿನ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನವನ್ನು ಜನಪ್ರತಿನಿಧಿಗಳು ತಂದುಕೊಟ್ಟಿದ್ದಾರೆ. ಆದ್ದರಿಂದ, ಯಾವುದೇ ಇಲಾಖೆಯಿಂದಲೂ ಸರ್ಕಾರದಿಂದ ಬಂದ ಅನುದಾನ ವಾಪಾಸ್ ಹೋಗಬಾರದು.
ಆದ್ದರಿಂದ, ಎಲ್ಲಾ ಇಲಾಖೆಯವರು ಬಾಕಿ ಉಳಿದಿರುವ ಕಾಮಗಾರಿ ಮುಕ್ತಾಯ ಮಾಡುವತ್ತ ಗಮನಹರಿಸಬೇಕು ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಕೆ.ಜಿ. ಮರುಳಸಿದ್ದಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪಟ್ಟಣದ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಮಾನ್ಯಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ತಾಲ್ಲೂಕು ಪಂಚಾಯ್ತಿ ವಿವಿಧ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರ ಹಾಗೂ ಸದಸ್ಯರ ಆಯ್ಕೆಯನ್ನು ಸದಸ್ಯರ ಗಮನಕ್ಕೆ ಬಾರದಂತೆ ಅವರು ಆಯ್ಕೆಯಾಗಿರುವುದನ್ನು ಇಲ್ಲಿ ಓದುತ್ತಾ ಇದ್ದೀರಿ. ಸದಸ್ಯರ ಸಮ್ಮುಖದಲ್ಲಿ ಆಯ್ಕೆ ನಡೆಸಿದ್ದರೆ ಉತ್ತಮವಾಗಿರುತ್ತಿತ್ತು ಎಂದು ಪ್ರತಿಪಕ್ಷ ಸದಸ್ಯರಾದ ಜೆ. ರಂಗನಾಥ್, ಉಸ್ಮಾನ್ ಶರೀಫ್, ಶಂಕರ್ ಪಾಟೀಲ್ ಚರ್ಚೆ ನಡೆಸಿದರು.
ದೇವರಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಪೂರೈಸಿರುವ ಬೆಲ್ಲ, ಗೋಧಿ ನುಚ್ಚು ಕಳಪೆ ಗುಣಮಟ್ಟದಿಂದ ಕೂಡಿವೆ. ಒಂದು ತಿಂಗಳು ಆಹಾರ ಪದಾರ್ಥಗಳನ್ನು ಇಲಾಖೆಯಿಂದ ಪೂರೈಸಿರುವುದಿಲ್ಲ. ಅದೇ ರೀತಿ ಹಟ್ಟಿ ಗ್ರಾಮದಲ್ಲಿರುವ ಅಂಗನವಾಡಿ ಕೇಂದ್ರ ಕಾರ್ಯಕರ್ತೆ ಸಮಯಕ್ಕೆ ಸರಿಯಾಗಿ ಕೇಂದ್ರಕ್ಕೆಬರುವುದಿಲ್ಲ.
ತಾಲ್ಲೂಕಿನಲ್ಲಿ ಇರುವ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಪ್ರತಿದಿನ ಚನ್ನಗಿರಿ ಪಟ್ಟಣದಲ್ಲಿ ಇರುತ್ತಾರೆ. ಹೀಗಾದರೆ ಮಕ್ಕಳನ್ನು ನೋಡಿಕೊಳ್ಳುವವರು ಯಾರೂ ಎಂದು ಸದಸ್ಯೆ ಲೋಲಾಕ್ಷಮ್ಮ, ಎನ್. ಗಣೇಶ್ನಾಯ್ಕ ಶಿಶು ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿಯನ್ನು ಪ್ರಶ್ನಿಸಿದರು.
ಈ ಬಾರಿ ಮುಂಗಾರು ಮಳೆಯ ಕೊರತೆ ಕಾರಣದಿಂದ ತಾಲ್ಲೂಕಿನಲ್ಲಿ ಒಟ್ಟು 18,558 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ರೂ 30.84ಕೋಟಿ ನಷ್ಟ ಉಂಟಾಗಿದೆ ಎಂದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ.
ಸರ್ಕಾರದಿಂದ ಬೆಳೆ ಪರಿಹಾರ ಬಂದ ಕೂಡಲೇ ರೈತರಿಗೆ ವಿತರಣೆ ಮಾಡಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಕಮಲಾ ನಾಯ್ಕ ತಿಳಿಸಿದರು.ಉಪಾಧ್ಯಕ್ಷೆ ಆರ್ ಲಲಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಎ.ಬಿ. ಶಿವಕುಮಾರ್, ಇಒ ಶಿವಕುಮಾರ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.