ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆಯ ಭರತ ಎಸ್.ಆರ್. ಕಂಠಿ

Last Updated 4 ಜುಲೈ 2012, 19:30 IST
ಅಕ್ಷರ ಗಾತ್ರ

1962 ರಲ್ಲಿ ಆರು ತಿಂಗಳು ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡಿದ ಬಾಗಲಕೋಟೆಯ ಹುನಗುಂದ ತಾಲ್ಲೂಕಿನ ಶಾಸಕ ಎಸ್.ಆರ್. ಕಂಠಿಯವರು ಕನಸಿನಲ್ಲಿಯೂ ಎಣಿಸಿರಲಿಲ್ಲ `ತಾನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿಯಾಗುತ್ತೇನೆಂದು~ ಆದರೆ ಅಂದಿನ ಸೋಲಿಲ್ಲದ ರಾಜಕಾರಣಿ ಎಂದು ಜನ ಭಾವಿಸಿದ್ದ ಎಸ್. ನಿಜಲಿಂಗಪ್ಪನವರು ಚಿತ್ರದುರ್ಗದಲ್ಲಿ ಚುನಾವಣೆಗೆ ನಿಂತು  ಸೋತರು.

ಆಗ ಅವರು ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಬೇಕಾಯಿತು. ಆದರೆ ಯಾರಿಗೆ, ಮತ್ತು ಯಾರನ್ನು ನಂಬುವುದು ಮರು ಚುನಾವಣೆ ಎದುರಿಸಿ ಗೆದ್ದರೆ ಮತ್ತೆ ಮುಖ್ಯಮಂತ್ರಿಯಾಗಬಹುದೆ.
 
ಆದರೆ ಆ ಸ್ಥಾನದಲ್ಲಿರುವವರು ತಮಗೆ ಕುರ್ಚಿಯನ್ನು ಬಿಟ್ಟುಕೊಡದಿದ್ದರೆ? ರಾಮಾಯಣದ ಭರತನನ್ನು ಜ್ಞಾಪಿಸಿಕೊಂಡರು. ಅಹುದು ರಾಮಾಯಣದಲ್ಲೂ ಶ್ರೀರಾಮನು 14 ವರ್ಷ ವನವಾಸಕ್ಕೆ ತೆರಳಿದಾಗ ಆ ಸ್ಥಾನದಲ್ಲಿ ಎಲ್ಲರಿಗೂ ಈ ಸಂದೇಹ ಹುಟ್ಟಿತ್ತು.

ಶ್ರೀರಾಮನ ತಾಯಿ ಕೌಸಲ್ಯೆಗೆ ಈ ಸಂದೇಹ ಬಂದು ಮೌನ ತಾಳಿದಳು. ಆದರೆ ಭರತನಿಗೆ ಈ ಯೋಚನೆ ಬರಲೇ ಇಲ್ಲ. ತನ್ನ ಮಾವನ ಊರಿನಿಂದ ಈ ಸುದ್ದಿ ಕೇಳಿದ ತಕ್ಷಣ ಓಡಿಬಂದು ಶ್ರೀರಾಮನನ್ನು ತಡೆಯಲು ಚಿತ್ರಕೂಟಕ್ಕೆ ಓಡಿದರು.

ಅಲ್ಲಿ ಶ್ರೀರಾಮನು ಪಟ್ಟಾಭಿಷೇಕ ಮಾಡಿಸಿಕೊಳ್ಳದಿದ್ದರೆ ತಾನು ಪ್ರಾಯೋಪವೇಶ ಮಾಡುವೆನೆಂದು ಹೆದರಿಸಿದನು. ಆಗ ಶ್ರೀರಾಮನು ಭರತನನ್ನು ಸಮಾಧಾನಪಡಿಸಿ ತಂದೆಯ ಮಾತನ್ನು ಉಳಿಸಿಕೊಳ್ಳಬೇಕು ಅಯೋಧ್ಯೆಗೆ ಹಿಂದಿರುಗಿ ರಾಜ್ಯಭಾರವನ್ನು ನೋಡಿಕೊಳ್ಳುವಂತೆ ಹೇಳಿ ತನ್ನ ತಾಯಿ ಕೌಸಲ್ಯೆಯನ್ನು ಮತ್ತು ನಿನ್ನ ತಾಯಿ ಕೈಕೆಯನ್ನು ಚೆನ್ನಾಗಿ ಮರ‌್ಯಾದೆಯಿಂದ ನೋಡಿಕೊಳ್ಳುವಂತೆ ಆದೇಶಿಸಿದನು.

ಭರತನು ಶ್ರೀರಾಮನನ್ನು ನಂದೀಗ್ರಾಮದವರೆಗೂ ಬೀಳ್ಕೊಟ್ಟು ಶ್ರೀರಾಮನ ಪಾದುಕೆಗಳನ್ನು ಸಿಂಹಾಸನದ ಮೇಲಿಟ್ಟು ಪೂಜಿಸಿ ರಾಜ್ಯಭಾರ ಮಾಡಿದನು.

ಆದರೆ 14 ವರ್ಷ ವನವಾಸ ಅನುಭವಿಸಿ ಸೀತೆಯನ್ನು ಅಪಹರಿಸಿದ ರಾವಣನನ್ನು ಕೊಂದು ನಂದೀಗ್ರಾಮಕ್ಕೆ ಬರುವಷ್ಟರಲ್ಲಿ ಶ್ರೀರಾಮನಿಗೂ ಸಂದೇಹ ಬಂತು, 14 ವರ್ಷ ಅನುಭವಿಸಿದ ಚಕ್ರವರ್ತಿ ಸ್ಥಾನವನ್ನು ಭರತನು ಬಿಟ್ಟುಕೊಡುವನೇ? ಹಾಗಿಲ್ಲದಿದ್ದಲ್ಲಿ ತಾನು ಅಯೋಧ್ಯೆಗೆ ಹೋಗಿ ಅವನ ಕನಸನ್ನು ಕದಡುವುದು ನ್ಯಾಯವೇ?

ನಂದೀಗ್ರಾಮದಲ್ಲಿ ಪುಷ್ಪಕ ವಿಮಾನದಿಂದ ಇಳಿದು ತನ್ನ ಬಂಟನಾದ ಹನುಮಂತನನ್ನು ಕರೆದು `ಎಲೈ ವಾಯುಪುತ್ರನೇ ನೀನು ಅಯೋಧ್ಯೆಗೆ ತೆರಳಿ ಭರತನಿಗೆ ತಿಳಿಸು ನಾವು ಬಂದಿರುವುದನ್ನು ಎಲ್ಲರೂ ಕುಶಲವೇ ಎಂದು ಕೇಳಿದೆನೆಂದು ಹೇಳು,
 
ಆಗ ಭರತನು ಮಾತನಾಡುವಾಗ ಅವನ ಹಾವ ಭಾವಗಳನ್ನು ಗಮನಿಸು, ಭರತನಿಗೆ ನಾವು ಬಂದಿರುವುದು ಸಂತೋಷವೋ ಅಥವಾ ಅಸಂತೋಷವೋ, ಅಸಂತೋಷವಾದರೆ ನಾವು ಬೇರೆಡೆಗೆ ಹೋಗೋಣ. ಅವನ ಮನಸ್ಸನ್ನು ಕೆಡಿಸುವುದು ಬೇಡ~.
 
ಆದರೆ ಹನುಮಂತನಿಗೆ ಹಿಂದಿರುಗಿ ಹೋಗಿ ಶ್ರೀರಾಮನಿಗೆ ಶುಭವಾರ್ತೆಯನ್ನು ಕೊಡಲು ಅವಕಾಶವೇ ಸಿಗಲಿಲ್ಲ. ಭರತನು ಪಾದುಕೆಗಳನ್ನು ತಲೆಯ ಮೇಲಿಟ್ಟುಕೊಂಡು ಓಡಿ ಬಂದನು. ಶ್ರೀರಾಮನ ಪಾದಗಳನ್ನು ತೊಳೆದು ಪಾದುಕೆಗಳನ್ನು ತೊಡಿಸಿ ಆನಂದಬಾಷ್ಪಗಳನ್ನು ಕಾಲಮೇಲೆ ಸುರಿಸಿದನು.

ಈಗ ನಿಜಲಿಂಗಪ್ಪನವರಿಗೆ ಈ ಅನುಮಾನಗಳು ಬಂದದ್ದು ಸಹಜವೇ. ಅವರು ದೇವರ ಮೇಲೆ ಭಾರಹಾಕಿ ಎಸ್.ಆರ್. ಕಂಠಿಯವರನ್ನು ಭರತನ ಪಾತ್ರಕ್ಕೆ ಒಪ್ಪಿಸಿ ಸದನದ ಸಭಾಪತಿಯಾಗಿದ್ದ ಕಂಠಿಯವರನ್ನು ಕಾಂಗ್ರೆಸ್ ಪಕ್ಷದ ನಾಯಕರನ್ನಾಗಿ ಆರಿಸಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಆರಿಸಿದರು, ಅವರನ್ನು ಗಾದಿಯಲ್ಲಿ ಕೂರಿಸಿ ತಮ್ಮ ಆರು ತಿಂಗಳ ವನವಾಸಕ್ಕೆ ತೆರಳಿದರು.
 
ಈ ಆರು ತಿಂಗಳಲ್ಲಿ ರಾಜ್ಯದ ಚೌಕಾಬಾರದ ದಾಳಗಳನ್ನು ಬದಲಿಸಿ ಹೊಸದುರ್ಗದಿಂದ ಆರಿಸಿ ಬಂದು ಭರತನನ್ನು ಹೇಗೆ ಕೇಳುವುದು ಎಂದು ಯೋಚಿಸುತ್ತಿದ್ದಾಗ ಮೊದಲು ಬಿದ್ದ ಹಾರವೇ ಕಂಠಿಯವರದ್ದು.
 
ಅವರ ಮೊದಲ ಮಾತೇ `ನಾನು ಈ ಸಂಜೆ ಪಕ್ಷದ ಸಭೆಯನ್ನು ಕರೆದಿದ್ದೇನೆ, ನೀವು ಸ್ವಲ್ಪ ವಿಶ್ರಮಿಸಿ ಸಭೆಗೆ ಬಂದು ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಬೇಕು~ ನಿಜಲಿಂಗಪ್ಪನವರಿಗೆ ಮಾತೇ ಹೊರಡಲಿಲ್ಲ.

ಆದರೆ ಈಗಿನ ರಾಜಕೀಯ ಗಮನಿಸೋಣ. ಸದಾನಂದಗೌಡರು ಈ ಸ್ಥಿತಿಯಲ್ಲಿ ಭರತ ಗಾದಿ ಅನುಭವಿಸಿದವರು. ಆಸೆ ಬಲವಾಗಿದೆ ಕುರ್ಚಿ ಬಿಟ್ಟು ಕೊಡುವುದು ಸಾಧ್ಯವಿಲ್ಲ. ಆದರೆ ಯಡಿಯೂರಪ್ಪನವರು ಬಿಡುತ್ತಿಲ್ಲ.

ದಾಳಕ್ಕೊಂದು ದಾಳ ಬೀಳುತ್ತಲೇ ಇದೆ ಚೌಕಾಭಾರದಲ್ಲಿ ಜಾತಿಯ ದಾಳ, ನ್ಯಾಯದ ದಾಳ, ಕಳಂಕಿತ ಆಸ್ತಿ ಹಿಂಬಾಲಿಕರಿಗೆ ಆಮಿಷ, ಮಂತ್ರಿಸ್ಥಾನ, ರೆಫರಿ, ಹಂಸರಾಜ್ ಭಾರದ್ವಾಜರು ದಾಳಗಳನ್ನು ಬದಲಿಸಲು ಯಾವ ಕೈಚಳಕವೂ ನಡೆಯದಂತೆ ಓರೆಗಣ್ಣಿನಿಂದ ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT