ದೇವನಹಳ್ಳಿ: ಇಲ್ಲಿನ ನಂದಿ ರಸ್ತೆ- ಮಾಳಿಗೇನಹಳ್ಳಿ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬವೊಂದು ಬಾಗಿ ನಿಂತಿದ್ದು, ಯಾವುದೇ ಕ್ಷಣದಲ್ಲಿ ನೆಲಕ್ಕೆ ಉರುಳುವ ಸಾಧ್ಯತೆ ಇದೆ. ಇದು ಜನ ನಿಬಿಡ ರಸ್ತೆಯಾಗಿದೆ. ಸುತ್ತಮುತ್ತಲ ಗ್ರಾಮಸ್ಥರಿಗೆ ಹೆಚ್ಚಾಗಿ ಸಂಚರಿಸಲು ಈ ರಸ್ತೆಯನ್ನೇ ಬಳಸುತ್ತಾರೆ. ಬೆಂಗಳೂರು - ಹೊಸಕೋಟೆಯಿಂದ ನಂದಿ ಬೆಟ್ಟಕ್ಕೆ ಬರುವ ಪ್ರವಾಸಿಗರೂ ಇದೇ ಮಾರ್ಗದಲ್ಲೇ ಕ್ರಮಿಸಬೇಕು. ಈ ರಸ್ತೆ ಹಾಯುವಾಗ ಬಾಗಿದ ವಿದ್ಯುತ್ ಕಂಬ ನೋಡಿ, ಭಯಪಟ್ಟುಕೊಂಡೇ ದಾಟುತ್ತಾರೆ.
ಮುಂಗಾರು ಆರಂಭವಾಗಿದೆ. ಜೊತಗೆ ಬಿರುಗಾಳಿ ಮಳೆಯೂ ಶುರುವಾಗಿದೆ. ಈಗಾಗಲೇ ಗಾಳಿ- ಮಳೆಗೆ ಗ್ರಾಮಾಂತರ ಪ್ರದೇಶದಲ್ಲಿ ನೂರಾರು ಕಂಬಗಳು ಶಿಥಲಗೊಂಡಿವೆ. ಸಾಧಾರಣ ಗಾಳಿಮಳೆ ಬಂದರೂ ದುರಂತ ಸಂಭವಿಸುವುದು ಖಚಿತ. ಆದರೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುವ ಜನನಿಬಿಡ ರಸ್ತೆ ಪಕ್ಕದಲ್ಲಿ ವಾಲಿರುವ ಕಂಬವನ್ನು ಸ್ಥಳಾಂತರಿಸಿದೆ ಬೆಸ್ಕಾಂ ಇಲಾಖೆ ನಿರ್ಲಕ್ಷ್ಯವಹಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ವಿದ್ಯುತ್ ಕಂಬ ಬಾಗಿ 8 ತಿಂಗಳು ಕಳೆದಿವೆ. ಇಲಾಖೆ ಗಾಮಸ್ಥರಿಗೆ ಕಂಬ ಕೊಂಡ್ಯೊಯಲು ತಿಳಿಸಿತ್ತು. ಈ ಕಂಬ ಬದಲಿಸಲು ಯಾರೂ ಬರುವುದಿಲ್ಲ. 800 ರೂಪಾಯಿ ಟ್ರ್ಯಾಕ್ಟರ್ ಬಾಡಿಗೆ ನೀಡಬೇಕು. ‘ಕೂಲಿ ಮಾಡುವ ನಾವು ಎಲ್ಲಿಂದ ಕೊಡಬೇಕು’ ಎನ್ನುವುದು ಗ್ರಾಮಸ್ಥರ ದೂರು. ಜವಾಬ್ದಾರಿ ಇರುವ ಬೆಸ್ಕಾಂ ಇಲಾಖೆಯ ವಾಹನದಲ್ಲೇ ವಿದ್ಯುತ್ ಕಂಬ ಸರಬರಾಜು ಮಾಡಿ,ಬಾಗಿರುವ ಕಂಬ ಸ್ಥಳಾಂತರಿಸುವುದು ಬಿಟ್ಟು ರೈತರನ್ನು ಉಚಿತವಾಗಿ ಕಂಬ ರವಾನಿಸಿಕೊಡಿ ಎಂದರೆ ಹೇಗೆ ? ಕೋಟ್ಯಂತರ ರೂಪಾಯಿ ಆದಾಯಗಳಿಸುವ ಇಲಾಖೆಗೆ ಸಾರ್ವಜನಿಕ ಅನುಕೂಲಕ್ಕಾಗಿ ಕೆಲಸ ನಿರ್ವಹಿಸುವುದು ಅವರ ಜವಾಬ್ದಾರಿ ಎಂಬುದು ಇಲಾಖೆ ಅಧಿಕಾರಿಗಳಿಗೆ ಏಕೆ ಅರ್ಥವಾಗುತ್ತಿಲ್ಲ ಎಂಬುದು ಗ್ರಾಮಸ್ಥರ ಪ್ರಶ್ನೆ.