ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಣಂತಿ, ಹಸುಗೂಸಿನ ಸ್ನಾ ನಕ್ಕೂ ವ್ಯವಸ್ಥೆ ಯಿಲ್ಲ

ಆಸ್ಪತ್ರೆ ಅವ್ತವಸ್ಥೆ: ಸಮಸ್ಯೆಗಳಿಂದ ನರಳುತ್ತಿದೆ ಕುರುಗೋಡು ಆಸ್ಪತ್ರೆ
Last Updated 7 ಡಿಸೆಂಬರ್ 2013, 9:41 IST
ಅಕ್ಷರ ಗಾತ್ರ

ಕುರುಗೋಡು: ತಾಲ್ಲೂಕಿನ ಪ್ರಥಮ ಪ್ರಾಥಮಿಕ ಆರೋಗ್ಯ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಮೂಲ ಸಮಸ್ಯೆಗಳಿಂದ ನರಳುತ್ತಿದೆ.

1963ರಲ್ಲಿ 6 ಹಾಸಿಗೆಯ ಪ್ರಾಥಮಿಕ ಆರೋಗ್ಯ ಕೇಂದ್ರವಾಗಿ ಪ್ರಾರಂಭಗೊಂಡು ನಂತರ 1994ರಲ್ಲಿ 16 ಹಾಸಿಗೆಯ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಯಿತಾದರೂ ಸೌಲಭ್ಯಗಳು ಮಾತ್ರ ಹೆಚ್ಚಾಗಲಿಲ್ಲ.

1963ರಲ್ಲಿ ನಿರ್ಮಾಣವಾಗಿದ್ದ ಕಟ್ಟಡವನ್ನು 2010ರಲ್ಲಿ ₨1ಕೋಟಿ ಜರ್ಮನ್ ಆನುದಾನದಲ್ಲಿ ನವೀಕರಿಸಿ 30 ಹಾಸಿಗೆ ಆಸ್ಪತ್ರೆಯಾಗಿ ಪರಿವರ್ತನೆಗೊಂಡಿದೆ  ಎನ್ನುವುದನ್ನು ಬಿಟ್ಟರೆ ರೋಗಿಗಳಿಗೆ ಯಾವುದೇ ಆಧುನಿಕ ಸೌಲಭ್ಯ ದೊರೆಯುತ್ತಿಲ್ಲ.

30 ಹಾಸಿಗೆ ಆಸ್ಪತ್ರೆಯಾಗಿರುವ ಇಲ್ಲಿ ಸರ್ಕಾರ ಆದೇಶದಂತೆ ನಾಲ್ಕು ಜನ ತಜ್ಞ ವೈದ್ಯರು ಸೇರಿ ಐದು ಜನರ ವೈದ್ಯರು ಕಾರ್ಯ ನಿರ್ವಹಿಸಬೇಕು. ಪ್ರಸ್ತುತ ಆಡಳಿತ ವೈದ್ಯಾಧಿಕಾರಿಯೂ ಆಗಿರುವ ಕಿವಿ, ಮೂಗು, ಗಂಟಲು ತಜ್ಞ ವೈದ್ಯ, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ವೈದ್ಯೆ ಮತ್ತು ಒಬ್ಬರು ಗುತ್ತಿಗೆ ವೈದ್ಯರು ಸೇರಿ ಮೂವರು ಕಾರ್ಯನಿರ್ವಹಿಸುತ್ತಿದ್ದಾರೆ.

ಹೃದಯ, ಮೂಳೆ, ಜನರಲ್ ಫಿಜೀಶಿಯನ್, ಅರಿವಳಿಕೆ ತಜ್ಞರಿಲ್ಲ. ದಂತ ವೈದ್ಯರಿಲ್ಲದ ಕಾರಣ ದಂತ ಚಿಕಿತ್ಸೆ ಉಪಕರಣಗಳು ಮತ್ತು ಹೃದ್ರೋಗ ತಜ್ಞರಿಲ್ಲದ ಕಾರಣ ಇಸಿಜಿ ಯಂತ್ರ ಮೂಲೆ ಸೇರಿ ದೂಳು ಹಿಡಿದಿವೆ.

ಆರು ಜನ ಶುಶ್ರೂಷಿಕಿಯರಿರಬೇಕಾದ ಆಸ್ಪತ್ರೆಗೆ ನಾಲ್ವರಿದ್ದಾರೆ. 10 ಜನ ‘ಡಿ’ ಗ್ರೂಪ್ ನೌಕರರಲ್ಲಿ ಆರು ಜನರಿದ್ದಾರೆ.108 ವಾಹನ ಸೇರಿ ಎರಡು ಆಂಬುಲೆನ್ಸ್ ಗಳಿಗೆ  ಒಬ್ಬ ಚಾಲಕನ ಕೊರತೆ ಇದೆ. ಕ್ಷ–ಕಿರಣ ತಂತ್ರಜ್ಞ, ಔಷಧಿ ತಜ್ಞರು, ಪ್ರಯೋಗಾಲಯ ತಜ್ಞರು, ಪ್ರಥಮ ಮತ್ತು ದ್ವಿತೀಯ ದರ್ಜೆ ಗುಮಾಸ್ತರು ನಿಗದಿಯಂತೆ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನುವುದೊಂದೇ ಸಂತಸದ ಸಂಗತಿ.

ತಿಂಗಳಿಗೆ ಕನಿಷ್ಠ 80 ರಿಂದ 100 ಹೆರಿಗೆಯಾಗುತ್ತವೆ. 80 ರಿಂದ 90 ಮಹಿಳೆಯರು ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಾರೆ. ಇದು ಕೇವಲ 30 ಹಾಸಿಗೆ  ಆಸ್ಪತ್ರೆಯಾಗಿರುವುದರಿಂದ ಒಳ ರೋಗಿಗಳು ನಿತ್ಯ ತೊಂದರೆ ಅನುಭವಿಸುವಂತಾಗಿದೆ.

ಬಾಣಂತಿಯರು ಮತ್ತು ಹಸುಗೂಸುಗಳ ಸ್ನಾನಕ್ಕೂ ಕೂಡಾ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಆವರಣದಲ್ಲಿಯೇ ನೀರು ಕಾಯಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ ಎಂದು ಆರೋಪಿಸುವ ಜನರು ರೋಗಿಗಳಿಗೆ ಬಿಸಿನೀರು ಪೂರೈಸಲು ಸೋಲಾರ್ ಯಂತ್ರ ಅಳವಡಿಸುವುದು ಸೂಕ್ತ ಎಂದು ಸಲಹೆ ಮಾಡಿದ್ದಾರೆ. ರೋಗಿಗಳ ಸಹಾಯಕರಿಗೆ ಅಡುಗೆ ಮಾಡಿಕೊಳ್ಳಲು ನಿರ್ಮಿಸಿರುವ ಅಡುಗೆ ಕೋಣೆಯನ್ನು ತಾತ್ಕಾಲಿಕವಾಗಿ ಆಯುರ್ವೇದ ಆಸ್ಪತ್ರೆಗೆ ನೀಡಿರುವುದರಿಂದ ಊಟಕ್ಕೆ ಹೋಟೆಲ್ ಅವಲಂಬಿಸಬೇಕಾದ ಅನಿವಾರ್ಯತೆಯೂ ಬಡವರನ್ನು ಸಂಕಷ್ಟ್ಕಕೆ ನೂಕಿದೆ.

ಆಸ್ಪತ್ರೆಯಲ್ಲಿ ಲಭ್ಯವಿರುವ ಹಾಸಿಗೆಗಳು ಭರ್ತಿಯಾದರೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳು ಪರಿತಪಿಸಬೇಕಾಗುತ್ತದೆ. ಸ್ಥಳೀಯವಾಗಿ ಕೆಲವು ಬಾರಿ ತುರ್ತು ಚಿಕಿತ್ಸೆ ದೊರೆಯದೆ ಬಳ್ಳಾರಿ ಆಸ್ಪತ್ರೆಗೆ ಹೋಗಬೇಕಾಗುತ್ತಿದೆ. ರಾತ್ರಿ ವೇಳೆ ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂಬ ಆರೋಪಗಳು ಇವೆ.

ಅಪಘಾತದಲ್ಲಿ ತೀವ್ರ ಗಾಯಗಳಾಗಿದ್ದರೆ ಅವರ ಸಮಸ್ಯೆಗೆ ಅನುಗುಣವಾಗಿ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕ ಸೇರಿದಂತೆ ಇತರೇ ಸೌಲಭ್ಯಗಳಿಲ್ಲದ ಕಾರಣ ಅನಿವಾರ್ಯವಾಗಿ ಬಳ್ಳಾರಿಗೆ ಕಳುಹಿಸಬೇಕಾದ ಪರಿಸ್ಥಿತಿ ಇದೆ ಎನ್ನುವುದನ್ನು ಆಸ್ಪತ್ರೆಯ ಮೂಲಗಳು ಹೇಳುತ್ತಿವೆ.

ವಾರ್ಷಿಕ 10 ಲಕ್ಷ ಮೌಲ್ಯದ ಔಷಧಿ ಖರೀದಿಸಲು ಅವಕಾಶವಿದ್ದರೂ, ಹೊರಗಡೆ ಚೀಟಿ ಬರೆದುಕೊಡುತ್ತಾರೆ ಎನ್ನುವ ಆರೋಪಕ್ಕೆ, ರೋಗಿಗಳು ಬಯಸಿದಲ್ಲಿ ಮಾತ್ರ ಹೊರಗಡೆ ಚೀಟಿ ಬರೆದುಕೊಡಲಾಗುತ್ತದೆ ಎಂದು ವೈದ್ಯರು ಸಮಜಾಯಿಸಿ ನೀಡುತ್ತಾರೆ.

ಆಸ್ಪತ್ರೆಯಲ್ಲಿ ಡೆಂಗೆ ಜ್ವರ ಪತ್ತೆ ಹಚ್ಚುವ ಸೌಲಭ್ಯವಿಲ್ಲದ ಕಾರಣ ರೋಗಿಗಳು ಹೆಚ್ಚು ಹಣಕೊಟ್ಟು ಹೊರಗಡೆ ಪರೀಕ್ಷಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಆ ಸೌಲಭ್ಯ ಇಲ್ಲಿ ದೊರೆತರೆ ಬಡ ರೋಗಿಗಳಿಗೆ ಸಹಕಾರಿಯಾಗುತ್ತದೆ.

ಹೆರಿಗೆ ವಾರ್ಡ್ ಅಕ್ಕಪಕ್ಕದಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಚರಂಡಿ ನೀರು ಹರಿಯುತ್ತಿದ್ದು, ದುರ್ವಾಸನೆ ಬೀರುತ್ತದೆ. ತಜ್ಞ ವೈದ್ಯರ ನೇಮಕ ಮತ್ತು ಮೂಲ ಸೌಲಭ್ಯ ಕಲ್ಪಿಸುವ ಬಗ್ಗೆ ಸರ್ಕಾರ ಗಮನ ಹರಿಸಬೇಕು ಎಂದು ಜನರು ಒತ್ತಾಯಿಸಿದ್ದಾರೆ.

ಆಸ್ಪತ್ರೆ ಕ್ಲೀನ್ ಇಟ್ಟಿಲ್ಲ
ಬಡ ರೋಗಿಗೆ ಸರಿಯಾಗಿ ನೋಡಂಗಿಲ್ಲ. ಜನರೇಟರ್ ಐತಿ, ಕರೆಂಟ್ ಇಲ್ಲದಾಗ ಅದನ್ನು ಬಳಸಂಗಿಲ್ಲ. ಇದರ ಬಗ್ಗೆ ಡಾಕ್ಟ್ರಿಗೆ ಹೇಳಿವಿ ಏನು ಮಾಡತಾರ ನೋಡಬೇಕು.
–ಜಿ.ಕೆ. ದೇವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡಬಣ) ಅಧ್ಯಕ್ಷ

ಜಾಗದ ಸಮಸ್ಯೆ

‘ಹೆರಿಗೆ, ಆಪ್ರೇಸನ್ ಬೇಸ್ ಮಾಡ್ತಾರೆ, ಒಬ್ಬೊಬ್ಬರು ರೊಕ್ಕ ಕೇಳ್ತಾರ, ಇನ್ನು ಕೆಲವರು ಕೇಳಂಗಿಲ್ಲ. ನಮ್ಮಿಂದೆ ಬಂದಾವರಿಗೆ ಇರಾಕ ಜಾಗಾ ಇಲ್ಲ. ಅದು ಬುಟ್ರೆ ಎಲ್ಲಾ ಬೇಸೈತಿ’ ಎನ್ನುತ್ತಾರೆ. ಸಂತಾನ ನಿಯಂತ್ರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ ಕುಡತಿನಿ ಗ್ರಾಮದ ಗಂಗಮ್ಮ.

ಸ್ವಚ್ಛತೆಗೆ ಸೂಕ್ತ ಕ್ರಮ: ಭರವಸೆ
ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಮೇಲ್ದರ್ಜೆಗೇರಿ ಸಮುದಾಯ ಆರೋಗ್ಯ ಕೇಂದ್ರವಾದ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಜವಾಬ್ದಾರಿ ಬೇರೆ ಕೇಂದ್ರಕ್ಕೆ ವಹಿಸಿಲ್ಲ. ಇರುವ ಸಿಬ್ಬಂದಿ ಎರಡು ಕಾರ್ಯ ಮಾಡಲು ಸಾಧ್ಯವಾಗುತ್ತಿಲ್ಲ. 

ಸುತ್ತಮುತ್ತ ಮೂರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರು, ಹೆಚ್ಚು ರೋಗಿಗಳು ಇಲ್ಲಿನ ಆಸ್ಪತ್ರೆಯನ್ನು ಅವಲಂಬಿಸಿದ್ದರಿಂದ ಇರುವ ಸಿಬ್ಬಂದಿಯ ಮೇಲೆ ಕೆಲಸದ ಒತ್ತಡ ಹೆಚ್ಚಾಗಿದೆ. ಪ್ರಸ್ತುತ 30 ಹಾಸಿಗೆ ಇರುವುದರಿಂದ ಬರುವ ರೋಗಿಗಳಿಗೆ ಸಾಲುತ್ತಿಲ್ಲ. ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಕನಿಷ್ಠ 50 ಹಾಸಿಗೆ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸುವ ಅಗತ್ಯವಿದೆ. ಬಾಣಂತಿಯರಿಗೆ ಬಿಸಿನೀರು ಕಾಯಿಸಿಕೊಳ್ಳಲು ಗ್ಯಾಸ್ ಸಿಲಿಂಡರ್ ವ್ಯವಸ್ಥೆ ಇದೆ. ಬಳಸಿಕೊಳ್ಳಬಹುದು.  ಸಿಬ್ಬಂದಿ ಕೊರತೆಯಿಂದ ಸ್ವಚ್ಛತೆ ಕಡಿಮೆ ಇದೆ. ಸ್ವಚ್ಛತೆ ಬಗ್ಗೆ ಕ್ರಮಕೈಗೊಳ್ಳಲಾಗುವುದು.
–ಡಾ.ಟಿ.ರಾಜಶೇಖರ ರೆಡ್ಡಿ, ಆಡಳಿತ ವೈದ್ಯಾಧಿಕಾರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT