ಚಿಕ್ಕಮಗಳೂರು: ಜಿಲ್ಲಾಡಳಿತದ ಕ್ರಮ ಉಲ್ಲಂಘಿಸಿ ತಾಲ್ಲೂಕಿನ ಬಾಬಾಬುಡನ್ಗಿರಿಯಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾದಲ್ಲಿ ಉರುಸ್ ನಡೆಸಲು ಯತ್ನಿಸಿದ ದರ್ಗಾದ ‘ಸಜ್ಜಾದ ನಶೀನ್’ ಆಗಿರುವ ಸಯ್ಯದ್ ಗೌಸ್ ಮೊಹಿದ್ದೀನ್ ಶಾಖಾದ್ರಿ ಅವರನ್ನು ಶನಿವಾರ ಮುಂಜಾನೆ ಪೊಲೀಸರು ಚಿಕ್ಕಮಗಳೂರು ನಗರದಲ್ಲಿ ಬಂಧಿಸಿದರು.
ಈ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ನೂರಾರು ಫಕೀರರು ಉರುಸ್ ನಡೆಸಲು ಅವಕಾಶ ನೀಡಬೇಕೆಂದು ಒತ್ತಾಯಿಸಿ ಘೋಷಣೆ ಕೂಗಿದರು. ನಗರದ ಬಡಾ ಮಕಾನ್ ಪ್ರದೇಶದಲ್ಲಿ ಉರುಸ್ ಆಚರಣೆಗೆ ಸಂಬಂಧಿಸಿದ ಧಾರ್ಮಿಕ ವಿದಿವಿಧಾನಗಳು ಜರುಗಿದವು.
ಕಳೆದ ನಾಲ್ಕು ವರ್ಷಗಳಿಂದ ಉರುಸ್ ಆಚರಿಸುತ್ತಿದ್ದ ಹಂಗಾಮಿ ಉರುಸ್ ಸಮಿತಿ ಮತ್ತು ನಗರದ ಮುಸ್ಲಿಮರು ಈ ಬಾರಿ ಶಾಖಾದ್ರಿ ಮತ್ತು ಜಿಲ್ಲಾಡಳಿತದ ನಡುವಿನ ಮುಸುಕಿನ ಗುದ್ದಾಟದಿಂದಾಗಿ ದರ್ಗಾದ ವಾರ್ಷಿಕ ಉರುಸ್ನಿಂದ ದೂರ ಉಳಿದಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರದಂದು ಜಿಲ್ಲಾಡಳಿತವೇ ಮುಂದೆ ನಿಂತು ಉರುಸ್ ನಡೆಸಿತ್ತು. ಆ ಸಂಧರ್ಭದಲ್ಲಿ ಶಾಖಾದ್ರಿ ಶನಿವಾರ (ಮಾ26) ರಂದು ಉರುಸ್ ಆಚರಿಸುವುದಾಗಿ ಘೋಷಿಸಿದ್ದರು.