ಹಟ್ಟಿ ಚಿನ್ನದ ಗಣಿ: ಸ್ಥಳೀಯ ಅಂಚೆ ಕಚೇರಿ ಮುಖಾಂತರ ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯಲ್ಲಿ ಪಿಂಚಣಿ ಪಡೆಯುತ್ತಿರುವ ಸುಮಾರು 215 ಜನ ವಿಧವೆಯರು, ವೃದ್ಧರು ಕಳೆದ ಎರಡು ತಿಂಗಳಿಂದ ಅಂಚೆ ಕಚೇರಿಗೆ ಪಿಂಚಣಿ ಬಾರದ ಕಾರಣ ಕಂಗಾಲಾಗಿ ಕೊನೆಗೆ ಸೋಮವಾರ ಕೆಲವು ಗಂಟೆಗಳ ಕಾಲ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಕಳೆದ ಐದಾರು ವರ್ಷಗಳಿಂದ ಅಂಚೆ ಕಚೇರಿಯಿಂದ ಪಿಂಚಣಿ ಪಡೆಯಲಾಗುತ್ತಿತ್ತು. ಕಳೆದ ಡಿಸೆಂಬರ್ ತಿಂಗಳಿಂದ ಪಿಂಚಣಿ ನೀಡುತ್ತಿಲ್ಲ. ಮೇಲಧಿಕಾರಿಗಳಿಂದ ಪಿಂಚಣಿ ವಿತರಿಸದಂತೆ ಆದೇಶ ಬಂದಿದೆ. ಒಂದು ತಿಂಗಳ ತಡೆಯಿರಿ ಮುಂದಿನ ತಿಂಗಳು ಎರಡು ತಿಂಗಳಿನ ಪಿಂಚಣಿ ಸೇರಿಸಿ ಒಟ್ಟು ನೀಡುವುದಾಗಿ ಪೋಸ್ಟ್ ಮಾಸ್ಟರ್ ಭರವಸೆ ನೀಡಿದ್ದರು. ಆದರೆ ಈ ತಿಂಗಳ ಮತ್ತೆ ಪಿಂಚಣಿ ನೀಡುತ್ತಿಲ್ಲ. ದಿನ ನಿತ್ಯ ಬೇರೆ ಬೇರೆ ನೆಪ ಹೇಳುತ್ತಿದ್ದಾರೆ.
ಅಂಚೆ ಕಚೇರಿಗೆ ಅಲೆದು ಅಲೆದು ಸಾಕಾಗಿದೆ. ಪಿಂಚಣಿ ನೀಡದಂತೆ ಮೇಲಧಿಕಾರಿಗಳಿಂದ ಆದೇಶ ಬಂದಿದೆ ಎಂಬ ವಿಷಯ ಪೋಸ್ಟ್ ಮಾಸ್ಟರ್ ಇವತ್ತು ಹೇಳಿದ್ದಾರೆ. ಈ ವಿಷಯ ಎರಡು ತಿಂಗಳುಗಳಿಂದ ಮರೆಮಾಚಿ ಈಗ ಬ್ಯಾಂಕ್ ಮುಖಾಂತ ಪಿಂಚಣಿ ತೆಗೆದುಕೊಳ್ಳುವಂತೆ ಹೇಳುತ್ತಿದ್ದಾರೆ. ಈಗ ಹೊಸದಾಗಿ ಖಾತೆ ತೆಗೆಯಲು ಸುಮಾರು 500 ರೂ.ಗಳು ಖರ್ಚು ಮಾಡಬೇಕು. ಇಷ್ಟು ಹಣ ಎಲ್ಲಿಂದ ತರಬೇಕು. ಅಲ್ಲದೇ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ದುರುಗಮ್ಮ, ಮರಿಯಮ್ಮ, ಮಹಿಬೂಬ ಬೀ, ಲಾಲಬೀ ಸೇರಿದಂತೆ ಇನ್ನಿತರ ಮಹಿಳೆಯರು ತಮ್ಮ ಗೋಳನ್ನು ಹೇಳುತ್ತಿದ್ದಾರೆ.
ಮೇಲಧಿಕಾರಿಗಳಿಂದ ಆದೇಶ ಬಂದರೆ ವಿತರಿಸುವುದಾಗಿ ಪೋಸ್ಟ್ ಮಾಸ್ಟರ್ ಸ್ಪಷ್ಟ ಪಡಿಸುತ್ತಾರೆ. ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ ಹಾಗೂ ಅಂಚೆ ಇಲಾಖೆಯ ನಡುವೆ ವ್ಯವಹಾರಿಕ ಸಂಬಂಧದಲ್ಲಿ ತೊಂದರೆ ಉಂಟಾಗಿದ್ದರಿಂದ ಪಿಂಚಣಿದಾರರು ಪರದಾಡುವಂತಾಗಿದೆ. ಅಂಚೆ ಇಲಾಖೆಯವರು ಕೂಡಲೇ ಸಂಬಂಧಿಸಿದ ದಾಖಲೆಗಳು ಭವಿಷ್ಯ ನಿಧಿ ಸಂಸ್ಥೆಗೆ ವರ್ಗಮಾಡಬೇಕೆಂದು ಒತ್ತಾಯಿಸಿದ್ದಾರೆ.