ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರದ ಮಾಸಾಶನ: ನೊಂದವರ ಧರಣಿ

Last Updated 5 ಜನವರಿ 2012, 7:30 IST
ಅಕ್ಷರ ಗಾತ್ರ

ಸವದತ್ತಿ: ವೃದ್ಧಾಪ್ಯ, ವಿಧವಾ, ಅಂಗವಿಕಲ, ಸಂಧ್ಯಾ-ಸುರಕ್ಷಾ ಹೀಗೆ ಸರ್ಕಾರದ ಯೋಜನೆಯ ಹಲವಾರು ಮಾಸಾಶನಗಳು ಕಳೆದ ಹತ್ತಾರು ತಿಂಗಳಿಂದ ಬಾರದಿರುವುದು ಮತ್ತು ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ್ದಕ್ಕೆ ತಾಲ್ಲೂಕಿನ ನೂರಾರು ಫಲಾನುಭವಿಗಳು ಬುಧವಾರ ಇಲ್ಲಿನ ಮಿನಿ ವಿಧಾನಸೌಧದ ಮುಂದೆ ಧರಣಿ ನಡೆಸಿ, ಮುತ್ತಿಗೆ ಹಾಕಲು ಯತ್ನಿಸಿದರು.

`ಕಳೆದ ಒಂದು ವರ್ಷದಿಂದ ನಮಗೆ ಬರುತ್ತಿರುವ ಮಾಸಾಶನ ಬಂದಿಲ್ಲಾ, ಅದಕ್ಕಾಗಿ ಅನೇಕ ಬಾರಿ ಮನವಿ ಅರ್ಪಿಸಿದ್ದೇವೆ. ಹೋರಾಟ ಮಾಡಿದ್ದೇವೆ. ಸಾಲದ್ದಕ್ಕೆ 10 ದಿನಗಳ ಕಾಲ ಮೌನ ಸರದಿ ಉಪವಾಸ ಸತ್ಯಾಗ್ರಹ ನಡೆಸಿದ್ದೇವೆ. ಇವತ್ತು ತಹಸೀಲ್ದಾರ ಕಚೇರಿ ಮುತ್ತಿಗೆ ಹಾಕಿದರು ಅದನ್ನು ವ್ಯವಸ್ಥಿತವಾಗಿ ವಿಫಲವಾಗಿಸುವದರ ಜತೆಗೆ ನಿರ್ಗತಿಕರಿಗೆ ಬೆಲೆ ಇಲ್ಲದಂತಾಗಿದೆ~ ಎಂದು ಬಸವರಾಜ ಹಡಪದ ನೊಂದ ಮನಸ್ಸಿನಿಂದ ನುಡಿದರು.

ಬುಧವಾರ ಇಲ್ಲಿನ ತಹಸೀಲ್ದಾರ ಕಚೇರಿ ಮುತ್ತಿಗೆ ಕಾರ್ಯಕ್ರಮವನ್ನು ಪೊಲೀಸರು ಮಧ್ಯ ಪ್ರವೇಶಿಸಿ ಕೇವಲ ಧರಣಿ ನಡೆಸಿ ಇದಕ್ಕೆ ಅನುಮತಿ ಇಲ್ಲಾ, ಎಂದಾಗ ನೆರೆದ ಸಾವಿರಾರು ಫಲಾನುಭವಿಗಳು ಆವರಣದಲ್ಲಿ ಧರಣಿ ನಡೆಸಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನೊಂದ ಬಡ, ನಿರ್ಗತಿಕರಿಗೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ನಡೆಸುವ ಮುತ್ತಿಗೆ ಕಾರ್ಯಕ್ರಮದ ಕುರಿತು ಈ ಮೊದಲೇ ತಹಸೀಲ್ದಾರ, ಪೊಲೀಸರಿಗೆ ಲಿಖಿತವಾಗಿ ಮನವಿ ಅರ್ಪಿಸಲಾಗಿದೆ. ಆದರೂ ನಮಗೆ ಹೋರಾಟ ಮಾಡಲು ಅನುಮತಿ ಪತ್ರ ನೀಡದೆ. ನಿಮ್ಮ ಹೋರಾಟಕ್ಕೆ ಅನುಮತಿ ಇಲ್ಲದ್ದರಿಂದ ಮುತ್ತಿಗೆ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಪೊಲೀಸರಿಂದ ಹೇಳಿಸಿದ ತಹಸೀಲ್ದಾರ ಶಾರದಾ ಕೋಲಕಾರ ಅವರು, ನಮ್ಮನ್ನು ಕಣ್ಣೆತ್ತಿ ನೋಡದೆ ಹಾಗೆ ಹೊರಟು ಹೋದರು ಎಂದು ಅಸಮಾಧಾನದ ಮಾತನ್ನಾಡಿದರು.

ಈ ಕುರಿತು ಶಾಸಕ ಆನಂದ ಮಾಮನಿ ಅವರಿಗೂ ಮನವಿ ಅರ್ಪಿಸುವುದಿತ್ತು. ಕಾರಣಾಂತರದಿಂದ ಬೆಂಗಳೂರಿಗೆ ಹೋಗಿದ್ದು, ನಾಳೆ ನಾವು ಅಲ್ಲಿಯೇ ಮುಖ್ಯಮಂತ್ರಿಗಳಿಗೂ ಮನವಿ ಕೊಡುವುದಾಗಿ ತಿಳಿಸಿದ ಅವರು, ಬರುವ ದಿನಗಳಲ್ಲಿ ನಮ್ಮ ಹೋರಾಟವನ್ನು ಇನ್ನಷ್ಟು ಚುರುಕುಗೊಳಿಸಿ, ತಾಲ್ಲೂಕಿನಲ್ಲಿನ ಸಮಗ್ರ ಚಿತ್ರಣವನ್ನು ಬೆಳಗಾವಿಯಲ್ಲಿ ಸಾರಿ-ಸಾರಿ ಹೇಳುವುದಾಗಿ ಹೇಳಿದರು. 

ಬಸವರಾಜ ಬಿಜ್ಜೂರ, ಕಲ್ಲಪ್ಪ ಉಪ್ಪಾರ, ಈರಯ್ಯ ಹಂಚಿನಾಳ, ರತ್ನವ್ವ ಮಾದರ, ಕಾಶಿನಾಥ ಹಾಗೂ ನೂರಾರು ಫಲಾನುಭವಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT