ಯಲ್ಲಾಪುರ: ಇಲ್ಲಿನ ರವೀಂದ್ರ ನಗರದಲ್ಲಿ ಬಾಲಕರೇ ಸೇರಿ ಕಳೆದ ಆರು ವರ್ಷದಿಂದ ಸ್ವತಃ ಗಣೇಶನನ್ನು ತಯಾರಿಸಿ, ಪ್ರತಿಷ್ಠಾಪಿಸಿ ಉತ್ಸವ ಆಚರಿಸಿ ಗಮನ ಸೆಳೆದಿದ್ದಾರೆ.
9 ನೇ ತರಗತಿಯ ವಿದ್ಯಾರ್ಥಿ ರಾಘವೇಂದ್ರ ಗಾಳಪ್ಪನವರ್ ನೇತೃತ್ವದಲ್ಲಿ ‘ಬಾಲಕರ ಗಣಪತಿ ಉತ್ಸವ ’ಎಂಬ ಹೆಸರಿನಲ್ಲಿ ಗಣೇಶೋತ್ಸವ ಆಚರಿಸುತ್ತ ಬಂದಿದ್ದಾರೆ.
ಯಲ್ಲಾಪುರ ಹಾಗೂ ಇತರೆಡೆ ಗಳಲ್ಲಿನ ಸಾರ್ವಜನಿಕ ಗಣೇಶೋತ್ಸವ ಗಳನ್ನು ಕಂಡು ಪ್ರೇರಣೆಗೊಂಡ ರಾಘವೇಂದ್ರ ನಾವೂ ಏಕೆ ಸಾರ್ವಜನಿಕ ಗಣಪನನ್ನು ಕೂರಿಸಬಾರದೆಂಬ ಆಲೋಚನೆ ಬಂದು, ಹಿರಿಯರ ಮಾರ್ಗದರ್ಶನದಲ್ಲಿ ಉತ್ಸವ ಪ್ರಾರಂಭಿಸಲಾಯಿತು ಎನ್ನುವ ರಾಘವೇಂದ್ರ, ಇದಕ್ಕೆ ತನ್ನ ಮಿತ್ರರೂ ಕೈಜೋಡಿಸಿದರೆಂದು ಸಂತಸ ವ್ಯಕ್ತಪಡಿಸುತ್ತಾನೆ.
ಗಣಪನ ಮೂರ್ತಿಯನ್ನು ಸ್ವತಃ ರಾಘವೇಂದ್ರನೇ ತಯಾರಿಸುತ್ತಾನೆ. ಮೂರ್ತಿಯನ್ನು ತಯಾರಿಸುವ ಕಲೆಯನ್ನು ಕಲಿತಿಲ್ಲವಾದರೂ, ತನಗೆ ತಿಳಿದ ರೀತಿಯಲ್ಲಿ ಗಣಪನನ್ನು ತಯಾರಿಸಿ ಪೂಜಿಸುತ್ತೇವೆ. ನಾವೇ ತಯಾರಿಸಿದ ಗಣಪನನ್ನು ಪೂಜಿಸುತ್ತಿ ರುವುದು ಮತ್ತಷ್ಟು ಖುಷಿ ನೀಡುತ್ತದೆ ಎನ್ನುತ್ತಾನೆ.
ರಾಘವೇಂದ್ರನ ಗಣಪತಿ ಉತ್ಸವಕ್ಕೆ ಅವನ ಗೆಳೆಯರಾದ ಗಣೇಶ ಗಾಳಪ್ಪನವರ, ಸಂಜಯ, ಮಂಜುನಾಥ ಪಿ, ಸಂಜಯ ಗಾಳಪ್ಪನವರ, ಪ್ರಶಾಂತ ಗಾಳಪ್ಪನವರ, ಅಪೂರ್ವ, ಸಂತೋಷ, ರವಿ ಬೆಂಬಲಿಗರಾಗಿ ಸಹಕಾರ ನೀಡುತ್ತಿದ್ದಾರೆ.