ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಾರ್ಮಿಕ ಪದ್ಧತಿ: ಜಾಗೃತರಾಗಲು ಕರೆ

Last Updated 13 ಜೂನ್ 2011, 9:05 IST
ಅಕ್ಷರ ಗಾತ್ರ

ಮಂಡ್ಯ: ಬಾಲ ಕಾರ್ಮಿಕ ಪದ್ಧತಿಯು ಅನಿಷ್ಠ ಪದ್ಧತಿಯಾಗಿದ್ದು, ಸಮಾಜ ಮುಖ್ಯವಾಗಿ ಪೋಷಕರು ಈ ನಿಟ್ಟಿನಲ್ಲಿ ಜಾಗೃತರಾಗಬೇಕಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಆರ್.ಶಾರದಾ ಅಭಿಪ್ರಾಯಪಟ್ಟರು.

ಭಾನುವಾರ ನಗರದ ಕಲಾಮಂದಿರದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡತನ, ಅನಕ್ಷರತೆ ಮತ್ತು ನಿರುದ್ಯೋಗ ಸಮಸ್ಯೆಗಳು ಈ ಪಿಡುಗು ಉಳಿಯಲು ಕಾರಣ ವಾಗಿವೆ ಎಂದು ಹೇಳಿದರು.

14 ವರ್ಷದ ವರೆಗಿನ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಸೇರಿದಂತೆ ಸರ್ಕಾರ ಈ ವಯಸ್ಸಿನ ಮಕ್ಕಳನ್ನುದೃಷ್ಟಿಯಲ್ಲಿ ಇರಿಸಿಕೊಂಡು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರೂ ಪರಿಸ್ಥಿತಿ ಬದಲಾಗಿಲ್ಲ. ಒಟ್ಟು ಸಮಾಜ ಬಾಲ ಕಾರ್ಮಿಕ ಸಮಸ್ಯೆಯ ನಕಾರಾತ್ಮಕ ಪರಿಣಾಮಗಳನ್ನು ಅರ್ಥೈಸಿಕೊಳ್ಳಬೇಕಿದೆ ಎಂದು ಹೇಳಿದರು.

ಕಾನೂನು ಸೇವಾ ಪ್ರಾಧಿಕಾರ, ಸಲಹಾ ಕೇಂದ್ರಗಳು ಇದ್ದು, ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಇವುಗಳ ನೆರವನ್ನು ಪಡೆದು ಕೊಳ್ಳ ಬೇಕು ಎಂದು ಸಲಹೆ ಮಾಡಿದರು.ಜಿಲ್ಲಾಧಿಕಾರಿ ಪಿ.ಸಿ.ಜಾಫರ್ ಅವರು, ಇತ್ತೀಚಿನ ವರ್ಷಗಳಲ್ಲಿ ಬಾಲಕಾರ್ಮಿಕ ಪದ್ಧತಿಯ ಪ್ರಮಾಣ ಕಡಿಮೆ ಆಗಿದ್ದು, ಇದು ಸಮಾಜ ಜಾಗೃತಗೊಳ್ಳುತ್ತಿದೆ ಎಂಬುದರ ನಿದರ್ಶನ ಎಂದರು.

ಬಡತನ ಹಿನ್ನೆಲೆಯಲ್ಲಿ  ಕೆಲ ಪೋಷಕರು ಮಕ್ಕಳನ್ನು ಹೋಟೆಲ್, ಗ್ಯಾರೇಜ್ ಹೀಗೆ ಸೇರಿಸಿಬಿಡುತ್ತಾರೆ ಎಂದರು. ನಾಗರಿಕರು ಇಂಥ ಪ್ರಕರಣಗಳು ಕಂಡುಬಂದಲ್ಲಿ ಕಾರ್ಮಿಕ ಇಲಾಖೆಗೆ ಮಾಹಿತಿ ನೀಡುವ ಮೂಲಕ ಪರಿಸ್ಥಿತಿ ಉತ್ತಮಪಡಿಸಲು ಸಹಕರಿಸ ಬೇಕು ಎಂದರು. ಇದೇ ಸಂದರ್ಭದಲ್ಲಿ ಬಾಲಕರನ್ನು ಕಾರ್ಮಿಕರಾಗಿ ಸೇರಿಸಿ ಕೊಳ್ಳುವುದಿಲ್ಲ ಎಂದು ಸಾಮೂಹಿಕ ವಾಗಿ ಪ್ರತಿಜ್ಞೆ ಸ್ವೀಕರಿಸಲಾಯಿತು. ಜಿಲ್ಲಾಧಿಕಾರಿಗಳು ಪ್ರತಿಜ್ಞಾ ವಿಧಿ ಬೋಧಿಸಿದರು.

ಜಾಥಾ: ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾಮಂದಿರದವರೆಗೂ ಬಾಲ ಕಾರ್ಮಿಕ ಪಿಡುಗು ಕುರಿತು ಜಾಗೃತಿ ಮೂಡಿಸುವ ಜಾಥಾ ನಡೆಯಿತು. ಪಿಡುಗು ವಿರೋಧಿಸುವ ಘೋಷಣೆ ಗಳಿದ್ದ ಭಿತ್ತಿಪತ್ರಗಳನ್ನು ಮಕ್ಕಳು ಹಿಡಿದಿದ್ದರು.

ಕಾರ್ಮಿಕ ಅಧಿಕಾರಿಗಳಾದ ಎ.ಸಿ. ತಮ್ಮಣ್ಣ, ಮಹಮ್ಮದ್ ಯೂಸುಫ್, ವಕೀಲರ ಸಂಘದ ಅಧ್ಯಕ್ಷ ಬಿ.ಟಿ. ನಾಗರಾಜು,  ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು, ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಇಷರತ್ ಜಹನ್‌ಹಾರ ಅವರೂ ಇದ್ದರು.

ಸಮುದಾಯದ ಸಹಭಾಗಿತ್ವ ಅಗತ್ಯ: ಮಲ್ಲನಗೌಡ
ಪಾಂಡವಪುರ:
ಬಾಲಕಾರ್ಮಿಕ ಪದ್ಧತಿಯನ್ನು ತೊಡೆದು ಹಾಕಲು ಕೇವಲ ಕಾನೂನಿನಿಂದ ಮಾತ್ರ ಸಾಧ್ಯವಿಲ್ಲ. ಸಮುದಾಯದ ಸಹಭಾಗಿತ್ವ ವಿದ್ದರೆ ತೊಡೆದು ಹಾಕಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಲ್ಲನಗೌಡ ಹೇಳಿದರು.

ಪಟ್ಟಣದ ಮೆಟ್ರಿಕ್‌ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ವಿಶ್ವ ಬಾಲಕಾರ್ಮಿಕರ ವಿರೋಧಿ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಬಾಲಕಾರ್ಮಿಕ ಪದ್ಧತಿಯನ್ನು ಹೊಡೆ ದೊಡಿಸಲು ಕಾನೂನು ಮತ್ತು ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ. ಕಾನೂನು ಕಾರ್ಯಗತ ಗೊಳ್ಳಬೇಕಾ ದರೆ ಜನಸಮುದಾಯದ ಭಾಗವಹಿ ಸುವಿಕೆ ಮುಖ್ಯ. ಪೋಷಕರು ತಮ್ಮ ಮಕ್ಕಳ ಭವಿಷ್ಯವನ್ನು ರೂಪಿಸಬೇಕಾ ದುದು ಅತ್ಯಂತ ಜವಾಬ್ದಾರಿಯಾಗಿದೆ. ಆದರೆ, ಅವರು ತಮ್ಮ ಜವಾಬ್ದಾರಿ ಯನ್ನು ಮರೆತು ದುಡಿಯಲು ತೊಡಗಿಸುತ್ತಾರೆ. ಇದರಿಂದಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಾದ ಮಕ್ಕಳು ತಮ್ಮ ಎಳೆತನದಲ್ಲಿಯೇ ದುಡಿಯಲು ತೊಡಗುತ್ತಾರೆ~ ಎಂದು ಅವರು ವಿಷಾದಿಸಿದರು.

ಕಾರ್ಮಿಕ ಇಲಾಖೆಯ ಕಾರ್ಮಿಕ ನಿರೀಕ್ಷಕಿ ಎಂ.ಎಸ್.ವಸಂತಕುಮಾರಿ ಮಾತನಾಡಿ, `ಬಾಲಕರನ್ನು ದುಡಿಸಿ ಕೊಳ್ಳಲು ಮುಂದಾಗುವ ಮಾಲೀಕರಿಗೆ 20ಸಾವಿರ ದಂಡ ಹಾಗೂ 6ತಿಂಗಳು ಸಜೆ ವಿಧಿಸಲಾಗುತ್ತದೆ. ಅಲ್ಲದೇ, ಮಕ್ಕಳನ್ನು ದುಡಿಯಲು ತೊಡಗಿಸುವ ಪೋಷಕರು ಕೂಡ ಶಿಕ್ಷೆ ಅನುಭವಿಸ ಬೇಕಾಗುತ್ತದೆ. ಪಾಂಡವ ಪುರ ತಾಲೂಕಿನಲ್ಲಿ ಇತ್ತೀಚೆಗೆ ಮೂರು ಪ್ರಕರಣಗಳು ದಾಖಲಾಗಿದೆ. ಬಾಲ ಕಾರ್ಮಿಕರಿಗೆ ಶಾಲೆಗೆ ಪುನರ್ ಪ್ರವೇಶವಕಾಶ ಕಲ್ಪಿಸಲಾಗಿದೆ~ ಎಂದರು.

ವಕೀಲರ ಸಂಘದ ಅಧ್ಯಕ್ಷ ಸಿ.ಎಂ.ಚನ್ನೇಗೌಡ ಅಧ್ಯಕ್ಷತೆ ವಹಿಸಿ ದ್ದರು. ಕಾರ್ಯದರ್ಶಿ ಎಸ್.ಭಾಸ್ಕರ್, ಬಿಸಿಎಂ ಇಲಾಖೆಯ ತನಿಖಾಧಿಕಾರಿ ಪ್ರಭಾಕರ್ ಎಸ್.ಕೊಪ್ಪದ್, ವಕೀಲ ರಾದ ಕೃಷ್ಣ ಮೂರ್ತಿ, ಕೆ.ಎಸ್.ಮನು, ಕಾಳೇಗೌಡ ಇತರರು ಇದ್ದರು.

`ಶಿಕ್ಷಾರ್ಹ ಅಪರಾಧ~
ಶ್ರೀರಂಗಪಟ್ಟಣ:
ಕಾನೂನು ಪ್ರಕಾರ ಬಾಲ ಕಾರ್ಮಿಕ ಪದ್ಧತಿ ಶಿಕ್ಷಾರ್ಹ ಅಪರಾಧ ಎಂದು ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಚಂದಗಿರಿಕೊಪ್ಪಲು ಮೂರ್ತಿ ಹೇಳಿದರು.

 ತಾಲ್ಲೂಕಿನ ಅಚ್ಚಪ್ಪನಕೊಪ್ಪಲು ಗ್ರಾಮದಲ್ಲಿ ಶಿಕ್ಷಣ ಇಲಾಖೆ ಭಾನುವಾರ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`14 ವರ್ಷ ಒಳಗಿನ ಮಕ್ಕಳನ್ನು ದುಡಿಮೆಗೆ ದೂಡುವುದು ಈಗಲೂ ನಡೆಯುತ್ತಿದೆ. ಬಡತನ, ಅನಕ್ಷರತೆಯ ಕಾರಣ ಪೋಷಕರು ಮಕ್ಕಳನ್ನು ಇಂತಹ ಕೆಲಸಕ್ಕೆ ಹಚ್ಚುತ್ತಿದ್ದಾರೆ.

ಇದರಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗು ತ್ತಿದ್ದಾರೆ. ಸಂವಿಧಾನದ ರಾಜನೀತಿ ನಿರ್ದೇಶಕ ತತ್ವಗಳಲ್ಲಿ ಬಾಲಕಾರ್ಮಿಕ ಪದ್ಧತಿಗೆ ಅವಕಾಶ ನೀಡಬಾರದು ಎಂಬ ಸಲಹೆ ಸ್ಪಷ್ಟವಾಗಿದೆ. ಪೋಷಕರು ತಮ್ಮ ಮಕ್ಕಳ ಬಾಲ್ಯವನ್ನು ಚಿವುಟಬಾರದು. ಶಿಕ್ಷಕ ವರ್ಗ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರಬೇಕು~ ಎಂದು ಸಲಹೆ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಭವಿಷ್ಯದ ಪ್ರಜೆಗಳಾದ ಮಕ್ಕಳ ಕೈಗೆ ಗುದ್ದಲಿ, ಸ್ಪ್ಯಾನರ್ ಕೊಡುವುದನ್ನು ವಿರೋಧಿಸ ಬೇಕು. ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು. ಕಡ್ಡಾಯ ಶಿಕ್ಷಣ ಜಾರಿಗೆ ಎಲ್ಲರೂ ಸಹಕರಿಸಬೇಕು ಎಂದು ಕೋರಿದರು. ದೈಹಿಕ ಶಿಕ್ಷಣ ಪರಿವೀಕ್ಷಕ ವೀರೇಶ್ ಲಿಂಬಿಕಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ದಲಿಂಗು ಮಾತನಾಡಿದರು.

ಬಾಲ ಕಾರ್ಮಿಕ ಪದ್ಧತಿ ಕುರಿತು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದ ಕಿರು ನಾಟಕ ಗಮನ ಸೆಳೆಯಿತು. ಇದಕ್ಕೂ ಮುನ್ನ ಗ್ರಾಮದ ಮುಖ್ಯ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಯಿತು. ಎಸ್‌ಡಿಎಂಸಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ದೇವರಾಜಮ್ಮ, ಪಟೇಲ್ ಬೋರೇಗೌಡ, ಮುಖ್ಯ ಶಿಕ್ಷಕಿ ಕೆ.ವಸಂತ, ಮೀನಾ ತಂಡದ ಮುಖ್ಯಸ್ಥೆ ಗೀತಾ ಎಂ.ಹೆಗಡೆ, ಸಿ.ಚಂದ್ರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT