ಯಲಬುರ್ಗಾ: ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿ ಈಚೆಗೆ ಮಕ್ಕಳ ರಕ್ಷಣಾ ಯೋಜನೆ ಯುನಿಸೆಫ್ ವತಿಯಿಂದ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಚಾರಣೆ ಪ್ರಯುಕ್ತ ಜನಜಾಗೃತಿ ಜಾಥಾ ಹಾಗೂ ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಗ್ರಾಮದ ಪ್ರಾಥಮಿಕ ಶಾಲಾ ಮಕ್ಕಳು ಗ್ರಾಮದ ವಿವಿಧ ಬೀದಿಗಳಲ್ಲಿ ಸಂಚರಿಸಿ ಬಾಲಕಾರ್ಮಿಕ ಪದ್ಧತಿ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಜಾಗೃತಿ ಮೂಡಿಸಿದರು.
ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲ್ಲಪ್ಪ ತೊಂಡಿಹಾಳ, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರಾದ ಎಸ್.ಆರ್. ಬಡಿಗೇರ ಮಾತನಾಡಿ, ಬಾಲ್ಯವನ್ನು ಲೆಕ್ಕಿಸದೇ ಮಕ್ಕಳನ್ನು ಕೆಲಸಕ್ಕೆ ಬಳಸಿಕೊಳ್ಳುವುದು ಹಾಗೂ ಪ್ರೇರೇಪಿಸುವುದು ಕೂಡಾ ಅಪರಾಧ ಕೃತ್ಯಗಳೇ, ಅನಾವಶ್ಯಕವಾದಂತಹ ಕಾರಣಗಳನ್ನು ಹೇಳಿ ಶಾಲೆಯಿಂದ ಹೊರಗುಳಿಯುವಂತೆ ಮಾಡುವ ಪಾಲಕರ ಮನಪರಿವರ್ತನೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪ್ರೇರೇಪಿಸುವ ಕೆಲಸ ಪ್ರತಿಯೊಬ್ಬ ನಾಗರಿಕ ಮಾಡಬೇಕಾಗಿದೆ.
ಬಾಲಕಾರ್ಮಿಕ ಪದ್ದತಿಯನ್ನು ಜಾರಿಗೆ ತರುವ ವ್ಯಕ್ತಿಗಳಿಗೆ ಕಾನೂನಿನ ಅಡಿಯಲ್ಲಿ ಭಾರಿ ಪ್ರಮಾಣದ ದಂಡ ಹಾಗೂ ಶಿಕ್ಷೆ ವಿಧಿಸಲು ಅವಕಾಶವಿದೆ ಎಂದು ಅಭಿಪ್ರಾಯಪಟ್ಟರು.
ವೀರಯ್ಯ ಸಂಗನಾಳಮಠ, ಅಮರೇಶ ಶೆಟ್ಟರ್, ಪ್ರಭಯ್ಯ ಸೊಪ್ಪಿಮಠ, ಗವಿಸಿದ್ಧಯ್ಯ ಪಟ್ಟೇದ, ಚಂದ್ರಪ್ಪ ಆರ್., ಮುಖ್ಯೋಪಾಧ್ಯಾಯ ಶಿವಲಿಂಗಯ್ಯ, ಸಮುದಾಯ ಸಂಘಟಕ ಮಂಜುನಾಥ ಕುರಿ ಪಾಲ್ಗೊಂಡಿದ್ದರು. ಮಂಜು ಕುದರಿಮನಿ ನಿರೂಪಿಸಿದರು.