ಬಂಗಾರಪೇಟೆ-: ದೇಶದಲ್ಲಿ ಕೋಟ್ಯಂತರ ಮಕ್ಕಳು ಬಾಲಕಾರ್ಮಿಕರಾಗಿ ದುಡಿಯುತ್ತಿದ್ದು, ಕಾನೂನು ಬಿಗಿಗೊಳಿಸಿದ್ದರೂ ಬಾಲಕಾರ್ಮಿಕ ಪದ್ಧತಿ ಜೀವಂತವಾಗಿರುವುದು ಪೋಷಕರಿಂದಲೇ ಎಂದು ಕೆಜಿಎಫ್ ಜೆಎಂಎಫ್ಸಿ ನ್ಯಾಯಾಧೀಶ ಕೆ.ಎಂ.ಬಸವರಾಜಪ್ಪ ಹೇಳಿದರು.
ಪಟ್ಟಣದಲ್ಲಿ ಕಾರ್ಮಿಕ ಇಲಾಖೆ. ವಕೀಲರ ಸಂಘ, ಕಾನೂನು ಸೇವಾ ಸಮಿತಿ ಹಾಗೂ ಜಾಗೃತಿ ಸಂಸ್ಥೆ ಸಹಯೋಗದೊಂದಿಗೆ ಮಂಗಳವಾರ ಏರ್ಪಡಿಸಿದ್ದ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಗತ್ತಿನಲ್ಲಿ ಕೆಟ್ಟ ತಾಯಂದಿರು ಇರುವುದಿಲ್ಲ, ಆದರೆ ಕೆಟ್ಟ ಮಕ್ಕಳು ಇರುತ್ತಾರೆ. ಆದ್ದರಿಂದ ತಾಯಂದಿರೇ ಮಕ್ಕಳನ್ನು ವಿದ್ಯಾಭ್ಯಾಸದ ಕಡೆ ಗಮನಹರಿಸುವಂತೆ ಮಾಡಬೇಕು, ದುಡಿಮೆಗೆ ದೂಡಬಾರದು ಎಂದರು.
ಪಟ್ಟಣದ ಜೆಎಂಎಫ್ಸಿ ನ್ಯಾಯಾಧೀಶರಾದ ಸಿ.ಜಿ.ವಿಶಾಲಕ್ಷಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಬಾಲಕಾರ್ಮಿಕ ಪದ್ದತಿ ಒಂದು ಶೋಷಣೆ. ಸಮಾಜದಲ್ಲಿ ಉತ್ತಮವಾಗಿ ಬದುಕುವ ಹಕ್ಕನ್ನೇ ಮಕ್ಕಳಿಂದ ಕಸಿದುಕೊಂಡು ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡುತ್ತಿರುವುದು ಸರಿಯಲ್ಲ. ಮಕ್ಕಳಿಗೆ ಹೇಗೆ ಬದುಕ-ಬೇಕೆನ್ನುವ ಪರಿಜ್ಞಾನ ಇರುವುದಿಲ್ಲ, ಅವರ ಮುಗ್ಧತೆಯನ್ನು ಬಂಡವಾಳ ಮಾಡಿಕೊಂಡು ದುಡಿಸಿಕೊಳ್ಳುವ ಯಾರೇ ಆಗಲಿ ಕಾನೂನು ದೃಷ್ಟಿಯಲ್ಲಿ ಅಪರಾಧ ಮಾಡಿದಂತೆ ಎಂದು ಎಚ್ಚರಿಸಿದರು.
ಕೆಜಿಎಫ್ ಸಿವಿಲ್ ನ್ಯಾಯಾಧೀಶ ನಂದೀಶ್, ಸಂವಿಧಾನದಲ್ಲಿ ಪ್ರತಿಯೊಬ್ಬ-ರಿಗೂ ಹಕ್ಕುಗಳನ್ನು ಕೊಟ್ಟಿದ್ದಾರೆ, ಅದೇ ರೀತಿ ಮಕ್ಕಳಿಗೂ 14 ವರ್ಷದೊಳಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು, ಜತೆಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಬೇಕು. ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ ದೂಡುತ್ತಿರುವುದು ಸರಿ ಅಲ್ಲ ಎಂದರು.
ಜಿಲ್ಲಾ ಕಾರ್ಮಿಕ ಇಲಾಖೆ ಅಧಿಕಾರಿ ರಾಜಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅದ್ಯಕ್ಷ ಶಿವರಾಮಸುಬ್ರಮಣ್ಯ, ಕಾರ್ಯದರ್ಶಿ ಎಸ್.ನಾರಾಯಣಪ್ಪ, ಖಜಾಂಚಿ ಎಸ್.ರಾಜಗೋಪಾಲ್, ಜಯಪ್ರಕಾಶ್, ಕಾರ್ಮಿಕ ಮುಖಂಡರಾದ ಮೇಸ್ತ್ರಿ ಶ್ರಿನಿವಾಸ್, ಕಾರ್ಮಿಕ ಇಲಾಖೆ ಅಧಿಕಾರಿ ಚೇತನ್ಪ್ರಕಾಶ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.