ಚಾಮರಾಜನಗರ: ಬಾಲಕಿ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಅಕ್ರಮ ಬಂಧನದಲ್ಲಿಟ್ಟು ಆತ್ಮಹತ್ಯೆಗೂ ಕಾರಣನಾದ ಯುವಕನಿಗೆ ಇಲ್ಲಿನ ಜಿಲ್ಲಾ ಸೆಷನ್ಸ್ ನ್ಯಾಯಾಲಯವು 22 ವರ್ಷ ಸಜೆ ಹಾಗೂ 53 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.
ಗುಂಡ್ಲುಪೇಟೆ ತಾಲ್ಲೂಕಿನ ನಿಟ್ರೆ ಗ್ರಾಮದ ರಾಘವೇಂದ್ರ (22) ಶಿಕ್ಷೆಗೊಳಗಾದವ. 2010ರ ಜ.21ರಂದು ತನ್ನ ಅಂಗಡಿಗೆ ದಿನಸಿ ಸಾಮಗ್ರಿ ಖರೀದಿಸಲು ಬಂದಿದ್ದ ಅದೇ ಗ್ರಾಮದ ಬಾಲಕಿ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದ. ನಂತರ ಆಕೆಯನ್ನು ಅಂಗಡಿಯಲ್ಲಿಯೇ ಅಕ್ರಮವಾಗಿ ಬಂಧನದಲ್ಲಿಟ್ಟಿದ್ದ ಆರೋಪ ಆತನ ಮೇಲಿತ್ತು.
ಈ ಘಟನೆಯಿಂದ ಮನನೊಂದ ಬಾಲಕಿ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಈ ಸಂಬಂಧ ಗುಂಡ್ಲುಪೇಟೆ ಠಾಣೆಯ ವೃತ್ತ ನಿರೀಕ್ಷಕ ಟಿ.ಅಶೋಕ್ಕುಮಾರ್ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಮಾಸ್ಟರ್ ಆರ್.ಕೆ.ಜಿ.ಎಂ.ಎಂ. ಮಹಾ ಸ್ವಾಮೀಜಿ ಶಿಕ್ಷೆ ವಿಧಿಸಿದ್ದಾರೆ.
ಅಕ್ರಮ ಬಂಧನ ಸಂಬಂಧ 1 ವರ್ಷ ಸಜೆ ಹಾಗೂ 1 ಸಾವಿರ ರೂ ದಂಡ, ಬೆದರಿಕೆಗೆ 3 ವರ್ಷ ಸಜೆ ಮತ್ತು ರೂ.2 ಸಾವಿರ ದಂಡ, ಅತ್ಯಾಚಾರ ಎಸಗಿದ್ದಕ್ಕೆ 9 ವರ್ಷ ಸಜೆ ಹಾಗೂ ರೂ.25 ಸಾವಿರ ದಂಡ, ಆಕೆಯ ಆತ್ಮಹತ್ಯೆಗೆ ಕಾರಣನಾಗಿದ್ದಕ್ಕೆ 9 ವರ್ಷ ಶಿಕ್ಷೆ ಹಾಗೂ ರೂ.25 ಸಾವಿರ ದಂಡವಿಧಿಸಿ ಗುರುವಾರ ತೀರ್ಪು ನೀಡಿದ್ದಾರೆ. ದಂಡದ ಹಣದಲ್ಲಿ 40 ಸಾವಿರ ರೂಪಾಯಿಯನ್ನು ಬಾಲಕಿಯ ಕುಟುಂಬಕ್ಕೆ ನೀಡಲು ಆದೇಶಿಸಿದ್ದಾರೆ.