ಕುಡಚಿ (ರಾಯಬಾಗ): ಕುಡಚಿ ಪೊಲೀಸ್ ಠಾಣೆಯ ವ್ಯಾಪ್ತಿಯ ಸುಟ್ಟಟ್ಟಿ ಗ್ರಾಮದ ಕುರುಬ ಸಮಾಜದ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಅದೇ ಗ್ರಾಮದವನೊಬ್ಬ ಮದುವೆ ಆಗುವುದಾಗಿ ಪುಸಲಾಯಿಸಿ, ಅಪಹರಿಸಿದ ಹಿನ್ನೆಲೆಯಲ್ಲಿ 2 ದಿನಗಳಾದರೂ ಕುಡಚಿ ಪೊಲೀಸರು ಆರೋಪಿಯನ್ನು ಬಂಧಿಸದೇ ಇರುವುದಕ್ಕೆ ಮಂಗಳವಾರ ತಾಲ್ಲೂಕಿನ ಕುರುಬ ಸಮಾಜದವರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಹಿನ್ನೆಲೆ: ಸುಟ್ಟಟ್ಟಿ ಗ್ರಾಮದ ಕುರುಬ ಸಮಾಜದ ಅಪ್ರಾಪ್ತ ಬಾಲಕಿಯರಾದ ಗೀತಾ ಲಕ್ಷ್ಮ ಣ ಪಾಟೀಲ ಹಾಗೂ ಪ್ರಿಯಂಕಾ ಲಕ್ಷ್ಮಣ ಪಾಟೀಲ ಚಿಂಚಲಿಯ ಮಹಾಕಾಳಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದು ಶನಿವಾರ ಕಾಲೇಜಿಗೆ ಹೋದವರು ವಾಪಸ್ ಮನೆಗೆ ಬಾರದೆ ಇದ್ದಾಗ ಸಂಶಯಗೊಂಡ ಪಾಲಕರು ಹುಡುಕಾಡತೊಡಗಿದರು.
ಅದೇ ಗ್ರಾಮದ ಮಲ್ಲೇಶ ಹಾಲಪ್ಪ ಭಜಂತ್ರಿ ಶನಿವಾರ ಮಧ್ಯಾಹ್ನ ಚಿಂಚಲಿಯ ಕೀಲಕಟ್ಟಿ ಹತ್ತಿರ ಗೀತಾ ಮತ್ತು ಪ್ರಿಯಾಂಕಳನ್ನು ಮದುವೆ ಮಾಡಿಕೊಳ್ಳುವುದಾಗಿ ಪುಸಲಾಯಿಸುತ್ತಿದ್ದದನ್ನು ಕಂಡ ಗ್ರಾಮದ ಯಲ್ಲಪ್ಪ ಬಾನೆ ಹಾಗೂ ಸುಭಾಷ ಖೋತ ಅವರು ಸಂಜೆ ಬಾಲಕಿಯರನ್ನು ಹುಡುಕಾಡುತ್ತಿದ್ದ ಪಾಲಕರಿಗೆ ತಿಳಿಸಿದರು.
ಬಾಲಕಿಯರ ಸೋದರ ಅಪ್ಪಾಜಿ ಲಕ್ಷ್ಮಣ ಪಾಟೀಲ ಕುಡಚಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದರು.
ಆರೋಪಿಯನ್ನು ಬಂಧಿಸುವವರೆಗೆ ಠಾಣೆ ಬಿಟ್ಟು ತೊಲಗುವುದಿಲ್ಲ ಎಂದು ಮಂಗಳವಾರ ಪಟ್ಟು ಹಿಡಿದು ಕುಳಿತ ಪ್ರತಿಭಟನಾಕಾರರನ್ನು ಪಿ.ಎಸ್.ಐ. ದಿಲೀಪ ನಿಂಬಾಳಕರ ಮನವೊಲಿಸಿ ಶೀಘ್ರದಲ್ಲೇ ಆರೋಪಿಯನ್ನು ಬಂಧಿಸುವುದಲ್ಲದೆ ಬಾಲಕಿಯರನ್ನು ಸಹ ಪತ್ತೆ ಮಾಡಿಕೊಡುವ ಭರವಸೆ ನೀಡಿದರು. ನಂತರ ಪ್ರತಿಭಟನೆಯನ್ನು ಹಿಂದಕ್ಕೆ ಪಡೆಯಲಾಯಿತು.
ಕುರುಬ ಸಮಾಜದ ಅಧ್ಯಕ್ಷ ಹಾಲಪ್ಪ ಘಾಳಿ, ತಾ.ಪಂ. ಮಾಜಿ ಉಪಾಧ್ಯಕ್ಷ ಮುರಾ ರಿ ಬಾನೆ, ಸದಾಶಿವ ದೇಶಿಂಗೆ, ಸದಾಶಿವ ದಳವಾಯಿ, ರಾಜು ಬನಗೆ, ಶಿವಾನಂದ ಹೆಗಡೆ, ಅನಿಲ ಒಡೆಯರ, ಅಪ್ಪಾಸಾಬ ಕಲ್ಲೊಳ, ಬೀರಪ್ಪ ಕರಗಾವಿ, ಶಂಕರ ಗಡಕರಿ, ಪುಂಡಲೀಕ ಹಸರೆ, ವಿಠ್ಠಲ ಗೊಂಗಡೆ, ಶ್ರೀಶೈಲ ಕರಿಗಾರ, ಸುಭಾಷ ಖೋತ, ಲಕ್ಷ್ಮಣ ಖೋತ, ಗುರುನಾಥ ಖೋತ, ರಾಜು ಅರಬಾವಿ, ನಾರಾಯಣ ಕ್ಷೀರಸಾಗರ, ದೇವಪ್ಪ ಯಲ್ಲಟ್ಟಿ, ಸುರೇಶ ಪೂಜಾರಿ ಸೇರಿದಂತೆ ತಾಲ್ಲೂಕಿನ ಹಾರೂಗೇರಿ, ಹಿಡಕಲ್, ಮುಗಳಖೋಡ, ಶಿರಗೂರ, ಅಲಖನೂರ, ಸುಟ್ಟಟ್ಟಿ, ಕುಡಚಿ ಮತ್ತು ಪರಮಾನಂದ ವಾಡಿ, ರಾಯಬಾಗ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.