ಚಿಂಚೋಳಿ: ಮತದಾನದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿ, ಮತದಾನದ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರು ಪಾಲ್ಗೊಂಡು ಕಡ್ಡಾಯ ಮತದಾನ ಮಾಡುವಂತೆ ಮನವೊಲಿಸಲು ಇಲ್ಲಿನ ಸರ್ಕಾರಿ ಕನ್ಯಾ ಪ್ರೌಢ ಶಾಲೆಯ ಬಾಲಕಿಯರು ಈಚೆಗೆ ಜಾಥಾ ನಡೆಸಿದರು.
ಜಾಥಾದಲ್ಲಿ ಕ್ಷೇತ್ರ ಸಮನ್ವಯ ಕೇಂದ್ರದ ಸಮನ್ವಯಾಧಿಕಾರಿ ವೀರಣ್ಣ ಬೊಮ್ಮನಳ್ಳಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹಮದ್ ರಫಿ ಶಕಾಲೆ, ದೈಹಿಕ ಶಿಕ್ಷಕ ಎಸ್.ಎ.ಮುನಾಫ್, ರೇವಣಸಿದ್ದಪ್ಪ ದಂಡಿನ್ ಇದ್ದರು.
ನಂತರ ಶಾಲೆ ಆವರಣದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ತಹಶೀಲ್ದಾರ್ ಮೋಹನ ಜೋಷಿ ಮಾತನಾಡಿ, ‘ಮತದಾನ ಒಂದು ಪವಿತ್ರ ಕಾರ್ಯ. ಪ್ರತಿಯೊಬ್ಬರೂ ಕಡ್ಡಾಯವಾಗಿ ತಮ್ಮ ಹಕ್ಕು ಚಲಾಯಿಸಿ ಪ್ರಜಾಪ್ರಭುತ್ವ ಬಲ ಪಡಿಸಲು ನೆರವಾಗಬೇಕು’ ಎಂದರು.
ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳ ಮಹತ್ವ ಕುರಿತ ಪ್ರಬಂಧ ಸ್ಪರ್ಧೆ ನಡೆಯಿತು. ಅಶೋಕ, ಮಂಜುಳಾ, ಸರ್ವರ್ ಮಹಾಜಬಿನ್, ವಿಜಯಲಕ್ಷ್ಮಿ, ಸುನೀತಾ ಪಾಲ್ಗೊಂಡಿದ್ದರು. ಮುಖ್ಯಗುರು ನರಸಿಂಗರಾವ್ ಸಿಂಧೆ ಅಧ್ಯಕ್ಷತೆ ವಹಿಸಿದ್ದರು. ನಂದಕುಮಾರ ನಾಯನೂರು ಸ್ವಾಗತಿಸಿ ನಿರೂಪಿಸಿದರು. ಎಸ್.ಎ.ಮುನಾಫ್ ವಂದಿಸಿದರು.