ಯಳಂದೂರು: `ಗ್ರಾಮೀಣ ಪ್ರದೇಶಗಳಲ್ಲಿ ಸ್ತ್ರೀ ಶಕ್ತಿ ಮಹಿಳಾ ಸಂಘಗಳು ಸಮರ್ಥವಾಗಿ ಕೆಲಸ ನಿರ್ವಹಿಸುತ್ತಿವೆ. ಆದರೆ, ಬಾಲ್ಯ ವಿವಾಹದಂತಹ ಸಾಮಾಜಿ ಪಿಡುಗಿನ ವಿರುದ್ಧ ಧ್ವನಿ ಎತ್ತದಿರುವುದು ದುಖಃದ ವಿಚಾರವಾಗಿದೆ. ಈ ದಿಸೆಯಲ್ಲಿ ಸ್ವಸಹಾಯ ಸಂಘಗಳು ಕಾರ್ಯೋನ್ಮುಖರಾಗಬೇಕಾದ ಅನಿವಾರ್ಯತೆ ಇದೆ~ಎಂದು ಜಿ.ಪಂ. ಸದಸ್ಯೆ ಕೇತಮ್ಮ ತಿಳಿಸಿದರು.
ಪಟ್ಟಣದ ಸಿಡಿಎಸ್ ಸಮುದಾಯ ಭವನದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಾಂತ್ವನ ಸಹಾಯವಾಣಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ `ಬಾಲ್ಯ ವಿವಾಹ ತಡೆ ಕಾನೂನು ಜಾಗೃತಿ ಕಾರ್ಯಕ್ರಮ~ ಉದ್ಘಾಟಿಸಿ ಮಾತನಾಡಿದರು.
ಬಾಲ್ಯ ವಿವಾಹದಿಂದ ಆಗುವ ಅನಾನುಕೂಕತೆಗಳ ಬಗ್ಗೆ ಕುಟುಂಬಗಳೊಂದಿಗೆ ಚರ್ಚಿಸಿ ಮನವರಿಕೆ ಮಾಡಿ ಇಂತಹ ಪದ್ಧತಿಯನ್ನು ನಿರ್ಮೂಲನೆ ಮಾಡಬೇಕೆಂದು ಕರೆ ನೀಡಿದರು.
ವಕೀಲ ಬಸವಟ್ಟಿ ಮಹದೇವಸ್ವಾಮಿ ಮಾತನಾಡಿ `ಗ್ರಾಮೀಣರಲ್ಲಿ ಸಾಕ್ಷರತೆ ಪ್ರಮಾಣ ಕಡಿಮೆ ಇದೆ. ಮೂಢ ನಂಬಿಕೆಗಳಿಗೆ ಜೋತು ಬಿದ್ದಿರುವ ಕೆಲವು ಸಮುದಾಯಗಳ ಜನರೂ ಇನ್ನೂ ಕೂಡ ಬಾಲ್ಯ ವಿವಾಹದಂತಹ ಅನಿಷ್ಟ ಪದ್ಧತಿಯನ್ನು ಅಳವಡಿಸಿಕೊಂಡು ಬರುತ್ತಿರುವುದು ಶೋಚನೀಯ ವಿಷಯವಾಗಿದೆ ಎಂದರು.
ಪ.ಪಂ. ಅಧ್ಯಕ್ಷೆ ಮೀನಾಕ್ಷಿ ಮಹದೇವಸ್ವಾಮಿ, ಉಪಾಧ್ಯಕ್ಷೆ ಚಿನ್ನಮ್ಮ ಮರಯ್ಯ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಧಿಕಾರಿ ಡಾ.ದಿವಾಕರ್, ಗ್ರೀನ್ ಸಂಸ್ಥೆಯ ಮಹದೇವಸ್ವಾಮಿ, ಸಿಡಿಪಿಒ ಜಯರಾಂ, ಮಹಿಳಾ ಸಾಮಾಖ್ಯದ ಮುಖ್ಯಸ್ಥೆ ಸುಲೋಚನಾ ಶೋಭಾ, ಕವಿತ, ಶಿವಮ್ಮ, ದೊಡ್ಡಯ್ಯ ಮಹಿಳಾ ಸಂಘಗಳ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.