ಬೆಳಗಾವಿ: ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಳಾಸಾಹೇಬ ಕಂಗ್ರಾಳಕರ ಅವರು ಸೋಮವಾರ ಮಧ್ಯಾಹ್ನ 3.30ರ ಸಮೀಪ ಹೃದಯಾಘಾತದಿಂದ ನಿಧನ ಹೊಂದಿದ್ದು, ನಗರದ ಹಲವು ಗಣ್ಯರು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.
`ಬಾಳಾಸಾಹೇಬ ಕಂಗ್ರಾಳಕರರು ಸರಳ ಸಜ್ಜನಿಕೆಗೆ ಹೆಸರಾಗಿದ್ದ ವ್ಯಕ್ತಿಯಾಗಿದ್ದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಭಾರತೀಯ ಜನತಾ ಪಕ್ಷ ಹಾಗೂ ಮತ್ತಿತರ ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯವಾಗಿ ತೊಡಗಿಕೊಂಡು ಜನಪರ ಕೆಲಸ ನಡೆಸಿದ್ದರು~ ಎಂದು ಸಂಸದ ಸುರೇಶ ಅಂಗಡಿ ಅವರು ಸಂತಾಪ ಸೂಚಿಸಿದ್ದಾರೆ.
ಬಾಳಾಸಾಹೇಬರ ನಿಧನದಿಂದ ಬಿಜೆಪಿಗೆ ತುಂಬಲಾರದ ಹಾನಿಯಾಗಿದೆ. ಅವರ ಆತ್ಮಕ್ಕೆ ಭಗವಂತನು ಶಾಂತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
ಬಿಜೆಪಿ ಸಂತಾಪ: ಬುಡಾ ಅಧ್ಯಕ್ಷರಾದ ಬಾಳಾಸಾಹೇಬ ಕಂಗ್ರಾಳಕರ ಅವರ ನಿಧನಕ್ಕೆ ಭಾರತೀಯ ಜನತಾ ಪಕ್ಷದ ಮಹಾನಗರ ಜಿಲ್ಲಾ ಘಟಕವು ತೀವ್ರ ಸಂತಾಪ ಸೂಚಿಸಿದೆ.
`ಬಾಳಾಸಾಹೇಬರು ಬುಡಾ ಅಧ್ಯಕ್ಷರಾಗಿ ಹಾಗೂ ವಿವಿಧ ಸಂಘ- ಸಂಸ್ಥೆಗಳಲ್ಲಿ ಸೇವೆ ಕೈಗೊಂಡಿರುವುದು ಸ್ಮರಣೀಯ~ ಎಂದು ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಝಿರಲಿ ಸಂತಾಪ ಸೂಚಿಸಿದ್ದಾರೆ.
ಬೆಳಗಾವಿ ಅರ್ಬನ್ ಕೋಆಪರೇಟಿವ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷರಾಗಿಯೂ ಅವರು ಸೇವೆ ಸಲ್ಲಿಸಿರುವ ಬಾಳಾಸಾಹೇಬ ಅವರು, ನಗರದ ಹಲವು ಸಂಘ-ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಬಾಳಾಸಾಹೇಬರ ಅಂತ್ಯಕ್ರಿಯೆಯು ನಗರದ ಶಹಾಪುರದ ರುದ್ರಭೂಮಿಯಲ್ಲಿ ಮಂಗಳವಾರ ಬೆಳಿಗ್ಗೆ 10 ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.