ಪ್ರಾಣಿಗಳು ಮತ್ತು ಪಕ್ಷಿಗಳ ನಡುವೆ ಯುದ್ಧ ನಡೆಯುತ್ತಿತ್ತು. ಆದರೆ ಪಕ್ಷಿಯಂತೆ ರೆಕ್ಕೆಗಳನ್ನು ಹೊಂದಿರುವ, ಪ್ರಾಣಿಯಂತೆ ಜೀವನ ಮಾಡುವ ಬಾವಲಿಗಳು ತಾವು ಯಾವ ಕಡೆ ಸೇರಬೇಕೆಂದು ತಿಳಿಯದೇ ಗೊಂದಲದಲ್ಲಿದ್ದವು.
ಅಂತಿಮವಾಗಿ ಅವು ಯಾರು ಗೆಲ್ಲುತ್ತಾರೆಯೋ ಅವರ ಕಡೆ ಸೇರಬೇಕೆಂದು ನಿರ್ಧರಿಸಿದವು. ತಕ್ಷಣ ಯುದ್ಧ ನಡೆಯುವಾಗ ಯಾರ ಬೆಂಬಲಕ್ಕೆ ನಿಲ್ಲಬೇಕೆಂಬ ಪ್ರಶ್ನೆ ಕಾಡಿತು. ಆಗ ಅವು ಯಾರು ಗೆಲ್ಲುತ್ತಿರುತ್ತಾರೊ ಅವರ ಕಡೆ ಸೇರಿದರಾಯಿತು ಎಂದುಕೊಂಡವು.
ಯುದ್ಧದಲ್ಲಿ ಪಕ್ಷಿಗಳು ಮೇಲುಗೈ ಸಾಧಿಸುವಾಗ ಬಾವಲಿಗಳು ಅವುಗಳ ಜೊತೆ ಹೋದವು. ಪ್ರಾಣಿಗಳು ಮೇಲುಗೈ ಸಾಧಿಸುವಾಗ ಅವುಗಳ ಹಿಂದೆ ನಿಂತವು.
ಇದನ್ನು ಎರಡೂ ಗುಂಪಿನ ನಾಯಕರೂ ಗಮನಿಸಿದವು. ಯುದ್ಧ ಮುಗಿದಾಗ ಬಾವಲಿಗಳನ್ನು ಎರಡೂ ಗುಂಪಿನವರೂ ತಿರಸ್ಕರಿಸಿದರು. ಆಗ ಬಾವಲಿ ತನ್ನ ಸಮಯಸಾಧಕತನ ನಿರ್ಧಾರದಿಂದ ಒಂಟಿಯಾಯಿತು.