ನವದೆಹಲಿ (ಪಿಟಿಐ): ಬಾಸ್ಟನ್ನಲ್ಲಿ ನಡೆದ ಬಾಂಬ್ ದಾಳಿ ಖಂಡಿಸಿರುವ ಪ್ರಧಾನಿ ಮನಮೋಹನ್ ಸಿಂಗ್, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರಿಗೆ ಪತ್ರ ಬರೆದು ದುರಂತದಲ್ಲಿ ಮಡಿದವರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ.
ಭಯೋತ್ಪಾದನೆಯಿಂದ ಎರಡೂ ರಾಷ್ಟ್ರಗಳು ಎದುರಿಸುತ್ತಿರುವ ಬೆದರಿಕೆಯನ್ನು ಈ ದಾಳಿ ಮತ್ತೆ ನೆನಪಿಸಿದೆ ಎಂದೂ ಪ್ರಧಾನಿ ಪತ್ರದಲ್ಲಿ ತಿಳಿಸಿದ್ದಾರೆ.
`ಬಾಸ್ಟನ್ನಲ್ಲಿ ಸೋಮವಾರ ನಡೆದ ಅವಳಿ ಸ್ಫೋಟ ನನಗೆ ಆಘಾತ ತಂದಿದೆ. ಪ್ರಾಮಾಣಿಕತೆ, ಜ್ಞಾನ, ಹೊಸತನ ಹಾಗೂ ದಿಟ್ಟತನದ ಸಂಕೇತವಾಗಿರುವ ನಗರದಲ್ಲಿ ಇಂತಹ ಸಂವೇದನಾರಹಿತ ಹಾಗೂ ಹೇಡಿತನದಿಂದ ಕೂಡಿರುವ ಹೇಯ ಕೃತ್ಯ ನಡೆದಿರುವುದು ಬೇಸರವನ್ನುಂಟು ಮಾಡಿದೆ' ಎಂದು ಸಿಂಗ್ ಪತ್ರದಲ್ಲಿ ಬರೆದಿದ್ದಾರೆ.
`ಈ ದಾಳಿಯನ್ನು ಖಂಡಿಸುವಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ನನ್ನೊಂದಿಗೆ ಭಾಗಿಯಾಗಿದ್ದಾರೆ' ಎಂದೂ ಪ್ರಧಾನಿ ಪತ್ರದಲ್ಲಿ ಹೇಳಿದ್ದಾರೆ.`ನಮ್ಮ ರಾಷ್ಟ್ರಗಳು ಮತ್ತು ನಗರಗಳಿಗೆ ಈಗಲೂ ಬೆದರಿಕೆ ಒಡ್ಡುತ್ತಿರುವ ಭಯೋತ್ಪಾದನೆ ಎಂಬ ಭೂತವನ್ನು ಈ ದಾಳಿ ಮತ್ತೆ ನೆನೆಪಿಸಿದೆ' ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ. ಈ ಪ್ರಕರಣದ ತನಿಖೆಯಲ್ಲಿ ಭಾರತವು ಅಮೆರಿಕಕ್ಕೆ ಎಲ್ಲಾ ರೀತಿಯ ಬೆಂಬಲವನ್ನೂ ನೀಡಲಿದೆ ಎಂದು ಸಿಂಗ್ ಹೇಳಿದ್ದಾರೆ.