ಬೆಂಗಳೂರು: ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಮಹೇಂದ್ರ (16) ಎಂಬ ಬಾಲಕ ಮೃತಪಟ್ಟಿರುವ ಘಟನೆ ನಗರದ ಕ್ವೀನ್ಸ್ ರಸ್ತೆಯಲ್ಲಿ ಸೋಮವಾರ ರಾತ್ರಿ ನಡೆದಿದೆ.
ಕ್ವೀನ್ಸ್ ರಸ್ತೆ ಸಮೀಪದ ರಾಜೀವ್ ಗಾಂಧಿ ಕಾಲೊನಿ ನಿವಾಸಿ ಮಹೇಂದ್ರ, ಬಿಬಿಎಂಪಿ ಗುತ್ತಿಗೆ ಕಾಮಗಾರಿಯೊಂದರ ದಿನಗೂಲಿ ಕಾರ್ಮಿಕನಾಗಿದ್ದ. ರಾತ್ರಿ 10 ಗಂಟೆ ಸುಮಾರಿಗೆ ಕೆಪಿಸಿಸಿ ಕಚೇರಿ ಸಮೀಪ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಾಯಗೊಂಡಿದ್ದ ಆತನನ್ನು ಕೂಡಲೇ ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಮಾರ್ಗ ಮಧ್ಯೆ ಆತ ಮೃತಪಟ್ಟ. ಘಟನೆ ನಂತರ ಚಾಲಕ ಬಸ್ ನಿಲ್ಲಿಸದೆ ಮುಂದೆ ಹೋಗಿದ್ದಾನೆ. ಕ್ವೀನ್ಸ್ ರಸ್ತೆಯಲ್ಲಿರುವ ಎಲ್ಲ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಸಿ.ಸಿ ಟಿ.ವಿಯಲ್ಲಿ ದಾಖಲಾಗಿರುವ ದೃಶ್ಯಗಳ ನೆರವಿನಿಂದ ಬಸ್ ಚಾಲಕನನ್ನು ಪತ್ತೆ ಹಚ್ಚಲಾಗುವುದು ಎಂದು ಶಿವಾಜಿನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.