ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಚ್‌ಇಎಲ್ ಉದ್ಯೋಗಿ ಆತ್ಮಹತ್ಯೆ

Last Updated 16 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಮಲ್ಲೇಶ್ವರ ಮತ್ತು ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ 2 ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿಎಚ್‌ಇಎಲ್ ಉದ್ಯೋಗಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಲ್ಲೇಶ್ವರದಲ್ಲಿ ನಡೆದಿದೆ.

ಮಲ್ಲೇಶ್ವರದ ಕಾಶಿ ಮಠ ರಸ್ತೆಯಬಿಎಚ್‌ಇಎಲ್ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದ ಶ್ರೀನಿವಾಸ್ (47) ಆತ್ಮಹತ್ಯೆ ಮಾಡಿಕೊಂಡವರು. ಪತ್ನಿ ಮತ್ತು ಮಕ್ಕಳು ರಾತ್ರಿ ನಿದ್ರೆ ಮಾಡುತ್ತಿದ್ದ ಸಂದರ್ಭದಲ್ಲಿ ಅವರು ಕೋಣೆಯೊಂದರಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

`ನನ್ನ ಸಾವಿಗೆ ಯಾರು ಕಾರಣರಲ್ಲ~ ಎಂದು ಶ್ರೀನಿವಾಸ್ ಪತ್ರ ಬರೆದಿಟ್ಟಿದ್ದಾರೆ. ಮಲ್ಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣ: ಬನಶಂಕರಿ ಸಮೀಪದ ಕಾವೇರಿನಗರ 5ನೇ ಅಡ್ಡರಸ್ತೆ ನಿವಾಸಿ ಬಸವರಾಜು (30) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾರಾ ಅವರನ್ನು ವಿವಾಹವಾಗಿದ್ದ ಅವರು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ತಾರಾ ಅವರು ಮಕ್ಕಳೊಂದಿಗೆ ಕೋಣನಕುಂಟೆಯಲ್ಲಿರುವ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಬಸವರಾಜು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ.  ಬನಶಂಕರಿ ಠಾಣೆಯಲ್ಲಿ ದೂರು ದಾಖಲಾಗಿದೆ.

ಅಗ್ನಿ ಅನಾಹುತ:     ಮಹಿಳೆ ಸಾವು

ಸೀಮೆಎಣ್ಣೆ ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದ ಮಹಿಳೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಸಾವನ್ನಪ್ಪಿರುವ ಘಟನೆ ಬನಶಂಕರಿ ಸಮೀಪದ ಅಂಬೇಡ್ಕರ್‌ನಗರದಲ್ಲಿ ನಡೆದಿದೆ.

ಅಂಬೇಡ್ಕರ್‌ನಗರ 15ನೇ ಅಡ್ಡರಸ್ತೆ ನಿವಾಸಿ ಕಮಲಮ್ಮ (55) ಮೃತಪಟ್ಟವರು. ಅವರು ಬನಶಂಕರಿಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲಿ ಬುಧವಾರ ಮಧ್ಯಾಹ್ನ ಸೀಮೆಎಣ್ಣೆ ಸ್ಟೌನಲ್ಲಿ ಅಡುಗೆ ಮಾಡುತ್ತಿದ್ದಾಗ ಕಮಲಮ್ಮ ಆಯತಪ್ಪಿ ಸ್ಟೌ ಮೇಲೆ ಬಿದ್ದರು. ಆಗ ಬೆಂಕಿ ಹೊತ್ತಿಸುಟ್ಟ ತೀವ್ರ ಗಾಯಗಳಾದವು.

ನೆರೆಮನೆಯವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಗುರುವಾರ ಮಧಾಹ್ನ ಮೃತಪಟ್ಟರು ಎಂದು ಬನಶಂಕರಿ ಪೊಲೀಸರು ತಿಳಿಸಿದ್ದಾರೆ.

ಸರಗಳವು
ದುಷ್ಕರ್ಮಿಯೊಬ್ಬ ಶಿಕ್ಷಕಿಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಮೆಜೆಸ್ಟಿಕ್‌ನಲ್ಲಿ ಬುಧವಾರ ಸಂಜೆ ನಡೆದಿದೆ.

ದೇವನಹಳ್ಳಿ ಸಮೀಪದ ಹುಣಸೇಮಾರನಹಳ್ಳಿ ನಿವಾಸಿ ಗಂಗಾದೇವಿ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ.

ಸರದ ಮೌಲ್ಯ ಸುಮಾರು 1.50 ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಉಪ್ಪಾರಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.

ತನಿಖೆ ಚುರುಕು

ಮೂಡಲಪಾಳ್ಯ ಸಮೀಪದ ಅನ್ನಪೂರ್ಣೇಶ್ವರಿನಗರದಲ್ಲಿ ಬುಧವಾರ ನಡೆದಿದ್ದ ಸುವರ್ಣಮ್ಮ (31) ಅವರ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.

`ವಿಜಯನಗರ ಉಪ ವಿಭಾಗದ ಎಸಿಪಿ ಹಾಗೂ ನಾಲ್ಕು ಮಂದಿ ಇನ್‌ಸ್ಪೆಕ್ಟರ್‌ಗಳ ತಂಡ ಪ್ರಕರಣದ ತನಿಖೆ ನಡೆಸುತ್ತಿದೆ. ಸುವರ್ಣಮ್ಮ ಅವರ ಕುಟುಂಬ ಸದಸ್ಯರು, ಸಂಬಂಧಿಕರು ನೆರೆಮನೆಯವರ ವಿಚಾರಣೆ ನಡೆಸಿ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ~ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT