ಮಂಗಳೂರು: `ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದವರು. ಮಾತ್ರವಲ್ಲ, ಅವರೊಬ್ಬ ಸಾಮೂಹಿಕ ನಾಯಕನೂ ಹೌದು. ಆದರೆ ಲೋಕಾಯುಕ್ತ ವರದಿಯಲ್ಲಿ ಉಲ್ಲೇಖಿಸಲಾದ ಆರೋಪಗಳಿಂದ ಅವರು ಮುಕ್ತರಾಗುವವರೆಗೆ ಅವರಿಗೆ ಯಾವುದೇ ಜವಾಬ್ದಾರಿಯುತ ಸ್ಥಾನ ನೀಡದಿರಲು ಪಕ್ಷದ ವರಿಷ್ಠರು ನಿರ್ಧರಿಸಿದ್ದಾರೆ~ ಎಂದು ದೆಹಲಿಯಲ್ಲಿರುವ ರಾಜ್ಯದ ಪ್ರತಿನಿಧಿ ವಿ.ಧನಂಜಯ ಕುಮಾರ್ ಹೇಳಿದ್ದಾರೆ.
ಕರಾವಳಿ ವಾಣಿಜ್ಯೋದ್ಯಮ ಅಭಿವೃದ್ಧಿ ಶೃಂಗಸಭೆ ಸಮಾರೋಪದಲ್ಲಿ ಗುರುವಾರ ಭಾಗವಹಿಸಿದ ಬಳಿಕ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
`ಯಡಿಯೂರಪ್ಪ ರಾಜ್ಯದಲ್ಲಿ ಉತ್ತಮ ಕೆಲಸ ಮಾಡಿದ್ದನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಯಡಿಯೂರಪ್ಪ ಅವರು ಈಶ್ವರಪ್ಪ ಅವರಿಗೆ ಗುರು. ಹೀಗಾಗಿ ಅವರ ನಡುವಿನ ಭಿನ್ನಮತವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ~ ಎಂದರು. ರಾಜ್ಯಪಾಲರಿಂದಾಗಿಯೇ ಲೋಕಾಯುಕ್ತ ನೇಮಕಾತಿ ವಿಳಂಬವಾಗುತ್ತಿದೆ ಎಂದೂ ಅವರು ದೂರಿದರು.